ಮಳೆಗೆ ನೆಲ ಕಚ್ಚಿದ ಬೆಳೆ : ಆರ್ಥಿಕ ಸಂಕಷ್ಟದಲ್ಲಿ ರೈತರು
ಬಳ್ಳಾರಿ, ಮೇ. 27 : ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆ ತಾಲೂಕಿನಾದ್ಯಂತ ಬೀಸಿದ ಬಿರುಗಾಳಿ ಮತ್ತು ಮಳೆಗೆ ವಿದ್ಯುತ್ ಪೋಲ್ ಗಳು, ಮೊಬೈಲ್ ಟವರ್ ಗಳು ಬಾಗಿವೆ. ಅಷ್ಟೇ ಅಲ್ಲ, ಬಾಳೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಹಗರಿಬೊಮ್ಮಹಳ್ಳಿ ತಾಲೂಕಿನ ತಂಬ್ರಹಳ್ಳಿ ಹೋಬಳಿಯಲ್ಲಿ ಬೀಸಿದ ಭಾರಿ ಬಿರುಗಾಳಿ, ಮಳೆಗೆ ಬಿಜಾಪುರದ ಕೂಡ್ಗಿ ವಿದ್ಯುತ್ ಸಂಗ್ರಹ ಘಟಕದಿಂದ ತುಮಕೂರಿನ ಮಧುಗಿರಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸರಬರಾಜು ಮಾಡುವ 750 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪೂರೈಸುವ ನೂರಾರು ಅಡಿ ಎತ್ತರದ ನಾಲ್ಕಾರು ಗೋಪುರಗಳು ಗುರುವಾರ ರಾತ್ರಿ ನೆಲಕ್ಕುರುಳಿವೆ.
ಜೆಸ್ಕಾಂನ 25 ಕೆ.ವಿ. ಶಕ್ತಿಯುಳ್ಳ ವಿದ್ಯುತ್ ಪರಿವರ್ತಕಗಳು ನಾಶವಾಗಿವೆ. 50 - 60 ಕಂಬಗಳು ನೆಲಕಚ್ಚಿವೆ. ತಂತಿಗಳು ಹರಿದು ಬಿದ್ದ ಪರಿಣಾಮ ವಿದ್ಯುತ್ ಕಂಬಗಳ ಜೊತೆಗೆ ಅನೇಕ ಕಡೆ ನೂರಾರು ಮರ ಗಿಡಗಳು ನೆಲಕ್ಕುರುಳಿ ಕೃಷಿ ಬೆಳೆಗಳು ನಷ್ಟವಾಗಿವೆ.

ಸುಮಾರು 8-10 ಲಕ್ಷ ರೂಪಾಯಿ ಬೆಲೆಯ ಬೆಳೆ ಹಾಳಾಗಿದೆ ಎಂದು ರೈತರು ತಿಳಿಸಿದ್ದಾರೆ.
ಹೊಸಪೇಟೆ ತಾಲೂಕಿನಾದ್ಯಂತ 300 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬಾಳೆ, ದ್ರಾಕ್ಷಿ, ದಾಳಿಂಬೆ ಸೇರಿ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿ, ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.












Click it and Unblock the Notifications