ನಾನೇನು ಉಶ್ಶಿ ಮಾಡಿ ಡ್ಯಾಂ ತುಂಬಿಸಬೇಕಾ?: ಛೀ!

ಏನಪಾ ಅಂದರೆ 'ಕುಡಿಯೋಕೆ ನೀರು ಒದಗಿಸಿ' ಎಂದು ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಿ ಸೊಲ್ಲಾಪುರ ಭಾಗದ ಬರಪೀಡಿತ ರೈತರು ಭೈಯ್ಯಾ ದೇಶಮುಖ್ ನೇತೃತ್ವದಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿ ಎರಡು ತಿಂಗಳಿಂದ ನಿರಶನ ಕೈಗೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ರೈತರ ಮುಖದ ಮೇಲೆ ಹೊಡೆದಂತೆ ಹಗುರವಾದ ಮಾತನ್ನಾಡಿ, ರೈತರ ಅವಹೇಳನ ಮಾಡಿದ್ದಾರೆ- 'ಕುಡಿಯೋಕ್ಕೆ ಎಲ್ಲಿಂದ ನೀರು ತಂದು ಕೊಡೋದು? ನಾನೇನು ಸು ಸೂ ಮಾಡಿ ಡ್ಯಾಮ್ ಗಳನ್ನು ತುಂಬಿಸಲಿಕ್ಕಾಗುತ್ತಾ? ಕುಡಿಯಲು ನೀರು ಸಿಗದಿರುವಾಗ ಮೂತ್ರ ಬರುವುದೂ ಕಷ್ಟವೇ, ತಿಳಿದುಕೊಳ್ಳಿ' ಎಂದಿದ್ದಾರೆ.
ಅಷ್ಟೇ ಅಲ್ಲ. ಈ ಉಪಮುಖ್ಯಮಂತ್ರಿ ಸಾಹೇಬ 'ರಾತ್ರಿ ವೇಳೆ ಕರೆಂಟ್ ಇಲ್ಲಾಂದ್ರೆ ಜನರ ಕೈಯಲ್ಲಿ ಇನ್ನೇನು ಮಾಡೋಕೆ ಸಾಧ್ಯ. ಕೇವಲ ಜನಸಂಖ್ಯೆಯನ್ನು ಹೆಚ್ಚಿಸಬಲ್ಲರು ಅಷ್ಟೇ' ಎಂದೂ ಲೇವಡಿಯಾಡಿದ್ದಾರೆ.
ಅಣೆಕಟ್ಟೆಗಳಲ್ಲಿನ ನೀರನ್ನು ಮೊದಲ ಕುಡಿಯುವ ನೀರಿನ ಯೋಜನೆಗಳಿಗೆ ಬಿಡುಗಡೆ ಮಾಡಬೇಕೆಂಬುದು ರಾಜ್ಯ ಸರಕಾರದ ನೀತಿಯಾಗಿದೆ. ಆದರೆ ಈ ನೀತಿಯನ್ನು ಸ್ವತಃ ಸರಕಾರವೇ ಉಲ್ಲಂಘಿಸಿದ್ದು ಕಬ್ಬಿನ ಗದ್ದೆಗಳಿಗೆ ಭಾರಿ ಪ್ರಮಾಣದಲ್ಲಿ ನೀರನ್ನು ಹರಿಬಿಡುತ್ತಿದೆ. ಆದ್ದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಎಂಬ ಆತಂಕಕಾರಿ ವಿಷಯ ಆರ್ಟಿಐ ಮಾಹಿತಿಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜನರು ಸಂಪು ಹೂಡಿದ್ದಾರೆ.
ಪವಾರ್ ಕುಟುಂಬದ ಒಡೆತನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಬ್ಬು ಅರೆಯುವ ಕಾರ್ಖಾನೆಗಳಿರುವುದರಿಂದ ಕಬ್ಬಿನ ಉತ್ಪಾದನೆಗಾಗಿ ಅಣೆಕಟ್ಟುಗಳಲ್ಲಿ ನೀರಿನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.












Click it and Unblock the Notifications