ಪ್ರಧಾನಿ ಮೋದಿಗೆ ಪತ್ರ ಬರೆದು ರೈತರ ಸಮಸ್ಯೆ ಬಿಚ್ಚಿಟ್ಟ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ
ಬೆಂಗಳೂರು, ಮೇ 25: ಕೊರೊನಾ ವೈರಸ್ನ ಸಂಕಷ್ಟದ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಬೆಲೆ ತೀವ್ರ ಕುಸಿತವಾಗುತ್ತಿದೆ. ಹೀಗಾಗಿ ರೈತರ ನೆರವಿಗೆ ಧಾವಿಸಬೇಕೆಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರವನ್ನು ಬರೆದಿದ್ದಾರೆ. ಎಚ್ಡಿ ದೇವೇಗೌಡ ಅವರು ಟ್ವಿಟ್ಟರ್ನಲ್ಲಿ ಪ್ರಧಾನಿಗೆ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ.
Recommended Video
ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ದೊಡ್ಡ ಸಮಸ್ಯೆಯಾಗಿದ್ದು ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಆಡಳಿತಗಳ ಗಮನ ಆ ಕಡೆ ನೆಟ್ಟಿದೆ. ಇಂಥ ಪರಿಸ್ಥಿಯಲ್ಲಿ ಅದು ಅನಿವಾರ್ಯವಾಗಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಮುಂದಿನ ಕೆಲ ತಿಂಗಳುಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾವೈರಸ್ ಕಾಡುತ್ತಿರುವಂತೆಯೇ ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿತ ಎರಡೆರಡು ಸಮಸ್ಯೆಗಳನ್ನು ಉಂಟು ಮಾಡಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಈ ಪತ್ರದಲ್ಲಿ ಬರೆದಿದ್ದಾರೆ.
ಇನ್ನು ಕೃಷಿ ಉತ್ಪನ್ನಗಳಿಗೆ ಬೆಲೆ ಕಡಿಮೆಯಾಗಿ ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿರುವ ವಿಚಾರವನ್ನು ದೇವೇಗೌಡರು ಪತ್ರದಲ್ಲಿ ವಿವರಿಸಿದ್ದಾರೆ. ಕರ್ನಾಟಕದ ಕೋಲಾರದಲ್ಲಿ ಟೊಮೆಟೋ ಬೆಳೆಗಾರರು ಉತ್ತಮ ಬೆಲೆ ದೊರೆಯದ ಕಾರಣ ರಸ್ತೆಗೆ ಚೆಲ್ಲಿರುವ ಘಟನೆಯನ್ನು ಈ ಪತ್ರದಲ್ಲಿ ಪ್ರಸ್ತಾವಿಸಿದ್ದಾರೆ. ಜೊತೆಗೆ ಬೇರೆ ಬೇರೆ ರಾಜ್ಯಗಳಲ್ಲಿಯೂ ಇದೇ ರೀತಿಯ ಸಂಕಷ್ಟವನ್ನು ರೈತರು ಅನುಭವಿಸುತ್ತಿರುವ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ.

ಕೊರೊನಾ ವೈರಸ್ನ ಕಾರಣದಿಂದಾಗಿ ಲಾಕ್ಡೌನ್ ಮಾಡಿರುವ ಕಾರಣದಿಂದಾಗಿ ಸಂಪರ್ಕಗಳು ಕಡಿತವಾಗಿದೆ. ಇದು ಕೃಷಿ ಮಾರುಕಟ್ಟೆಗಳ ಮೇಲೆಯೂ ಗಾಢ ಪರಿಣಾಮವನ್ನು ಬೀರಿದೆ. ಈ ಕಾರಣದಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ದೊರೆಯದೆ ನಷ್ಟವಾಗುತ್ತಿದೆ. ಇನ್ನು ಈ ಎಲ್ಲಾ ಕೃಷಿ ಉತ್ಪನ್ನಗಳು ಕೊಳೆತು ಹೋಗಬಲ್ಲವಾದರಿಂದ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯೂ ಇಲ್ಲ. ಜೊತೆಗೆ ಇವುಗಳು ಕನಿಷ್ಠ ಬೆಂಬಲ ವ್ಯವಸ್ಥೆಗೂ ಒಳಪಡುತ್ತಿಲ್ಲ ಎಂದು ರೈತರು ಅನುಭವಿಸುತ್ತಿರುವ ಸವಾಲುಗಳನ್ನು ದೇವೇಗೌಡರು ಪತ್ರದಲ್ಲಿ ತೆರೆದಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಕೆಲ ಸಲಹೆಗಳನ್ನು ಕೂಡ ದೇವೇಗೌಡರು ಪತ್ರದಲ್ಲಿ ನೀಡಿದ್ದಾರೆ. ರೈತರು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಕೊರೊನಾ ಸಾಂಕ್ರಾಮಿಕ ರೋಗದಿಂದ ಪಾರಾದರು ಕೂಡ ಬದುಕು ಸಾಗಿಸಲು ಏನೂ ಇಲ್ಲದಂತಾ ಪರಿಸ್ಥಿತಿ ಉಂಟಾಗಬಹುದು ಎಂದು ದೇವೇಗೌಡರು ಈ ಪತ್ರದಲ್ಲಿ ವಿವರಿಸಿದ್ದಾರೆ.












Click it and Unblock the Notifications