ಭತ್ತದ ಬೆಳೆ ನಷ್ಟ ಪರಿಹಾರಕ್ಕೆ ದಾವಣಗೆರೆ ರೈತರಿಂದ ಪತ್ರ ಚಳವಳಿ
ದಾವಣಗೆರೆ, ಮೇ 29; ಭತ್ತ ಬೆಳೆದ ರೈತರಿಗೂ 5 ಸಾವಿರ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ತಿಳಿಸಿದರು.
Recommended Video
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, "ಮೆಕ್ಕೆಜೋಳ ಬೆಳೆದ ರೈತರಿಗೆ ಕೊರೊನಾ ಸಂದರ್ಭದಲ್ಲಿ 5 ಸಾವಿರ ಪರಿಹಾರ ಘೊಷಿಸಲಾಗಿದೆ. ಆದರೆ ಭತ್ತ ಬೆಳೆದ ರೈತರನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ 4 ಸಾವಿರ ರೂ ನೀಡುವುದಾಗಿ ಹೇಳಲಾಗಿತ್ತು. ಆದರೆ ಆ ಹಣ ರೈತರ ಖಾತೆಗೆ ಜಮಾವಣೆಯಾಗಿಲ್ಲ. ಇದೀಗ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯ ಹಣಕ್ಕೆ 1 ಸಾವಿರ ಸೇರಿಸಿ 5 ಸಾವಿರ ಪರಿಹಾರ ನೀಡುತ್ತಿದೆ. ರೈತರು 1 ಎಕರೆಗೆ ಮೆಕ್ಕೆಜೋಳ ಬೆಳೆಯಲು 15 ಸಾವಿರ ವೆಚ್ಚ ತಗಲುತ್ತದೆ. ಆದ್ದರಿಂದ ಸರ್ಕಾರ ರೈತರಿಗೆ 15 ಸಾವಿರ ರೂ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.

ಭತ್ತ ಬೆಳೆದ ರೈತರೂ ಸಂಕಷ್ಟದಲ್ಲಿದ್ದಾರೆ. ಖರೀದಿದಾರರು ಅತ್ಯಂತ ಕಡಿಮೆ ದರದಲ್ಲಿ ಭತ್ತ ಖರೀದಿ ಮಾಡುತ್ತಿದ್ದಾರೆ. ಆದ್ದರಿಂದ ಕೇರಳ ಮಾದರಿಯಂತೆ 1 ಕ್ವಿಂಟಲ್ ಭತ್ತಕ್ಕೆ 540 ರೂ ಬೋನಸ್ ಅನ್ನು ರಾಜ್ಯದ ರೈತರಿಗೂ ಕೊಡಬೇಕು. ಕೇಂದ್ರ ಸರ್ಕಾರ 1830 ರೂ ಹಾಗೂ ರಾಜ್ಯ ಸರ್ಕಾರ ಬೋನಸ್ ರೂಪದಲ್ಲಿ 1500 ನೀಡಬೇಕು. ಭತ್ತ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಆಲೂರು ಪರಶುರಾಮ, ಕಾಡಜ್ಜಿ ಪ್ರಕಾಶ್, ಭಗತ್ ಸಿಂಹ ಚಿಕ್ಕಬೂದಿಹಾಳ್ ಇದ್ದರು.












Click it and Unblock the Notifications