Copra Price: ಕೊಬ್ಬರಿಗೆ ಬೆಂಬಲ ಹೆಚ್ಚಿಸಿದ ಕೇಂದ್ರ ಸರ್ಕಾರ: ಹೊಸ ದರ, ಮಾಹಿತಿ
ಕೊಬ್ಬರಿ ದರ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಮಾಧಾನದ ಸುದ್ದಿ ನೀಡಿದೆ. 2024ರ ಹಂಗಾಮಿಗೆ ಕೊಬ್ಬರಿಗೆ ಪ್ರತಿ ಕ್ವಿಂಟಲ್ಗೆ 250-300 ರೂಪಾಯಿ ಹೆಚ್ಚಿಸಿದ್ದು, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು 11,160-12,000 ರೂಪಾಯಿಗೆ ನಿಗದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜಾಗತಿಕವಾಗಿ ಕೊಬ್ಬರಿ ಬೆಲೆ ಕುಸಿದಿದೆ. ಆದರೆ ಮೋದಿ ಸರ್ಕಾರವು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇಕಡಾ 50 ರಷ್ಟು ಹೆಚ್ಚಿನ ಎಂಎಸ್ಪಿ ನೀಡಲು ನಿರ್ಧರಿಸಿದೆ. ಅದರಂತೆ, 2024 ರ ಋತುವಿನಲ್ಲಿ ಕೊಬ್ಬರಿಯ ಬೆಂಬಲ ಬೆಲೆಯನ್ನು ಕ್ವಿಂಟಲ್ಗೆ 250-300 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಎಂದು ಸಚಿವ ಅನುರಾಗ್ ಠಾಕೂರ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಬೆಂಬಲ ಬೆಲೆ ನಿಗದಿ
ನ್ಯಾಯೋಚಿತ ಮತ್ತು ಸರಾಸರಿ ಗುಣಮಟ್ಟದ (FAQ) ಚೆಂಡು ಕೊಬ್ಬರಿಯ ಎಂಎಸ್ಪಿಯನ್ನು ಪ್ರತಿ ಕ್ವಿಂಟಲ್ಗೆ 250 ರೂಪಾಯಿ ಹೆಚ್ಚಳ ಮಾಡಿದ್ದು, 12,000 ರೂ.ಗೆ ಹೆಚ್ಚಿಸಲಾಗಿದೆ, ಆದರೆ ಮಿಲ್ಲಿಂಗ್ ಕೊಪ್ಪರ್ ಬೆಂಬಲ ಬೆಲೆಯನ್ನು ಮುಂದಿನ ವರ್ಷಕ್ಕೆ ಕ್ವಿಂಟಲ್ಗೆ 300 ರೂಪಾಯಿ ಹೆಚ್ಚಿಸಿದ್ದು, 11,160 ರೂಪಾಯಿ ನಿಗದಿ ಮಾಡಲಾಗಿದೆ ಎಂದರು.
ಕಳೆದ 10 ವರ್ಷಗಳಲ್ಲಿ, ಸರ್ಕಾರವು 2014-15ರಲ್ಲಿ ಪ್ರತಿ ಕ್ವಿಂಟಲ್ಗೆ 5,250 ರೂ ಮತ್ತು 5,500 ರಿಂದ 2024-25 ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಮಿಲ್ಲಿಂಗ್ ಕೊಬ್ಬರಿಗೆ 11,160 ರೂ ಮತ್ತು ಚೆಂಡು ಕೊಬ್ಬರಿಗೆ 12,000 ರೂ.ಗೆ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ.
ಬೆಂಬಲ ಬೆಲೆ ಹೆಚ್ಚಳವು ತೆಂಗು ಬೆಳೆಗಾರರ ಆದಾಯವನ್ನು ಹೆಚ್ಚಿಸುತ್ತದೆ, ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸಕ್ತ 2023 ರ ಹಂಗಾಮಿನಲ್ಲಿ, ಸರ್ಕಾರವು 1,493 ಕೋಟಿ ರೂಪಾಯಿ ವೆಚ್ಚದಲ್ಲಿ 1.33 ಲಕ್ಷ ಟನ್ಗೂ ಹೆಚ್ಚು ಕೊಬ್ಬರಿಯನ್ನು ಸಂಗ್ರಹಿಸಿದೆ, ಇದರಿಂದ ಸುಮಾರು 90,000 ರೈತರಿಗೆ ಪ್ರಯೋಜನವಾಗಿದೆ ಎಂದು ಹೇಳಿದೆ. 2022ಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಋತುವಿನಲ್ಲಿ ಸಂಗ್ರಹಣೆಯು ಶೇಕಡಾ 227 ರಷ್ಟು ಹೆಚ್ಚಾಗಿದೆ.
ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಬೆಲೆ ಬೆಂಬಲ ಯೋಜನೆ (PSS) ಅಡಿಯಲ್ಲಿ ಕೊಬ್ಬರಿ ಮತ್ತು ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ಸಂಗ್ರಹಿಸಲು ಕೇಂದ್ರ ನೋಡಲ್ ಏಜೆನ್ಸಿಗಳಾಗಿ ಕಾರ್ಯ ನಿರ್ವಹಿಸಲಿವೆ.
ಮಿಲ್ಲಿಂಗ್ ಕೊಬ್ಬರಿಯನ್ನು ಎಣ್ಣೆಯನ್ನು ಹೊರತೆಗೆಯಲು ಬಳಸಲಾಗುತ್ತದೆ, ಆದರೆ ಚೆಂಡು ಕೊಬ್ಬರಿಯನ್ನು ಸೇವಿಸಲಾಗುತ್ತದೆ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೇರಳ ಮತ್ತು ತಮಿಳುನಾಡು ಮಿಲ್ಲಿಂಗ್ ಕೊಬ್ಬರಿಯ ಪ್ರಮುಖ ಉತ್ಪಾದಕರಾಗಿದ್ದು, ಕರ್ನಾಟಕದಲ್ಲಿ ಪ್ರಧಾನವಾಗಿ ಚೆಂಡು ಕೊಬ್ಬರಿಯನ್ನು ಉತ್ಪಾದಿಸಲಾಗುತ್ತದೆ.












Click it and Unblock the Notifications