ಮುಸುಕಿನ ಜೋಳ ಸುಳಿಕೊರಕ ಹುಳುವಿನ ಹತೋಟಿಗೆ ಕ್ರಮಗಳು
ಚಿತ್ರದುರ್ಗ ಜಿಲ್ಲೆಯಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಮುಸುಕಿನ ಜೋಳ ಬಿತ್ತನೆ ಮಾಡಲಾಗುತ್ತಿದೆ. ಬೆಳವಣಿಗೆಯ ಹಂತದಲ್ಲಿ ರಸ ಹೀರುವ ಮತ್ತು ಎಲೆ ತಿನ್ನುವ ಕೀಟಗಳು ಕಂಡುಬರುತ್ತದೆ.
ಆದರೆ ಇತ್ತೀಚಿನ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳದ ಬೆಳೆಗೆ ಎಲೆ ಮತ್ತು ಸುಳಿ ತಿನ್ನುವ ಹುಳು (Spodoptera frugiperda) ಕಾಂಡ ಕೊರಕ ಹಾಗೂ ಎಲೆ ತಿನ್ನುವ ಹುಳುವಿನ ಬಾಧೆ ಕಂಡುಬಂದಿದೆ. ಈ ಹುಳುವಿನ ನಿಯಂತ್ರಣಕ್ಕಾಗಿ ಕೃಷಿ ಇಲಾಖೆಯಿಂದ ನಿರ್ವಹಣೆ ಮಾರ್ಗೋಪಾಯ ತಂತ್ರಗಳನ್ನು ನೀಡಲಾಗಿದೆ.
ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಗಂಟುರೋಗ ಬಾಧೆ; ಆತಂಕದಲ್ಲಿ ರೇಷ್ಮೆ ಉದ್ಯಮ
ಹುಳುವಿನ ಜೀವನ ಚಕ್ರ: ಪ್ರೌಢ ಹೆಣ್ಣು ಪತಂಗವು ನಸು ಕಂದು ಮಿಶ್ರಿತ ಬಣ್ಣವನ್ನು ಹೊಂದಿದ್ದು, ಎಲೆಗಳ ಮೇಲೆ ಸುಮಾರು 900 ರಿಂದ 1500 ಗಳಂತೆ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯಿಂದ 5 ರಿಂದ 6 ದಿನಗಳಲ್ಲಿ ಹಸಿರು ಬಣ್ಣದಿಂದ ಕೂಡಿರುವ ಮರಿ ಹುಳುಗಳು ಹೊರ ಬರುತ್ತವೆ. ನಂತರದ ದಿನಗಳಲ್ಲಿ ಅವು ಬೆಳೆದಂತೆ ಮುಸುಕಿನ ಜೋಳದ ಸುಳಿ ಎಲೆಗಳನ್ನು ತಿನ್ನುತ್ತವೆ.
ಬೆಳವಣಿಗೆ ಹಂತದಲ್ಲಿರುವ ಮರಿ ಹುಳುಗಳು ಸಂಜೆ ಹೊತ್ತಿನಲ್ಲೇ ಸುಳಿ ಎಲೆಗಳನ್ನು ತಿಂದು ಗಿಡಗಳಲ್ಲಿ ಲದ್ದಿಯನ್ನು ಇಡುತ್ತವೆ. ಇದರಿಂದ ಗಿಡಗಳು ಬೆಳೆದಂತೆ ಹಾನಿಗೊಳಗಾಗಿರುವ ಎಲೆಗಳು ನಾಶ ಹೊಂದಿ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಪಿಎಂ ಕುಸುಮ ಯೋಜನೆ ಫಲಾನುಭವಿಗಳಾಗಲು ಇಲ್ಲಿದೆ ಮಾಹಿತಿ..
ಹುಳುಗಳ ಮರಿಯನ್ನು ಸಂಗ್ರಹಿಸಿ ನಾಶಪಡಿಸುವುದು
ರೈತರು ಸಾಧ್ಯವಾದಲ್ಲಿ ಹುಳುಗಳ ಮರಿಯನ್ನು ಸಂಗ್ರಹಿಸಿ ನಾಶಪಡಿಸುವುದು. ಜೈವಿಕ ನಿಯಂತ್ರಣಕಾರಕಗಳಾದ ನ್ಯೂಕ್ಲಿಯಾರ್ ಪಾಲಿ ಹೈಡ್ರೋಸಿಸ್ ವೈರಸ್ ಹಾಗೂ ಕೀಟ ನಿಯಂತ್ರಕ ಶಿಲೀಂದ್ರಗಳಾದ ನಮೂರಿಯಾ ರೀಲಿಯಿ ಮತ್ತು ಮೆಟಾರೈಜಿಯಂ ಅಸೊಪ್ಲಿಯೆವನ್ನು ಬಳಸಬಹುದು. ತತ್ತಿ ಪರಾವಲಂಬಿ ಕೀಟಗಳಾದ ಟ್ರೈಕೋಗ್ರಾಮ ಮತ್ತು ಟೆಲಿಮೋನಸ್ ಬಿಡುಗಡೆಗೊಳಿಸಿ ಕೀಟದ ತತ್ತಿಗಳನ್ನು ನಾಶಗೊಳಿಸಬಹುದು.
ರಾಸಾಯನಿಕ ಔಷಧಿಗಳನ್ನು ಬಳಸುವ ಕ್ರಮಗಳು:
ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಕ್ಲೋರೋಪೈರಿಫಾಸ್ ಅಥವಾ ಕ್ವಿನಾಲ್ಫಾಸ್ ಅನ್ನು ಬೆರೆಸಿ ಸುಮಾರು 250 ಲೀ. ನೀರನ್ನು ಪ್ರತಿ ಎಕರೆಗೆ ಸಿಂಪಡಿಸಬೇಕು. ಕಾರ್ಬೋಫ್ಯುರಾನ್ ಹರಳುಗಳನ್ನು 4 ರಿಂದ 5 ಕೆಜಿ, ಪ್ರತಿ ಎಕರೆಗೆ ಮರಳಿನೊಂದಿಗೆ ಬೆರೆಸಿ ಗಿಡದ ಸುಳಿಗಳಿಗೆ 3 ರಿಂದ 4 ಹರಳುಗಳು ಬೀಳುವ ಹಾಗೆ ಹಾಕುವುದು. ಹುಳುಗಳ ಬಾಧೆ ಹೆಚ್ಚಿದ್ದಲ್ಲಿ ಇಮಾಮೆಕ್ಟಿನ್ ಬೆಂಚೋಯೆಟ್ 0.4 ಗ್ರಾಂ, ಪ್ರತಿ ಲೀ. ನೀರಿಗೆ ಅಥವಾ ಲ್ಯಾಮ್ಡಾ ಸೈಲೊಥ್ರಿನ್ 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು. ಕೀಟನಾಶಕಗಳನ್ನು ಸಂಜೆ ಹೊತ್ತಿನಲ್ಲಿ ಬೆಳೆಗಳ ಎಲೆ ಸುಳಿಗಳು ತೊಯ್ಯುವಂತೆ ಸಾಮೂಹಿಕವಾಗಿ ಸಿಂಪರಣೆ ಮಾಡುವುದರಿಂದ ಹುಳುಗಳನ್ನು ನಿಯಂತ್ರಿಸಬಹುದು.
ಹುಳುಗಳಿಗೆ ವಿಷ ಪಾಷಾಣ ತಯಾರಿಸುವ ವಿಧಾನ:
ಮುಸುಕಿನ ಜೋಳದಲ್ಲಿ ಇರುವ ಹುಳುಗಳಿಗೆ 25 ಕೆಜಿ ತೌಡು ಅಥವಾ ಬೂಸ, 10 ಕೆಜಿ ಬೆಲ್ಲದ ಪುಡಿ, ಅಗತ್ಯಕ್ಕೆ ತಕ್ಕಂತೆ 8 ರಿಂದ 10 ಲೀ. ನೀರು ಇವೆಲ್ಲವನ್ನೂ ಬೆಳಗ್ಗೆ ಮಿಶ್ರಣ ಮಾಡಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ 2 ದಿನ ನೆನೆಸಿ ಹುಳಿಯಾಗಲು ಬಿಟ್ಟು ನಂತರ 250 ಮಿ.ಲೀ. ಮಾನೋಕ್ರೋಟೋಫಾಸ್ ಅಥವಾ ಲ್ಯಾಮ್ಡಾ ಸೈಲೊಥ್ರಿನ್ ಕೀಟನಾಶಕವನ್ನು ಬೆರೆಸಿ ಬಾಧೆಗೊಳಗಾದ ತಾಕಿನಲ್ಲಿ ಮುಸ್ಸಂಜೆಯ ವೇಳೆ ಕೈಗವಚ ಧರಿಸಿ ಮುಸುಕಿನ ಜೋಳದ ಸುಳಿಗಳಿಗೆ ಬೀಳುವ ಹಾಗೆ ಚೆಲ್ಲಬೇಕು.
ರೈತರು ಔಷಧಿಯನ್ನು ಪಡೆಯಲ್ಲೂ ಕೃಷಿ ಇಲಾಖೆಯ ಹೋಬಳಿ ಮಟ್ಟದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಹಾಗೂ ಖಾಸಗಿ ಮಾರಾಟಗಾರರಲ್ಲಿ ಔಷಧಿಗಳು ಲಭ್ಯವಿದ್ದು, ರೈತರು ಇದನ್ನು ಉಪಯೋಗಿಸಿಕೊಂಡು ಮುಸುಕಿನ ಜೋಳ ಬೆಳೆಯಲ್ಲಿ ಹುಳು ಬಾಧೆ ನಿಯಂತ್ರಿಸಲು ಔಷಧೋಪಚಾರ ಕ್ರಮಗಳನ್ನು ಕೈಗೊಳ್ಳಬಹುದು.
ಕೀಟನಾಶಕಗಳ ಸುರಕ್ಷಿತವಾಗಿ ಬಳಸಬೇಕು:
ಕೀಟನಾಶಕಗಳ ಸಿಂಪರಣೆಯನ್ನು ಮುಂಜಾನೆ ಸಮಯದಲ್ಲಿ ಅಂದರೆ ಬೆಳಗ್ಗೆ 11 ಗಂಟೆಯ ತನಕ ಮತ್ತು ಸಂಜೆ 4 ಗಂಟೆ ನಂತರದ ಸಮಯದಲ್ಲಿ ಮಾಡಬೇಕು. ಸಿಂಪರಣೆ ಯಂತ್ರದ ನಾಜಲ್ಗೆ ಏನಾದರೂ ಸಿಕ್ಕಿ ಹಾಕಿಕೊಂಡಿದ್ದರೆ ಬಾಯಿಯಿಂದ ಊದಿ ಸರಪಡಿಸಲು ಯತ್ನಿಸಬಾರದು. ಜೇನುನೊಣ, ದನಕರುಗಳು ಬೆಳೆಯ ಸಮೀಪಕ್ಕೆ ಬರುವ ಸಮಯದಲ್ಲಿ ಸಿಂಪರಣೆ ಮಾಡಬಾರದು. ಕಳೆನಾಶಕಗಳನ್ನು ಬಳಸಿದ ಮೇಲೆ ಅಂತಹ ಸಿಂಪರಣಾ ಯಂತ್ರಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿದ ನಂತರವೇ ಕೀಟನಾಶಕಗಳ ಬಳಕೆಗೆ ಆ ಯಂತ್ರವನ್ನು ಉಪಯೋಗಿಸಬೇಕು. ಸಿಂಪರಣಾ ಯಂತ್ರವನ್ನು ಕಾಲುವೆ ಹಾಗೂ ಕೆರೆಗಳಲ್ಲಿ ತೊಳೆಯಬಾರದು. ಕೀಟನಾಶಕಗಳನ್ನು ಮಕ್ಕಳ ಕೈಗೆ ಸಿದಗಂತೆ ಪ್ರತ್ಯೇಕ ಸ್ಥಳದಲ್ಲಿಟ್ಟು ಬೀಗ ಹಾಕಬೇಕು.
ಯಾವುದೇ ಕೀಟನಾಶಕವನ್ನು ಬಳಸುವುದಕ್ಕೆ ಮುಂಚೆ ಜೊತೆಯಲ್ಲಿ ಕೊಟ್ಟಿರುವ ಚೀಟಿ ಓದಬೇಕು. ಸಿಂಪರಣಾ ದ್ರಾವಣದಿಂದ ರಕ್ಷಿಸಿಕೊಳ್ಳಲು ಯಾವಾಗಲೂ ಸರಿಯಾದ ಬಟ್ಟೆ, ಕನ್ನಡಕ, ಮುಖವಾಡ ಮತ್ತು ಕೈ ಹೊದಿಕೆ ಧರಿಸಬೇಕು. ಸೋರುವ ಅಥವಾ ಹಾನಿಯಾಗಿರುವ ಸಿಂಪರಣಾ ಯಂತ್ರವನ್ನು ಉಪಯೋಗಿಸಬಾರದು. ಕೀಟನಾಶಕ ಸಿಂಪಡಿಸ
ಸಿಂಪರಣೆಯ ಸಮಯದಲ್ಲಿ ಎಲೆ ಅಡಿಕೆ ಜಗಿಯಬೇಡಿ
ಗಾಳಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಿಂಪಡಿಸಬಾರದು, ಕೀಟನಾಶಕ ಉಸಿರಿನೊಡನೆ ಒಳಗೆ ಹೋಗುವುದನ್ನು ತಡೆಯಲು ಯಾವಾಗಲೂ ಸೊಂಟದಿಂದ ಕೆಳಮಟ್ಟದಲ್ಲಿ ಸಿಂಪಡಿಸಬೇಕು. ಸಿಂಪರಣೆಯ ನಂತರ ಸಾಬೂನಿನಿಂದ ಸ್ನಾನ ಮಾಡಿ ಬಟ್ಟೆಯನ್ನು ಬದಲಾಯಿಸಬೇಕು ಮತ್ತು ಸ್ವಚ್ಛಗೊಳಿಸಬೇಕು. ಸಿಂಪರಣೆಯ ಸಮಯದಲ್ಲಿ ಎಲೆ ಅಡಿಕೆ ಅಥವಾ ಗುಟುಕ ಜಗಿಯಬಾರದು ಮತ್ತು ಧೂಮಪಾನ ಮಾಡಬಾರದು. ಖಾಲಿಯಾದ ಕೀಟನಾಶಕದ ಡಬ್ಬಗಳನ್ನು ಪುನಃ ಉಪಯೋಗಿಸಬಾರದು. ಖಾಲಿಯಾದ ಕೀಟನಾಶಕದ ಡಬ್ಬವನ್ನು ನಾಶಪಡಿಸಿ ಅಥವಾ ನೆಲದೊಳಗೆ ಅದನ್ನು ಹೂತು ಹಾಕಬೇಕು. ಹುಳು ಬಾಧೆ ನಿಯಂತ್ರಿಸಲು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.