"ಮಾಯಕೊಂಡಕ್ಕೆ ಆನಗೋಡು ಸೇರಿಸಿದರೆ ಗೋಲಿಬಾರ್ ಮರುಕಳಿಸುತ್ತೆ"
ದಾವಣಗೆರೆ, ಜನವರಿ 4: "ಮಾಯಕೊಂಡ ತಾಲೂಕು ಕೇಂದ್ರವನ್ನಾಗಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಆನಗೋಡು ಹೋಬಳಿಯನ್ನು ಮಾಯಕೊಂಡ ತಾಲೂಕಿಗೆ ಸೇರಿಸಬಾರದು. ಹಾಗೇನಾದ್ರೂ ಮಾಡಿದ್ರೆ, 1992ರ ಗೋಲಿಬಾರು ಮರುಕಳಿಸುತ್ತೆ" ಎಂದು ಜಿಲ್ಲಾಧಿಕಾರಿಗಳ ಮುಂದೆ ರೈತ ಮುಖಂಡ ಚಿನ್ನಸಮುದ್ರದ ಶೇಖರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿ ಸಭೆಯಲ್ಲಿ ಗೊಂದಲ ಸೃಷ್ಟಿಸಿದ್ದಾರೆ.
ಮಾಯಕೊಂಡ ಪ್ರತ್ಯೇಕ ತಾಲೂಕು ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ದಾವಣಗೆರೆಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಭೆ ನಡೆದಿತ್ತು. ಜಿಲ್ಲಾಧಿಕಾರಿ ಈ ಸಭೆ ನೇತೃತ್ವ ವಹಿಸಿದ್ದರು. ಮಾಯಕೊಂಡ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳ ಮುಂದೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶೇಖರ್ ನಾಯ್ಕ್, "ಮಾಯಕೊಂಡ ಕ್ಷೇತ್ರವನ್ನು ತಾಲ್ಲೂಕು ಮಾಡಲು ವಿರೋಧವಿಲ್ಲ. ಆದರೆ ಮಾಯಕೊಂಡ ತಾಲ್ಲೂಕಿಗೆ ಆನಗೋಡು ಹೋಬಳಿ ಸೇರ್ಪಡೆ ಮಾಡಿದರೆ ಗೋಲಿಬಾರ್ ಮತ್ತೆ ಮರುಕಳಿಸುತ್ತದೆ" ಎಂದು ವೇದಿಕೆ ಮೇಲೆಯೇ ಅವರಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಮುಂದೆಯೇ ಈ ರೀತಿ ಹೇಳಿದ್ದನ್ನು ಖಂಡಿಸಿ ಇತರ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಶೇಖರ್ ನಾಯ್ಕ್ ಅವರನ್ನು ಸಭೆಯಿಂದ ಹೊರಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಭೆಯಲ್ಲಿ ಗೊಂದಲ ಸೃಷ್ಠಿಯಾದ ಹಿನ್ನಲೆ ಜಿಲ್ಲಾಧಿಕಾರಿಗಳೇ ಸಭೆಯಿಂದ ಹೊರ ನಡೆದರು.












Click it and Unblock the Notifications