ಟೊಮ್ಯಾಟೊ ಬೆಳೆಯಲ್ಲಿ ಊಜಿನೋಣ ನಿಯಂತ್ರಣಕ್ಕೆ ಸಲಹೆಗಳು
ಬೆಂಗಳೂರು, ಸೆಪ್ಟೆಂಬರ್ 08: ಟೊಮ್ಯಾಟೊ ಬೆಳೆಯಲ್ಲಿ ಇತ್ತೀಚೆಗೆ ಊಜಿನೋಣದ ಭಾದೆ ಹೆಚ್ಚಾಗಿದೆ. ಟೂಟಾಮೋಹಕ ಬಲೆಯನ್ನು ಉಪಯೋಗಿಸುವುದರಿಂದ ಊಜಿನೋಣದ ಭಾದೆ ಕಡಿಮೆ ಮಾಡಿ ರೈತರು ಅಧಿಕ ಇಳುವರಿ ಪಡೆಯಬಹುದಾಗಿದೆ.
ಕೋಲಾರ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಅಂಬಿಕಾ ಡಿ. ಎಸ್. ಈ ಕುರಿತು ಮಾಹಿತಿ ನೀಡಿದ್ದಾರೆ. ಕೆ.ಜಿ.ಎಫ್ ತಾಲೂಕಿನ ಬೇತಮಂಗಲ ಹೋಬಳಿಯ ತಿಮ್ಮಸಂದ್ರ ಗ್ರಾಮದಲ್ಲಿ ಟೂಟಾ ಮೋಹಕ ಬಲೆಯನ್ನು ಅಳವಡಿಸಿಕೊಳ್ಳುವ ಪ್ರಾತ್ಯಕ್ಷಿಕೆಯನ್ನು ಅವರು ರೈತರಿಗೆ ವಿವರಿಸಿದರು.
ರೈತರು ಕೀಟ ಮತ್ತು ರೋಗದ ಹತೋಟಿಗೆ ಬರಿ ಪೀಡೆನಾಶಕಗಳ ಬಳಕೆಗೆ ಒತ್ತು ಕೊಡದೆ ಸಮಗ್ರ ಪದ್ಧತಿಗಳಾದ ಮಾಗಿ ಉಳುಮೆ ಮಾಡುವುದು, ಜೈವಿಕ ಪೀಡೆನಾಶಕಗಳಾದ ಟ್ರೈಕೋಡರ್ಮಾ ಮತ್ತು ಸ್ಯುಡೋಮೋನಾಸ್ ಬಳಸಿ ಉತ್ಕಷ್ಟಿಕರಿಸಿದ ಕೊಟ್ಟಿಗೆ ಗೊಬ್ಬರ ಬಳಸಬೇಕು ಎಂದರು.

ಬಲೆಬೆಳೆಯಾಗಿ ಪ್ರತಿ 16 ಸಾಲಿನ ಟೊಮ್ಯಾಟೊ ನಂತರ 1 ಸಾಲು ಚೆಂಡು ಹೂ ನಾಟಿ ಮಾಡಬೇಕು ತಡೆಬೆಳೆಯಾಗಿ ಟೊಮ್ಯಾಟೊ ನಾಟಿ ಮಾಡುವ 15 ದಿನಗಳ ಮುಂಚಿತವಾಗಿ ಮೆಕ್ಕೆಜೋಳ ಅಥವಾ ಜೋಳ ಬಿತ್ತಬೇಕು ರಸಹೀರುವ ಕೀಟಗಳನ್ನು ಆಕರ್ಷಿಸಲು ಹಳದಿ ಮತ್ತು ಅಂಟು ಪಟ್ಟಿಯನ್ನು ಬಳಸಿ ಕಳೆಗಳ ನಿರ್ಮೂಲನೆ ಮಾಡಿ ಸ್ವಚ್ಚ ಬೇಸಾಯ ಮಾಡುವುದು ಹಾಗೂ ಬೆಳೆ ಪರಿವರ್ತನೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿರುವ ಅರ್ಕಾಮೈಕ್ರೋಬಿಯಲ್ ಕಂಸೊರ್ಶಿಯಂ ಎಂಬ ಜೈವಿಕ ಸಾರ ಬಳಸುವುದುರಿಂದ ಮಣ್ಣಿನಿಂದ ಬರುವ ರೋಗಗಳನ್ನು ಹತೋಟಿ ಮಾಡಬಹುದು ಎಂದು ಮಾಹಿತಿ ನೀಡಿದರು.
ಪ್ರಾತ್ಯಕ್ಷಿಕೆಯಲ್ಲಿ ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಯಾದ ಡಾ. ಅನಿಲ್ ಕುಮಾರ್, ರೈತರಾದ ಮುನಿವೆಂಕಟಪ್ಪ, ರಘು, ಅರ್ಜುನ, ಭರತ ಮುಂತಾದ ರೈತರು ಉಪಸ್ಥಿತರಿದ್ದರು.












Click it and Unblock the Notifications