Get Updates
Get notified of breaking news, exclusive insights, and must-see stories!

ಥಾಯಿಶ್ಯಾಕ್ ಬ್ರೂಡ್: ಕೊಡಗಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿರುವ ಜೇನು

ಮಡಿಕೇರಿ, ನವೆಂಬರ್.30:ಕೊಡಗಿನ ಜೇನಿಗೆ ಸಂಕಷ್ಟ ಎದುರಾಗಿದೆ. ಕಾರಣ 'ಥಾಯಿಶ್ಯಾಕ್ ಬ್ರೂಡ್' ಎಂಬ ವೈರಸ್ ಜೇನನ್ನು ಕಾಡತೊಡಗಿದ್ದು ಇದರಿಂದ ಜೇನುಹುಳುಗಳು ನಾಶವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇದೇ ಕಾಯಿಲೆ ಹಿಂದೆಯೂ ಜೇನಿಗೆ ತಗುಲಿತ್ತು.

ಇದರಿಂದ ಜೇನು ಹುಳುಗಳ ಮಾರಣ ಹೋಮ ನಡೆದಿತ್ತಲ್ಲದೆ, ಜೇನು ಕುಟುಂಬಗಳು ಸದ್ದಿಲ್ಲದೆ ನಾಶವಾಗಿ ಹೋಗಿದ್ದವು. ಒಂದು ಕಾಲದಲ್ಲಿ ಕೊಡಗಿ ಕಾಫಿ, ಏಲಕ್ಕಿ, ಕಾಡು, ಬೆಟ್ಟಗುಡ್ಡ, ಮರಗಳ ಪೊಟರೆ, ಹುತ್ತಗಳು ಹೀಗೆ ಎಲ್ಲೆಂದರಲ್ಲಿ ಜೇನು ಹುಳುಗಳು ವಾಸ್ತವ್ಯ ಹೂಡಿ ಮಕರಂದ ಹೀರಿ ಜೇನು ತುಪ್ಪ ತಯಾರಿಸಿಕೊಳ್ಳುವುದರೊಂದಿಗೆ ತಮ್ಮ ಕುಟುಂಬವನ್ನು ಹಿಗ್ಗಿಸಿಕೊಂಡು ಹೋಗುತ್ತಿದ್ದವು.

ಈ ಜೇನುಗಳು ಇರುವುದನ್ನು ಪತ್ತೆ ಹಚ್ಚಿ ಜೇನು ಕೀಳುತ್ತಿದ್ದರಾದರೂ ಬಹಳಷ್ಟು ಕಡೆಗಳಲ್ಲಿ ಜನರ ಕಣ್ಣಿಗೆ ಬೀಳದ ಕಾರಣ ಡಿಸೆಂಬರ್, ಜನವರಿ ತಿಂಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಜೇನುಕುಟುಂಬ ಜೂನ್ ತಿಂಗಳ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕುಟುಂಬವನ್ನು ಇಮ್ಮಡಿಗೊಳಿಸುವುದರೊಂದಿಗೆ ತಾವೇ ತಯಾರಿಸಿದ ಜೇನನ್ನು ತಾವೇ ಹೀರಿ ಬೇರೆಡೆಗೆ ವಲಸೆ ಹೋಗುತ್ತಿದ್ದವು.

ಅವತ್ತಿನ ದಿನಗಳಲ್ಲಿ ಜೇನು ಪೆಟ್ಟಿಗೆಗಳನ್ನು ಕಾಡಿನಲ್ಲಿಟ್ಟರೆ ಜೇನು ಹುಳಗಳೇ ಬಂದು ಅದಕ್ಕೆ ಸೇರಿಕೊಂಡು ಜೇನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದವು. ಆದರೆ ಯಾವಾಗ ಥಾಯಿಶ್ಯಾಕ್ ಬ್ರೂಡ್ ಎಂಬ ಕಾಯಿಲೆ ಬಂತೋ ಜೇನು ಕುಟುಂಬಗಳು ನಾಶವಾದವು.

ಅದಾದ ಬಳಿಕ ವರ್ಷಗಳು ಉರುಳಿದಂತೆ ಅಲ್ಲಲ್ಲಿ ಜೇನುಕುಟುಂಬಗಳು ಕಾಣಿಸಲಾರಂಭಿಸಿದ್ದವಾದರೂ ಇದೀಗ ಈ ಬಾರಿಯ ಮಹಾಮಳೆ ಮತ್ತು ಶೀತದ ವಾತಾವರಣದಿಂದ ಜೇನು ಕೃಷಿಗಾಗಿ ತಮ್ಮ ಜೇನು ಪೆಟ್ಟಿಗೆಯಲ್ಲಿ ಉಳಿಸಿಕೊಂಡಿದ್ದ ಹುಳುಗಳು ಸಾವನ್ನಪ್ಪಿ ಅವುಗಳ ಸಂತತಿ ನಾಶವಾಗಲು ಆರಂಭಿಸಿರುವುದು ಕೊಡಗಿನ ಜೇನು ಮೇಲೆ ಭಾರೀ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ.

ಈ ಭಾಗದಲ್ಲಿ ಮಾತ್ರ ಜೇನು ಕೃಷಿ ನಡೆಯುತ್ತಿದೆ

ಈ ಭಾಗದಲ್ಲಿ ಮಾತ್ರ ಜೇನು ಕೃಷಿ ನಡೆಯುತ್ತಿದೆ

ಕೊಡಗಿನಲ್ಲಿ ಮೊದಲೆಲ್ಲ ಎಲ್ಲ ಕಡೆಗಳಲ್ಲಿ ಜೇನು ಕೃಷಿ ಮಾಡುತ್ತಿದ್ದರಾದರೂ ಈಗ ಕೇವಲ ತಲಕಾವೇರಿ ವ್ಯಾಪ್ತಿಯ ಬ್ರಹ್ಮಗಿರಿ ಬೆಟ್ಟಶ್ರೇಣಿಯ ಭಾಗಮಂಡಲ, ತಲಕಾವೇರಿ, ಚೇರಂಗಾಲ, ಕೋರಂಗಾಲ, ಸಣ್ಣಪುಲಿಕೋಟು, ಅಯ್ಯಂಗೇರಿ, ಕೊಳಗದಾಳು ಮತ್ತಿತರ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಜನ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ.

ಇಲ್ಲಿ ಕೃಷಿಯನ್ನು ಗಂಭೀರವಾಗಿ ಪರಿಗಣಿಸಿ ಮಾಡಲಾಗುತ್ತಿದ್ದು, ತಾವು ಹೊಂದಿರುವ ಜೇನುಪೆಟ್ಟಿಗೆಯಲ್ಲಿರುವ ಜೇನು ಕುಟುಂಬ ವಲಸೆ ಹೋಗದಂತೆ ರಾಣಿಜೇನು ಹುಳವನ್ನು ತಡೆದು ಕುಟುಂಬವನ್ನು ಉಳಿಸಿಕೊಂಡು ಜೇನು ಕೃಷಿ ಮಾಡಲಾಗುತ್ತದೆ. ಆದರೆ ಈ ಬಾರಿಯ ವಾತಾವರಣದಲ್ಲಿನ ವೈಪರೀತ್ಯದಿಂದಾಗಿ ಜೇನು ಹುಳುಗಳು ಸದ್ದಿಲ್ಲದೆ ಸಾವನ್ನಪ್ಪಿವೆ.

ಸಾಮಾನ್ಯವಾಗಿ ಹಿಂದೆ ಜೇನು ಹುಳುಗಳ ಕುಟುಂಬಗಳು ಹೇರಳವಾಗಿದ್ದ ಸಮಯದಲ್ಲಿ ಕೃಷಿಕರು ನವೆಂಬರ್ ಡಿಸೆಂಬರ್‌ನಲ್ಲಿ ತಂಪಾದ ಸೂಕ್ತವಾದ ಸ್ಥಳದಲ್ಲಿಟ್ಟು ಜೇನು ಹುಳುಗಳು ಬಂದು ಪೆಟ್ಟಿಗೆಗೆ ಸೇರಿ ಒಂದೋ ಎರಡೋ ವಾರವಾದ ಬಳಿಕ ತಮಗೆ ಎಲ್ಲಿ ಅನುಕೂಲವೊ ಅಲ್ಲಿ ಇಟ್ಟು ಅವುಗಳಿಗೆ ಇರುವೆ, ಇನ್ನಿತರ ಕೀಟಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು.

ಪೆಟ್ಟಿಗೆಯಲ್ಲಿ ಉಳಿಸಿಕೊಳ್ಳಲಾಗುತ್ತಿದೆ

ಪೆಟ್ಟಿಗೆಯಲ್ಲಿ ಉಳಿಸಿಕೊಳ್ಳಲಾಗುತ್ತಿದೆ

ಜನವರಿಯಲ್ಲಿ ಕಾಫಿ ಹೂ ಬಿಡುತ್ತಿತ್ತು. ಬಳಿಕ ಹಲವು ಹೆಮ್ಮರಗಳು ಕಾಡು, ತೋಟಗಳಲ್ಲಿ ಹೂ ಬಿಡುತ್ತಿದ್ದರಿಂದ ಜೇನುಗಳಿಗೆ ಮಕರಂದದ ಕೊರತೆಯಿರಲಿಲ್ಲ. ಆಗ ಎಲ್ಲವೂ ನೈಸರ್ಗಿಕವಾಗಿಯೇ ನಡೆಯುತ್ತಿದ್ದರಿಂದ ಹುಳುಗಳು ಒಂದು ಕಡೆ ತಮ್ಮ ಸಂತಾನೋತ್ಪತ್ತಿ ಮಾಡುತ್ತಿದ್ದರೆ ಮತ್ತೊಂದೆಡೆ ಮಕರಂದವನ್ನು ಶೇಖರಿಸಿಡುವ ಕೆಲಸವನ್ನು ಮಾಡುತ್ತಿದ್ದವು.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿದ್ದಂತೆಯೇ ಶೇಖರಿಸಿಟ್ಟ ಮಕರಂದವನ್ನು ಜೇನಾಗಿ ಪರಿವರ್ತಿಸುವ ಕೆಲಸವನ್ನು ಮಾಡುತ್ತಿದ್ದವು. ಈ ವೇಳೆಯಲ್ಲಿ 15 ದಿನಕ್ಕೊಮ್ಮೆ ಸಂಗ್ರಹವಾದ ಜೇನನ್ನು ತೆಗೆಯಲಾಗುತ್ತಿತ್ತು. ಜೂನ್, ಜುಲೈ ವೇಳೆಗೆ ಮಳೆ ಆರಂಭವಾಗುತ್ತಿದ್ದರಿಂದ ಜೇನು ಹುಳುಗಳು ಕೂಡ ಕೊಡಗನ್ನು ಬಿಟ್ಟು ದೂರ ಹಾರಿ ಹೋಗುತ್ತಿದ್ದವು.

ಇದು ಈಗಲೂ ನಡೆಯುತ್ತದೆಯಾದರೂ ಜೇನು ಕುಟುಂಬ ಕ್ಷೀಣಿಸಿದ ಹಿನ್ನಲೆಯಲ್ಲಿ ಅವುಗಳನ್ನು ಸರ್ವಕಾಲದಲ್ಲಿಯೂ ಅದೇ ಪೆಟ್ಟಿಗೆಯಲ್ಲಿ ಉಳಿಸಿಕೊಳ್ಳಲಾಗುತ್ತಿದೆ.

ಈ ವೈರಸ್ ಕಂಡು ಬಂದಿದ್ದು ಕೇರಳದಲ್ಲಿ

ಈ ವೈರಸ್ ಕಂಡು ಬಂದಿದ್ದು ಕೇರಳದಲ್ಲಿ

ಜೇನು ಪೆಟ್ಟಿಗೆಯಲ್ಲಿ ಕೆಲಸಗಾರ ಜೇನುಹುಳುಗಳು ಮಾತ್ರ ಓಡಾಡುವಂತೆ ಜತೆಗೆ ರಾಣಿ ಜೇನು ಹುಳ ದಾಟಿ ಹೋಗದಂತೆ ಗೇಟ್‌ಗಳನ್ನು ಹಾಕಿ ಬಲತ್ಕಾರವಾಗಿ ಉಳಿಸಿಕೊಂಡು ಜೇನು ಕೃಷಿ ಮಾಡಲಾಗುತ್ತದೆ. ಈ ಹುಳಗಳಿಗೆ ಮಳೆಗಾಲದಲ್ಲಿ ಕೃತಕ ಆಹಾರ ನೀಡಿ ರಕ್ಷಿಸಲಾಗುತ್ತಿದೆ. ಆದರೆ ಅವುಗಳೇ ಸಾಯುವ ಸ್ಥಿತಿಗೆ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಹಾಗೆ ನೋಡಿದರೆ ಥಾಯಿಶ್ಯಾಕ್ ಬ್ರೂಡ್ ವೈರಸ್ ಮೊದಲು ಕಂಡು ಬಂದಿದ್ದು ಕೇರಳ ರಾಜ್ಯದಲ್ಲಂತೆ ಅಲ್ಲಿಂದ ಬೇರೆಡೆಗೆ ಅದರಲ್ಲೂ ಕೊಡಗಿಗೆ ಹತ್ತಿರವಿರುವ ಕಾರಣ ಅತಿ ಶೀಘ್ರವಾಗಿ ಕಾಣಿಸಿಕೊಂಡು ಇಲ್ಲಿನ ಜೇನು ಕುಟುಂಬಗಳನ್ನು ಬಲಿ ಪಡೆದಿತ್ತು.

ಕೇರಳದ ಪ್ರಾಕೃತಿಕ ಕಾಡುಗಳಲ್ಲಿದ್ದ ಹೆಜ್ಜೇನುಗಳಿಗೆ ಈ ವೈರಸ್ ಮೊದಲು ದಾಳಿ ನಡೆಸಿ ಲಕ್ಷಾಂತರ ಸಂಖ್ಯೆಯ ಹೆಜ್ಜೇನು ಹುಳುಗಳನ್ನು ಬಲಿ ಪಡೆದಿತ್ತು. ಆ ಬಳಿಕ ಈ ವೈರಸ್ ಕೊಡಗು ಜಿಲ್ಲೆಗೆ ಕಾಲಿಟ್ಟು ಹೆಜ್ಜೇನು ಮತ್ತು ಪೆಟ್ಟಿಗೆ ಜೇನಿನ ಮೇಲೂ ತನ್ನ ಮಾರಣಾಂತಿಕ ಪ್ರಭಾವ ಬೀರಿದೆ.

ಜೇನಿನ ವೈಭವ ಕಳೆದುಕೊಳ್ಳಬೇಕಾಗುತ್ತದೆ

ಜೇನಿನ ವೈಭವ ಕಳೆದುಕೊಳ್ಳಬೇಕಾಗುತ್ತದೆ

ಜೇನು ಕುಟುಂಬಗಳ ವಲಸೆಯಿಂದ ಕೊಡಗು ಜಿಲ್ಲೆಗೆ ಈ ವೈರಸ್ ಹರಡಿರಬಹುದೆಂದು ಜೇನು ಕೃಷಿಕರು ಸಂಶಯ ವ್ಯಕ್ತಪಡಿಸುತ್ತಾರೆ. ತೋಟಗಾರಿಕಾ ಇಲಾಖೆ ಜೇನು ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದು, ಇದೀಗ ಬಂದಿರುವ ಕಾಯಿಲೆಯಿಂದ ಜೇನು ಹುಳುಗಳನ್ನು ಪಾರು ಮಾಡಿ ಕೃಷಿ ಮುಂದುವರೆಸಲು ಅನುಕೂಲವಾಗುವಂತೆ ತಾಂತ್ರಿಕ ಸಲಹೆಗಳನ್ನು ನೀಡುತ್ತಿದೆ.

ಆದಷ್ಟು ಬೇಗ ಕಾಯಿಲೆಗೊಂದು ಪರಿಹಾರ ಕಂಡು ಹಿಡಿಯಬೇಕಾಗಿದೆ. ಇಲ್ಲದೆ ಹೋದರೆ ಕೊಡಗು ತನ್ನ ಜೇನಿನ ವೈಭವವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+