ಧಾರವಾಡ, ಹಾವೇರಿ, ಗದಗ ನೀರಾವರಿಗೆ 120 ಕೋಟಿ: ಟಿ ಬಿ ಜಯಚಂದ್ರ
ಹುಬ್ಬಳ್ಳಿ, ಫೆಬ್ರವರಿ 4: ರಾಜ್ಯ ಸರಕಾರ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಸಣ್ಣ ನೀರಾವರಿ ಯೋಜನೆಗಳಿಗೆ ರು.120 ಕೋಟಿ ಮಂಜೂರು ಮಾಡಿದ್ದು, ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವ ಟಿ. ಬಿ. ಜಯಚಂದ್ರ ತಿಳಿಸಿದರು.
ಅವರು ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೀರೆಕೆರೆಗೆ ಬೆಣ್ಣಿ ಹಳ್ಳದಿಂದ ಏತ ನೀರಾವರಿ ಮೂಲಕ ನೀರು ತುಂಬುವ ಕಾರ್ಯಕ್ರಮದ ಭೂಮಿ ಪೂಜೆ ನೆರೆವೇರಿಸಿದರು. ನಂತರ ಮಾತನಾಡಿ, ಉತ್ತರ ಕರ್ನಾಟಕದ ಬೆಣ್ಣಿತೊರೆ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿದು ಪ್ರವಾಹ ಪರಿಸ್ಥಿತಿ ತೆಲೆದೋರಿ ಸುಮಾರು 7 ಟಿಎಂಸಿ ಯಷ್ಟು ನೀರು ಪೋಲಾಗುತ್ತಿದೆ. ಇಂತಹ ಪೋಲಾಗುತ್ತಿರುವ ನೀರನ್ನು ತಡೆದು ಅದನ್ನು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಯೋಜನೆ ರೂಪಿಸಿ ಶಾಸಕ ಶಿವಳ್ಳಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದರು. ಸಕಾರತ್ಮಕವಾಗಿ ಸ್ಪಂದಿಸಿ 7.78 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದರು.[ಕುಡಿಯುವ ನೀರಿಗಾಗಿ 3ನೇ ಮಹಾಯುದ್ಧ ಬೇಕೆ?]

ಈ ಕಾಮಗಾರಿಯನ್ನು 11 ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ ಜಯಚಂದ್ರ, ಈ ವರ್ಷ ಬರಗಾಲ ಎದುರಿಸುತ್ತಿರುವ ನಿಟ್ಟಿನಲ್ಲಿ ಬರ ನಿರ್ವಹಣೆಗಾಗಿ ಸರ್ಕಾರ 1500 ಕೋಟಿ ರೂ. ಬಿಡುಗಡೆ ಮಾಡಿದೆ.

ಕೇಂದ್ರ ಸರಕಾರಕ್ಕೆ ಮುಂಗಾರು ಹಂಗಾಮಿನ 17000 ಕೋಟಿ ರೂ. ಬರನಷ್ಟ ಪರಿಹಾರ, ಗುಲ್ಬರ್ಗ, ಯಾದಗಿರಿ ಹಾಗೂ ಬೀದರ್ ಭಾಗಗಳಲ್ಲಿ ಉಂಟಾದ ಪ್ರವಾಹ ನಷ್ಟ ಪರಿಹಾರಕ್ಕೆ 4000 ಕೋಟಿ ಹಾಗೂ ಹಿಂಗಾರು ಹಂಗಾಮಿನ ಬರ ನಷ್ಟ ಎದುರಿಸಲು ರು. 3000 ಕೋಟಿ ಸೇರಿದಂತೆ ಒಟ್ಟು ರು. 24000 ಕೋಟಿ ಅನುದಾನವನ್ನು ಕೇಳಲಾಗಿದೆ ಎಂದರು.












Click it and Unblock the Notifications