ರೈತರೇ ನಿಮ್ಮ ಜಮೀನು ಕೊಡಿಸ್ತೀನಿ, ಕರೆ ಮಾಡಿ: ಎಚ್ಡಿಕೆ
ಬೆಂಗಳೂರು, ಜು.12: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ರೈತರಿಗೆ ಮಾನಸಿಕ ಬೆಂಬಲ ತುಂಬುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಾಲ ಮಾಡಿಕೊಂಡು, ಜಮೀನು ಒತ್ತೆ ಇಟ್ಟು ನರಳುವ ರೈತರಿಗೆ ಅಭಯ ನೀಡಿದ್ದಾರೆ. ರೈತರಿಗಾಗಿ ಪ್ರತ್ಯೇಕ ಸಹಾಯವಾಣಿಯನ್ನು ಆರಂಭಿಸಿರುವ ಎಚ್ಡಿಕೆ, ಏನೇ ತೊಂದರೆ ಇದ್ದರೂ ಕರೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
ದಿನದ 24ಗಂಟೆ ಕಾರ್ಯ ನಿರ್ವಹಿಸುವ ರೈತ ಸಹಾಯವಾಣಿವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಸಹಾಯವಾಣಿ ಸಂಖ್ಯೆ 080-2361 9909/ 99000 31555/99000 25777 ಇದು ದಿನದ 24ಗಂಟೆ ಕಾರ್ಯ ನಿರ್ವಹಿಸಲಿದೆ. ಸಂಕಷ್ಟದಲ್ಲಿರುವ ರೈತರು ಇಲ್ಲಿಗೆ ಸಂಪರ್ಕಿಸಬೇಕೆಂದು ತಿಳಿಸಿದ ಅವರು, ಸಮಸ್ಯೆಯನ್ನು ಆಲಿಸಲು ಪ್ರತಿನಿಧಿಗಳನ್ನು ನೇಮಿಸಲಾಗಿದೆ ಎಂದರು. [ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]

ಆತ್ಮಹತ್ಯೆ ಒಂದೇ ಸಮಸ್ಯೆಗೆ ಪರಿಹಾರವಲ್ಲ: ನೀವು ಅಡವಿಟ್ಟಿರುವ ಜಮೀನು ಬಿಡಿಸಿ ಕೊಡುವ ಯತ್ನ ಪ್ರಾಮಾಣಿಕವಾಗಿ ಮಾಡುತ್ತೇನೆ. ಮೀಟರ್ ಬಡ್ಡಿ ದಂಧೆ ಕೂಪಕ್ಕೆ ಬೀಳಬೇಡಿ. ಆತ್ಮಹತ್ಯೆ ಒಂದೇ ಸಮಸ್ಯೆಗೆ ಪರಿಹಾರವಲ್ಲ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಮುಂದಾಗಬಾರದೆಂದು ಕಳಕಳಿಯ ಮನವಿ ಮಾಡಿದರು.
ಧಾರವಾಡದಿಂದ ಬೆಳಗಾವಿ ಸುವರ್ಣ ಸೌಧದವರೆಗೆ ತಾವು ಕೈಗೊಂಡಿದ್ದ ಪಾದಯಾತ್ರೆ ರೈತರಿಗೆ ಧೈರ್ಯ ತುಂಬಲು ಹಮ್ಮಿಕೊಂಡ ಯಾತ್ರೆ ಅಷ್ಟೇ ಅದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆ ನೋಡಿದರೆ ರೈತರ ಬಗ್ಗೆ ಇವರಿಗೆ ಎಳ್ಳಷ್ಟು ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್ಗಳು ರೈತರ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಅಡವಿಟ್ಟುಕೊಂಡು 315ಕೋಟಿ ರೂ. ಸಾಲ ನೀಡಿದೆ. ಸಹಕಾರಿ ಬ್ಯಾಂಕ್ಗಳಲ್ಲಿ ಸುಮಾರು 68ಲಕ್ಷ ರೈತರು ಸದಸ್ಯತ್ವ ಪಡೆದಿದ್ದಾರೆ. ಇದರಲ್ಲಿ 21ಲಕ್ಷ ರೈತರಿಗೆ ಮಾತ್ರ ಫಲ ಸಿಕ್ಕಿದೆ. ಉಳಿದವರು ಮೀಟರ್ ಬಡ್ಡಿ ಸಾಲಕ್ಕೆ ಅನ್ಯ ಮಾರ್ಗವಿಲ್ಲದೆ ಮೊರೆಹೋಗಿದ್ದಾರೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ನಡೆದ ಮಳೆಗಾಲದ ಅಧಿವೇಶನದಲ್ಲಿ ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಇಲಾಖೆ ಬಗ್ಗೆ ಚರ್ಚೆ ನಡೆದು ಸಮಸ್ಯೆಗಳ ಬಗ್ಗೆ ಸಕಾರಾತ್ಮಕ ಸಂದೇಶ ನೀಡುವಲ್ಲಿ ವಿಫಲವಾಗಿದ್ದೇವೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯರುಗಳು ಒಂದು ತಿಂಗಳ ವೇತನ ಕೊಡಲು ನಿರ್ಧರಿಸಿದ್ದಾರೆಂದು ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications