ಹುಬ್ಬಳ್ಳಿಯಿಂದ ಬೆಳಗಾವಿಗೆ ರೈತರ ಟ್ರ್ಯಾಕ್ಟರ್ ಜಾಥಾ
ಹುಬ್ಬಳ್ಳಿ, ಡಿ.13 : ಕೃಷಿ ಟ್ರ್ಯಾಕ್ಟರ್ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಒತ್ತಾಯಿಸಿ ರೈತರು ಹುಬ್ಬಳ್ಳಿಯಿಂದ ಬೆಳಗಾವಿಗೆ ಟ್ರ್ಯಾಕ್ಟರ್ ಜಾಥಾ ಹಮ್ಮಿಕೊಂಡಿದ್ದಾರೆ. ಡಿ.15ರ ಸೋಮವಾರ ಜಾಥಾಕ್ಕೆ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಚಾಲನೆ ದೊರೆಯಲಿದೆ.
ಅಖಿಲ ಕರ್ನಾಟಕ ರೈತರ ಹಾಗೂ ಕೃಷಿ ಟ್ರ್ಯಾಕ್ಟರ್ ಮಾಲೀಕರ ಸಂಘ ಈ ಜಾಥಾ ಹಮ್ಮಿಕೊಂಡಿದ್ದು ಸುಮಾರು 500 ಟ್ರ್ಯಾಕ್ಟರ್ಗಳು ಇದರಲ್ಲಿ ಭಾಗವಹಿಸಲಿವೆ. ಡಿ.15ರಂದು ಬೆಳಗ್ಗೆ ಚನ್ನಮ್ಮ ವೃತ್ತದಿಂದ ಟ್ರ್ಯಾಕ್ಟರ್ಗಳಲ್ಲಿ ರೈತರು ಹೊರಡಲಿದ್ದಾರೆ. [ಬೆಳಗಾವಿ ಸುವರ್ಣಸೌಧ ಕಟ್ಟಿದ್ದು ಏಕೆ?]

ರೈತರ ಈ ಜಾಥಾಕ್ಕೆ ಕರ್ನಾಟಕ ಸಂಗ್ರಾಮ ಸೇನೆ, ಭಾರತೀಯ ಕೃಷಿಕ ಸಮಾಜ, ಕರ್ನಾಟಕ ರಾಜ್ಯ ರೈತ ಸಂಘ, ಬಿಸಿಲು ನಾಡಿನ ಹಸಿರು ಸೇನೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ನೀಡಿದ್ದು, ಅವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಕಬ್ಬು ಬೆಳೆಗಾರರಿಗೆ ಮಾತ್ರ ಮಾನ್ಯತೆ ನೀಡುತ್ತಿದೆ. ಸರ್ಕಾರ ಸಣ್ಣ ರೈತರನ್ನು ಕಡೆಗಣಿಸುತ್ತಿದೆ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಬಳಿಯುತ್ತಿದೆ. ಎಲ್ಲ ರೈತರನ್ನೂ ಒಂದೇ ರೀತಿ ನೋಡಬೇಕೆಂದು ಈ ಜಾಥಾದಲ್ಲಿ ತೆರಳಿ ರೈತರು ಸರ್ಕಾರವನ್ನು ಒತ್ತಾಯಿಸಲಿದ್ದಾರೆ.
ಕೃಷಿ ಟ್ರ್ಯಾಕ್ಟರ್ ಸಾಲವನ್ನು ಮನ್ನಾ ಮಾಡಿ ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದ್ದು, ಮನ್ನಾ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಒಂದು ವಾರಗಳ ಅಧಿವೇಶನ ಬಾಕಿ ಇದೆ. ಡಿ.9ರ ಸೋಮವಾರ ಅಧಿವೇಶನ ಆರಂಭವಾದಾಗ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಡಿ.15ರ ಸೋಮವಾರವೂ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ.












Click it and Unblock the Notifications