ಲಾಲ್ ಬಾಗ್ ಸಂಸತ್ ಭವನದಲ್ಲಿ 'ಗುಲಾಬಿ' ಅಧಿವೇಶನ
ಬೆಂಗಳೂರು, ಆಗಸ್ಟ್ 11 : ಈ ಸಂಸತ್ ಭವನಕ್ಕೆ ಬರುವವರು ಸಂಸತ್ ಸದಸ್ಯರಾಗಿರಬೇಕಿಲ್ಲ. ಜನರಿಂದ ಗೆದ್ದು ಬಂದವರೂ ಆಗಬೇಕಿಲ್ಲ. ಇಲ್ಲಿ ಅಧಿವೇಶನದ ಗಲಾಟೆಯಿಲ್ಲ, ಮೇಜು ಕುಟ್ಟುವ ಸಂಪ್ರದಾಯವೂ ಇಲ್ಲಿಲ್ಲ. ಇದು ಹೂವಿನ ಸಂಸತ್ ಭವನ. ಇದು ಜಿಡ್ಡು ಗಟ್ಟಿದ ಮನಸ್ಸಿಗೆ ಮುದ ನೀಡುವ ಸಂಸತ್ ಭವನ..
ಸಸ್ಯಕಾಶಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಕೆಂಪು ಮತ್ತು ಬಿಳಿ ಹೂಗಳಿಂದ ಅಲಂಕೃತ ಸಂಸತ್ ಭವನವನ್ನು ಈ ಬಾರಿ ಕಣ್ಣು ತುಂಬಿಕೊಳ್ಳದಿದ್ದರೆ ಒಂದು ತೃಪ್ತ ಭಾವ ಕಳೆದುಕೊಳ್ಳುತ್ತೇವೆ.[ಗುಲಾಬಿಯ ಸಂಸತ್ ಭವನದ ಚಿತ್ರಗಳು]
ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ, ಶನಿವಾರ ಮತ್ತು ಭಾನುವಾರ ವಾರದ ರಜೆ, ಸೋಮವಾರ ಸ್ವಾತಂತ್ರ್ಯ ದಿನ. ಹೌದಲ್ಲ! ನಾಲ್ಕು ದಿನ ರಜೆ ಇದೆಯಲ್ಲ, ಏನು ಮಾಡೋದು ಎಂದು ಪ್ಲ್ಯಾನ್ ಹಾಕುತ್ತಿರುವವರನ್ನು ಲಾಲ್ ಬಾಗ್ ಕೈಬೀಸಿ ಕರೆಯುತ್ತಿದೆ.[ಬೆಂಗಳೂರು ಹೂವಿನ ಅರಮನೆ ನೋಡದಿದ್ದರೆ ನಿಮಗೇ ನಷ್ಟ]
ಹೌದು.. ಈ ಬಾರಿ ಹೂಗಳು ಬಾಡದಂತೆ ನೀರಿನ ಸ್ಪಿಂಕ್ಲರ್ ಅಳವಡಿಸಿರುವುದು ವಿಶೇಷ, ಹಾಗಾಗಿ ಎಷ್ಟೇ ದಿನ ಕಳೆದರೂ ಹೂಗಳು ನಳನಳಿಸುತ್ತ ಮೊದಲ ದಿನ ಹೇಗಿತ್ತೋ ಹಾಗೆಯೇ ಇದೆ. ಬನ್ನಿ, ನಾವು ಲಾಲ್ ಬಾಗ್ ನಲ್ಲಿ ಒಂದು ರೌಂಡ್ ಹಾಕಿಕೊಂಡು ಬರೋಣ...
ಪ್ರವೇಶ ಶುಲ್ಕ : ಎಲ್ಲಾ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ತನಕ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 50, ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕವಿದೆ. ರಜಾ ದಿನಗಳಲ್ಲಿ ವಯಸ್ಕರು 60, ಮಕ್ಕಳು 20 ರೂ. ಶುಲ್ಕ ಪಾವತಿ ಮಾಡಬೇಕು.

ಆಗಸ್ಟ್ 15ರವರೆಗೆ ಇದೆ
ಆಗಸ್ಟ್ 15ರವರೆಗೆ ಗುಲಾಬಿ ಹೂವಿನ ಸಂಸತ್ ಭವನವನ್ನು ಕಣ್ಣು ತುಂಬಿಕೊಳ್ಳಬಹುದು. ಅದಾದ ಮೇಲೂ ಒಂದೆರಡು ದಿನ ಪ್ರದರ್ಶನ ಮುಂದುವರಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಕೆಂಪು-ಬಿಳಿ ಗುಲಾಬಿ ಕಾಂಬಿನೇಶನ್
ಕೆಂಪು ಮತ್ತು ಬಿಳಿ ಗುಲಾಬಿ ಕಾಂಬಿನೇಶನ್ ನಲ್ಲಿ ಲಾಲ್ ಬಾಗ್ ಗಾಜಿನ ಮನೆಯಲ್ಲಿ ಸಂಸತ್ ಭವನ ಎದ್ದು ನಿಂತಿದೆ. ಸುಮಾರು 60 ಅಡಿ ಸುತ್ತಳತೆಯ ಭವನ ಸುತ್ತು ಹಾಕಿ ಬಂದಾಗ ಮನಸ್ಸು ಪ್ರಫುಲ್ಲವಾಗುವುದು ಖಂಡಿತ.

ಸೆಲ್ಫಿ ಕ್ರೇಜ್
ಪ್ರದರ್ಶನಕ್ಕೆ ಸಂಜೆ ವೇಳೆ ಅತಿ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ, ಸ್ನೇಹಿತರೊಂದಿಗೆ ಆಗಮಿಸಿದ್ದವರು ಸಂಸತ್ ಭವನದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತು.

ಪ್ರಥಮ ಚಿಕಿತ್ಸೆ
ನಾಗರಿಕರಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗಲು ಗಾಜಿನ ಮನೆ ಪಕ್ಕದಲ್ಲಿಯೇ ವಾಸವಿ ಆಸ್ಪತ್ರೆಯವರು ಚಿಕಿತ್ಸಾ ಘಟಕವೊಂದನ್ನು ನಿರ್ಮಿಸಿದ್ದಾರೆ. ಆಂಬುಲೆನ್ಸ್ ಸಹ ವ್ಯವಸ್ಥೆ ಮಾಡಲಾಗಿದೆ.

ಕಸ ಹಾಕಬೇಡಿ
ಪ್ರದರ್ಶನ ವಿಕ್ಷಣೆಗೂ ತೆರಳುವ ಮುನ್ನ ನಮ್ಮ ಬೆಂಗಳೂರು ಪ್ರತಿಷ್ಠಾನದ ಇಬ್ಬರು ಸದಸ್ಯರು ನಿಮ್ಮ ಕಣ್ಣಿಗೆ ಬೀಳುತ್ತಾರೆ. ಸುಂದರ ಬೆಂಗಳೂರು, ಸ್ವಚ್ಛ ಬೆಂಗಳೂರು, ಕಸ ಎಸೆಯಬಾರದು ಎಂಬ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿತಾಮಹನ ಸ್ಮರಣೆ
ತೋಟಗಾರಿಕಾ ಪಿತಾಮಹ ಡಾ. ಎಂ. ಎಚ್ ಮರೀಗೌಡರವರ ಜನ್ಮ ಶತಮಾನೋತ್ಸವದ ಸ್ಮರಣೆಯನ್ನು ಪ್ರದರ್ಶನದ ಸಂದರ್ಭದಲ್ಲಿ ಮಾಡಿಕೊಳ್ಳಲಾಗಿದೆ.

ನರ್ಸರಿ ಗಿಡಗಳು
ನರ್ಸರಿ ಗಿಡಗಳು, ಹೂ ಕುಂಡಗಳು, ತುಳಸಿ ಗಿಡಗಳು ಸೇರದಂತೆ ವಿವಿಧ ಸಸ್ಯ ಸಂಪತ್ತು ಪ್ರದರ್ಶನದಲ್ಲಿ ಮಾರಾಟಕ್ಕೂ ಇದೆ.

ಒಂದೇ ಕಡೆ ಎಲ್ಲ ಹೂಗಳು
ಒಂದೇ ಕಡೆ ಇಷ್ಟು ಬಗೆಯ ಹೂಗಳನ್ನು ನೋಡಲು ಸಾಧ್ಯವಾಗಿರುವುದು ನಿಜಕ್ಕೂ ಸಂತಸ ಮತ್ತು ಖಷಿಯ ವಿಚಾರ. ಸ್ನೇಹಿತರೊಂದಿಗೆ ಇನ್ನೊಮ್ಮೆ ಭೇಟಿ ನೀಡುತ್ತೇನೆ ಎಂದು ಬೆಂಗಳೂರು ನಿವಾಸಿ ಆಶಾ ಭಟ್ ಹೇಳುತ್ತಾರೆ.

ಚೆನ್ನಾಗಿದೆ
ಪ್ರದರ್ಶನಕ್ಕೆ ತಾಯಿಯೊಂದಿಗೆ ಆಗಮಿಸಿದ್ದ ಜಯನಗರ ಮೂರನೇ ಹಂತದ ನಿವಾಸಿ ಮಕ್ಕಳು ಹೂಗಳೊಂದಿಗೆ ತಾವು ಸಂಭ್ರಮಿಸಿದರು.

ಅದ್ಭುತ
ದೆಹಲಿನ್ನು ನೋಡಿಕೊಂಡು ಬೆಂಗಳೂರಿಗೆ ಬಂದೆವು. ಆನ್ ಲೈನ್ ನಲ್ಲಿ ಪ್ರದರ್ಶನದ ಮಾಹಿತಿ ಸಿಕ್ಕಿತು. ನಿಜಕ್ಕೂ ಇದು ಅದ್ಭುತ ಎಂದು ಸ್ಪೇನ್ ನಿಂದ ಆಗಮಿಸಿರುವ ವಿದೇಶಿಯರ ತಂಡ ಸಂಭ್ರಮ ವ್ಯಕ್ತಪಡಿಸಿತು.

ತೋಟಗಾರಿಕಾ ಇಲಾಖೆಗೆ ಧನ್ಯವಾದ
ಜನರಿಗೆ ಇಂಥ ಸುಂದರ ಲೋಕ ಕಟ್ಟಿಕೊಟ್ಟ ತೋಟಗಾರಿಕಾ ಇಲಾಖೆಗೆ ಧವ್ಯವಾದ ಹೇಳಬೇಕು ಎಂದು ಮುತ್ಯಾಲ ನಗರದ ದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಮ್ಮೆ ಪಡಬೇಕು
ಲಾಲ್ ಬಾಗಿನಲ್ಲಿ ಪ್ರತಿ ವೇಳೆ ಪ್ರದರ್ಶನ ನಡೆದಾಗಲೂ ಸ್ನೇಹಿತರೊಂದಿಗೆ ಭೇಟಿ ನೀಡುತ್ತಿದ್ದೇನೆ. ಇದು ಬೆಂಗಳೂರಿನ ಹೆಮ್ಮೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಹೇಳಿದರು.












Click it and Unblock the Notifications