Get Updates
Get notified of breaking news, exclusive insights, and must-see stories!

Kabini Dam: ಕಬಿನಿಯಲ್ಲಿ ತಗ್ಗಿದ ನೀರಿನ ಮಟ್ಟ, ಮೈಸೂರು ಜಿಲ್ಲೆಯ ರೈತರಿಗೆ ಆತಂಕ ಶುರು

ಮೈಸೂರು, ಆಗಸ್ಟ್‌, 25: ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ನೀರನ್ನು ನಂಬಿ ಭತ್ತ ಬೆಳೆಯಲು ಮುಂದಾಗಿದ್ದ ರೈತರಲ್ಲಿ ಇದೀಗ ಆತಂಕ ಶುರುವಾಗಿದೆ. ಕಾರಣ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಮಟ್ಟ ತಗ್ಗಿದ್ದು, ಮಳೆ ಬರುವ ಲಕ್ಷಣಗಳು ಕಾಣದಿರುವುದರಿಂದ ಮುಂದೇನು ಎಂಬ ಚಿಂತೆ ಇಲ್ಲಿನ ಜನರಲ್ಲಿ ಆವರಿಸಿದೆ.

ಇಷ್ಟರಲ್ಲೇ ಮುಂಗಾರು ಮಳೆ ಅಬ್ಬರಿಸಬೇಕಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯದ ಕಾರಣ ತಗ್ಗಿರುವ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದು ಕಷ್ಟಸಾಧ್ಯವಾಗಿದೆ. ಒಂದು ವೇಳೆ ಹಿಂಗಾರು ಮಳೆ ಸುರಿದರೆ ಜಲಾಶಯಕ್ಕೆ ಜೀವಕಳೆ ಬರಬಹುದೇನೋ? ಆದರೆ ಭರ್ತಿಯಾಗುವಷ್ಟರ ಮಟ್ಟಿಗೆ ನೀರು ಹರಿದು ಬರುತ್ತಾ? ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದೆ.

Kabini Dam: Water level Low in Kabini Dam, Mysuru districts farmers worried

ಆಗಸ್ಟ್ ತಿಂಗಳಲ್ಲಿ ಪ್ರತಿವರ್ಷ ಎಡಬಿಡದೆ ಸುರಿಯುತ್ತಿದ್ದ ಆಶ್ಲೇಷಾ ಮತ್ತು ಮಗೆ ಮಳೆ ಕೈಕೊಟ್ಟಿದೆ. ಇದರಿಂದ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಭರ್ತಿಯಾಗಿದ್ದ ಜಲಾಶಯದಿಂದ ಹೆಚ್ಚಿನ ನೀರನ್ನು ಮುಂಭಾಗದ ನದಿಗೆ ಹರಿಸಿದ್ದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ದಿನದಿಂದ ದಿನಕ್ಕೆ ಕುಸಿತ ಕಾಣಿಸಿದೆ.

ಕಬಿನಿಯಲ್ಲಿ ನೀರಿನ ಮಟ್ಟ ಕುಸಿತ

ಕೇರಳದ ವೈನಾಡು ಮತ್ತು ಜಲಾಶಯದ ಹಿನ್ನೀರಿನಲ್ಲಿ ಕಳೆದ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಹದಿನೈದು ದಿನದ ಅಂತರದಲ್ಲಿ ಜಲಾಶಯ ಭರ್ತಿಗೊಂಡಿತ್ತು. ಆದರೆ ಎಲ್ಲವೂ ಸರಿಹೋಯಿತು ಎಂದು ಖುಷಿಪಡುತ್ತಿರುವಾಗಲೇ ಆಗಸ್ಟ್ ತಿಂಗಳಲ್ಲಿ ಮಳೆ ಬಾರದೆ ವಿರಾಮ ನೀಡಿರುವುದು, ಜೊತೆಗೆ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆದಿರುವುದು ರೈತರನ್ನು ಚಿಂತೆಗೆ ತಳ್ಳಿದೆ.

ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರಬಿಟ್ಟಿದ್ದರಿಂದ ಗರಿಷ್ಟ 2,284 ಅಡಿ ಸಂಗ್ರಹ ಮಟ್ಟದ ಜಲಾಶಯದಲ್ಲಿ ಈಗ 2275.72 ಅಡಿಯಷ್ಟು ನೀರಿದೆ. ಜಲಾಶಯ ಪಕ್ಕದ ಸುಭಾಷ್ ಪವರ್ ಹೌಸ್ ಮೂಲಕ ನಿತ್ಯ 5 ಸಾವಿರ ಕ್ಯೂಸೆಕ್, ಬಲದಂಡೆ ನಾಲೆಗೆ 2,300 ಕ್ಯೂಸೆಕ್, ಎಡದಂಡೆ ನಾಲೆಗೆ 25 ಕ್ಯೂಸೆಕ್ ನೀರು ಹರಿಸಿದ್ದರಿಂದ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿದೆ.

ನೀರಿಲ್ಲದೆ ಅನ್ನದಾತರ ಪರದಾಟ

ಜಲಾಯಶದಲ್ಲಿ ನೀರಿನ ಪ್ರಮಾಣ ತಗ್ಗಿರುವುದು ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭಯವನ್ನುಂಟು ಮಾಡಿದೆ. ಈ ಬಾರಿ ಜಲಾಶಯ ಭರ್ತಿಯಾಗಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಬಲ ಮತ್ತು ಎಡದಂಡೆ ನಾಲೆಗಳಿಗೆ ಹಂತ ಹಂತವಾಗಿ ನೀರು ಹರಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ನಂತರ ಹೇಳಿದಂತೆ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ನೀರು ಹರಿಸಿದ್ದರು.

ಇದರಿಂದ ಖುಷಿಯಾದ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ಭತ್ತ ಬೆಳೆ ಬೆಳೆಯಲು ಮುಂದಾಗಿ ತಮ್ಮ ಹೊಲ ಗದ್ದೆಗಳನ್ನು ಹದ ಮಾಡಿ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಜಲಾಶಯದ ಅಧಿಕಾರಿಗಳ ಮೂಲಗಳ ಪ್ರಕಾರ ಸುಪ್ರೀಂಕೋರ್ಟ್ ಅದೇಶ ಪಾಲನೆ ಜೊತೆಗೆ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರಿನಲ್ಲಿ ಮಳೆ ತೀರಾ ಕ್ಷೀಣಿಸಿದ್ದು, ಜಲಾಶಯದ ಸಂಗ್ರಹ ಮಟ್ಟದಲ್ಲೂ ಭಾರೀ ಇಳಿಮುಖವಾಗಿರುವುದರಿಂದ ಭತ್ತದ ಬೆಳೆಗೆ ನೀರು ಹರಿಸುವುದು ಕಷ್ಟವಾಗುತ್ತದೆ ಎನ್ನಲಾಗುತ್ತಿದೆ.

ರೈತರಲ್ಲಿ ಮನೆ ಮಾಡಿದ ಆತಂಕ

ಇದೇ ರೀತಿಯಾದರೆ ಭತ್ತದ ಕೃಷಿಗೆ ಮುಂದಾಗಿರುವ ರೈತರ ಕಥೆಯೇನು? ಎಂಬ ಪ್ರಶ್ನೆ ಕಾಡುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಬಂದರೆ ರೈತರು ಬದುಕಬಹುದೇನೋ? ಇಲ್ಲದೆ ಹೋದರೆ ಸಂಕಷ್ಟ ತಪ್ಪಿದಲ್ಲ. ಇನ್ನೊಂದೆಡೆ ಭರ್ತಿಯಾದ ಜಲಾಶಯಕ್ಕೆ ಬಾಗಿನ ಅರ್ಪಿಸದೆ ನೇರವಾಗಿ ತಮಿಳುನಾಡಿಗೆ ನೀರು ಹರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತಂತೆ ಮಾತನಾಡಿರುವ ಅಚ್ಚುಕಟ್ಟು ಪ್ರದೇಶದ ರೈತ ಹೋರಾಟಗಾರ ಹೆಚ್.ಬಿ.ಶಿವಲಿಂಗಪ್ಪ ಅವರು, ಈ ಬಾರಿ ಜಲಾಶಯ ತುಂಬಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು ನೀರು ಸಿಗುತ್ತದೆ ಎಂಬ ಅಶಾಭಾವನೆಯಿಂದ ಭತ್ತದ ಕೃಷಿಗೆ ನಮ್ಮ ಹೊಲ ಗದ್ದೆಗಳನ್ನು ಹದಮಾಡಿ ನಾಟಿಗೆ ತಯಾರಿ ಮಾಡಿಕೊಂಡಿದ್ದಾರೆ.

ಭತ್ತದ ಕೃಷಿಗೆ ನೀರು ನೀಡುವುದ ಕಷ್ಟ

ಇದೀಗ ಭರ್ತಿಯಾಗಿದ್ದ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿ ಮಳೆ ಕೊರತೆ, ಭತ್ತಕ್ಕೆ ನೀರು ಕೊಡಲ್ಲ ಅಂದರೆ ನಾವು ಏನು ಮಾಡ್ಬೇಕು? ಭತ್ತ ಬೆಳೆಗೆ ನೀರು ಕೊಡದ್ದೀದ್ದರೇ ನಾವೂ ಬಿಡುವುದಿಲ್ಲ, ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಬಿನಿ ಜಲಾಶಯದ ಎಕ್ಸಿಕ್ಯೂಟೀವ್ ಇಂಜಿನಿಯರ್ ಚಂದ್ರಶೇಖರ್ ಅವರು, ಅಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ ಸುರಿಯಬೇಕಿದ್ದ ಮಳೆ ಸಂಪೂರ್ಣ ಕ್ಷೀಣಿಸಿದೆ. ಜಲಾಶಯಕ್ಕೆ ಹರಿದುಬರುತ್ತಿದ್ದ ಒಳ ಹರಿವು ಕಡಿಮೆಯಾಗಿದೆ. ಈ ಬಾರಿ ಭತ್ತದ ಬೆಳೆಗೆ ನೀರು ಕಷ್ಟ, ಭತ್ತಕ್ಕೆ ನೀರು ಕೊಡುತ್ತೇವೆ ಎಂದು ನಾವೂ ಹೇಳಿಲ್ಲ. ಆದರೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ. ಆದರೆ ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+