ರೈತರ ಪ್ರತಿಭಟನೆ: ತಡರಾತ್ರಿ ಅಮಿತ್ ಶಾ, ತೋಮರ್, ರಾಜನಾಥ್ ಸಿಂಗ್ ಸಭೆ
ನವದೆಹಲಿ, ನವೆಂಬರ್ 30: ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ದೆಹಲಿ ನಿವಾಸದಲ್ಲಿ ಭಾನುವಾರ ತಡರಾತ್ರಿ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಪ್ರತಿಭಟನೆಯ ಸ್ಥಳವನ್ನು ಬದಲಿಸುವಂತೆ ಮತ್ತು ಮಾತುಕತೆ ನಡೆಸಲು ಬರುವಂತೆ ಪ್ರತಿಭಟನಾ ನಿರತ ರೈತರಿಗೆ ನೀಡಿದ ಆಹ್ವಾನವನ್ನು ತಿರಸ್ಕರಿಸಿದ ಬಳಿಕ ಈ ಸಭೆ ನಡೆದಿದೆ.
ಕಳೆದ ವಾರ ಶುರುವಾದ ರೈತರ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಪೊಲೀಸ್ ಬಲಪ್ರಯೋಗ ಬಳಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಜತೆಗೆ ದೆಹಲಿಯ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುತ್ತಿರುವ ರೈತರು, ರಾಜಧಾನಿ ದೆಹಲಿಗೆ ಪ್ರವೇಶ ಕಲ್ಪಿಸುವ ಐದು ಪ್ರಮುಖ ಮಾರ್ಗಗಳನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡು ಗಂಟೆ ಮಾತುಕತೆ ನಡೆದಿದೆ.
ಸೋನಿಪಟ್, ರೋಹ್ಟಕ್, ಜೈಪುರ, ಘಾಜಿಯಾಬಾದ್-ಹಾಪುರ್ ಮತ್ತು ಮಥುರಾದಿಂದ ದೆಹಲಿಗೆ ಪ್ರವೇಶ ನೀಡುವ ಐದು ಮಾರ್ಗಗಳನ್ನು ಬ್ಲಾಕ್ ಮಾಡುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ. ನೆರೆಯ ಹರಿಯಾಣದ ಗಡಿಯಲ್ಲಿ ರಸ್ತೆಗಳು ಬಂದ್ ಆಗಿರುವುದರಿಂದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ದೆಹಲಿ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.

ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಶನಿವಾರ ಹೇಳಿಕೆ ನೀಡಿದ್ದ ಗೃಹ ಸಚಿವ ಅಮಿತ್ ಶಾ, ಪ್ರತಿ ಸಮಸ್ಯೆ ಮತ್ತು ಬೇಡಿಕೆಗಳನ್ನು ಉದ್ದೇಶಿಸಲು ಸಿದ್ಧರಿರುವುದಾಗಿ ತಿಳಿಸಿದ್ದರು. ಡಿಸೆಂಬರ್ 3ರಂದು ಮಾತುಕತೆ ನಡೆಸಲು ನಿಗದಿಗೊಳಿಸಲಾಗಿದ್ದು, ಆದಷ್ಟು ಬೇಗನೆ ಸಭೆ ನಡೆಸಬೇಕೆಂದರೆ ರೈತರು ತಮ್ಮ ಪ್ರತಿಭಟನಾ ಸ್ಥಳವನ್ನು ಬದಲಿಸಬೇಕು ಎಂಬ ಷರತ್ತನ್ನುಅಮಿತ್ ಶಾ ಇರಿಸಿದ್ದು, ಅದನ್ನು ರೈತರು ತಿರಸ್ಕರಿಸಿದ್ದಾರೆ.
ಭಾನುವಾರ ರಾತ್ರಿ ನಡೆದ ಬಿಜೆಪಿಯ ಪ್ರಮುಖ ನಾಯಕರ ಸಭೆಯಲ್ಲಿ ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳ ನಡುವಿನ ಮಾತಿನ ಚಕಮಕಿ ಕೂಡ ಪ್ರಸ್ತಾಪಗೊಂಡಿದೆ.












Click it and Unblock the Notifications