'ತಲೆ ಮೇಲೆ ಸೀಮೆಎಣ್ಣೆ ಡಬ್ಬ ಹೊತ್ತಿದ್ದು ಸಿದ್ದುಗೆ ಗೊತ್ತೆ?'
ಬೆಂಗಳೂರು, ಜೂ. 13: 'ನಾನು ತಲೆಯ ಮೇಲೆ ಸೀಮೆಎಣ್ಣೆ ಡಬ್ಬ ಹೊತ್ತಿದ್ದೆ. ರೈಲಿನಲ್ಲಿ ಎರಡು ಸಾವಿರ ಜನ ರೈತರನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದೆ. ಲಗೇಜ್ ಇಡುವ ಜಾಗದಲ್ಲಿ ಕುಳಿತು ಪಕ್ಷ ಕಟ್ಟಿದ್ದೆ, ಇದನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆಯೇ? ' ಇದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೆಗೌಡ ಅವರ ನುಡಿ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಶನಿವಾರ ಮಾತನಾಡಿದ ಗೌಡರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು. ನಾನು ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಂದಿನ ಪರಿಸ್ಥಿತಿಯಲ್ಲಿ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಲು ಸಾಧ್ಯವಿರಲಿಲ್ಲ ಎಂದು ಹೇಳಿದರು.[ಮೋದಿ ಜೊತೆ ದೇವೇಗೌಡರ ಚಾಯ್ ಪೇ ಚರ್ಚಾ]

ಕುಮಾರಸ್ವಾಮಿ ಮನೆಯಲ್ಲಿ ನೂರು ಕೋಟಿ ರು. ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಮನೆಯಲ್ಲಿ ಅಷ್ಟೊಂದು ಹಣವಿದ್ದರೆ ಲೋಕಾಯುಕ್ತ ಅಧಿಕಾರಿಗಳು ಸುಮ್ಮನೆ ಬಿಡುತ್ತಾರೆಯೇ? ಎಂದು ಪ್ರಶ್ನೆ ಮಾಡಿದರು.
ನಾನು ಯಾರಿಗೂ ದ್ರೋಹ ಮಾಡಿಲ್ಲ. ರೈತರ ಪರ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಅದನ್ನು ಮುಂದುವರಿಸಿಕೊಂಡೇ ಹೋಗುತ್ತೇನೆ. ಇದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ. ಅವರವರ ಕರ್ಮವನ್ನು ಅವರೇ ಊಟ ಮಾಡುತ್ತಾರೆ ಎಂದು ದೇವೇಗೌಡ ಹೇಳಿದರು.[ದೇವೇಗೌಡ್ರ ಫೋನ್ ಕದ್ದಾಲಿಸುವ ಚಟ ಇಲ್ಲ: ಸಿದ್ದರಾಮಯ್ಯ]

ನಾನು ಐದು ವರ್ಷಗಳ ಸಂಸದ ಹುದ್ದೆಯನ್ನು ಪೂರೈಸುತ್ತೇನೆ. ಆಗ ನನಗೆ 87 ವರ್ಷ ವಯಸ್ಸಾಗಿರುತ್ತದೆ. ಹಾಗಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು. ನನ್ನನ್ನು 24 ಗಂಟೆಗಳ ಪೊಲಿಟಿಶಿಯನ್ ಅಂತ ಕರೆಯುತ್ತಾರೆ. ನನಗೆ ಈ ಬಿರುದು ಕೊಟ್ಟಿದ್ದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಎಂದು ನೆನಪಿಸಿಕೊಂಡರು. ಇಂದಿಗೂ ನಾನು ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿಲ್ಲ. ನಾನು ಹೋಗೋ ಮಾರ್ಗ ಸರಿಯಾಗಿದೆ ಎಂದ ಮೇಲೆ ಯಾರಿಗೂ ಹೆದರಬೇಕಾದ ಅಗತ್ಯವಿಲ್ಲ, ಈ ಬಗ್ಗೆ ಇಡೀ ದೇಶದ ಜನತೆಗೆ ಗೊತ್ತಿದೆ ಎಂದು ಗೌಡ ಹೇಳಿದರು.












Click it and Unblock the Notifications