ಎಲೆಚುಕ್ಕೆ ರೋಗಕ್ಕೆ ಔಷಧಿ ಲಭಿಸಿದರೆ ಕೂಡಲೇ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ
ಚಿಕ್ಕಮಗಳೂರು , ನವೆಂಬರ್ 15: ವಾಣಿಜ್ಯ ಬೆಳೆಯಾಗಿರುವ ಹಾಗೂ ಮಲೆನಾಡಿನ ಭಾಗದ ರೈತರ ಪ್ರಮುಖ ಬೆಳೆಯಾದ ಅಡಿಕೆಗೆ ಎಲೆ ಚುಕ್ಕೆ ರೋಗ ಬಾಧಿಸುತ್ತಿದೆ. ಈ ರೋಗಕ್ಕೆ ಮೂಲಕಾರಣ ಏನು?, ಔಷಧಿ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿ ಚಿಕಿತ್ಸಾ ಮಾರ್ಗ ಕಂಡುಹಿಡಿದರೆ ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪೊಲೀಸ್ ತರಬೇತಿ ಕೇಂದ್ರಕ್ಕೆ ಬಂದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅಧಿಕ ಲಾಭ ತಂದುಕೊಡುವ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಕಾಡುತ್ತಿದೆ. ಈ ರೋಗ ನಿವಾರಣೆ ಮತ್ತು ಅದು ಹರಡದಂತೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಈಗಾಗಲೇ ಕಾಯೋನ್ಮುಖವಾಗಿದೆ ಎಂದರು.
ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆ ಹೆಚ್ಚು ಬೆಳೆಯಲಾಗುತ್ತದೆ. ಅಡಿಕೆ ಬೆಳೆಗೆ ತಗುಲಿರುವ ಎಲೆಚುಕ್ಕೆ ರೋಗದ ಪರಿಹಾರ ದಾರಿ ಕಂಡು ಹಿಂಡಿಯುವಲ್ಲಿ ಕೃಷಿ ವಿಶ್ವವಿದ್ಯಾಲಯಗಳು, ಸಂಬಂಧಪಟ್ಟ ಇಲಾಖೆಗಳು, ಕೇಂದ್ರ ಸರ್ಕಾರದ ಸಂಸ್ಥೆಗಳು ಕೆಲಸ ಮಾಡುತ್ತಿವೆ. ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರೋಗಕ್ಕೆ ಔಷಧಿ ಸಿಂಪಡನೆಗೆಂದು 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

ಇಷ್ಟೆಲ್ಲ ಕ್ರಮ ಕೈಗೊಳ್ಳಲಾಗಿದ್ದರೂ ಸಹ ಬೆಳೆಗೆ ರೋಗ ಬಾಧಿಸುತ್ತಿದೆ. ಒಂದು ವೇಳೆ ರೋಗಕ್ಕೆ ಮೂಲಕಾರಣ ಏನು?, ಯಾವ ಔಷಧಿ ಸಿಂಪಡಿಸಿದರೆ ಈ ರೋಗ ತಡೆಯಬಹುದು ಎಂದೆಲ್ಲ ವಿಜ್ಞಾನಿಗಳು ಚಿಕಿತ್ಸೆಯ ಮಾರ್ಗ ಕಂಡು ಕೊಂಡರೆ ಸರ್ಕಾರ ಅದರಂತೆ ಕ್ರಮ ಕೈಗೊಳ್ಳಲು ಸಿದ್ಧವಿದೆ. ಸದ್ಯ ಈ ಎಲೆಚುಕ್ಕೆ ರೋಗ ದೊಡ್ಡ ಪ್ರಮಾಣದಲ್ಲಿ ಹರುಡುತ್ತಿದ್ದು, ಸರ್ಕಾರ ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿದೆ ಎಂದು ವಿವರಿಸಿದರು.
ಬೆಳೆಹಾನಿಗೆ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿದೆ: ಸಿಎಂ
ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ರಾಜ್ಯ ಸರ್ಕಾರ ಈಗಾಗಲೇ ದುಪ್ಪಟ್ಟು ಪರಿಹಾರ ನೀಡಿದೆ. ಈಗಾಗಲೇ 99 ಕೋಟಿ ರೂ.ನಷ್ಟು ಹಣವನ್ನು ಬೆಳೆ ಪರಿಹಾರವಾಗಿ ಸರ್ಕಾರ ರೈತರ ಖಾತೆಗೆ ಹಾಕಿದೆ. ಜಿಲ್ಲಾಡಳಿತವು ಬೆಳೆನಾಶಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೇ ನಡೆಸಿ ವರದಿ ನೀಡಿದರೆ, ಅದಕ್ಕೂ ಸರ್ಕಾರ ಸ್ಪಂದಿಸಿ ಪರಿಹಾರ ನೀಡಲಿದೆ ಎಂದರು.
ಈ ಹಿಂದೆ ಬೆಳೆ ನಾಶವಾಗಿ ಒಂದು ವರ್ಷವಾದ ನಂತರ ಪರಿಹಾರ ದೊರೆಯುತ್ತಿತ್ತು. ಆದರೆ ರಾಜ್ಯದಲ್ಲಿ ಸ್ಪಂದನಾಶೀಲ ಸರ್ಕಾರವಿರುವುದರಿಂದ ರೈತರ ನೆರವು, ರಕ್ಷಣೆ ಕೂಡಲೇ ಧಾವಿಸಲಾಗುತ್ತಿದೆ. ಬೆಳೆ ಹಾನಿಗೀಡಾದ ಒಂದೂವರೆ ತಿಂಗಳೊಳಗೆ ಬೆಳೆ ಪರಿಹಾರ ರೈತರಿಗೆ ಸಿಗುತ್ತಿದೆ ಎಂದು ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ದೆಹಲಿಗೆ ರಾಜ್ಯ ನಿಯೋಗ
ಅಡಿಕೆ ಬೆಳೆಗೆ ಚುಕ್ಕೆ ರೋಗ ಕಾಣಿಸಿಕೊಂಡು ತಿಂಗಳುಗಳು ಕಳೆಯುತ್ತಿವೆ. ಈ ಹಿಂದೆಯೇ ಕರ್ನಾಟಕ ರಾಜ್ಯ ಅಡಿಕೆ ಟಾಸ್ಕ್ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಔಷಧಿ ಸಿಂಪಡಣೆಗೆ ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದರು. ಜೊತೆಗೆ ಸಂಸದರು, ಶಾಸಕರು ಸೇರಿದಂತೆ ರಾಜ್ಯ ನಾಯಕರ ನಿಯೋಗವನ್ನು ದೆಹಲಿಗೆ ಕೊಂಡ್ಯೊಯ್ದಿದ್ದರು. ಕೇಂದ್ರ ನಾಯಕರಿಗೆ ರಾಜ್ಯದ ರೈತರ ಸಮಸ್ಯೆ ಬಗ್ಗೆ ತಿಳಿಸಿ ಸ್ಪಂದಿಸುವಂತೆ ಕೋರಿದ್ದರು.












Click it and Unblock the Notifications