ಹಿಂಗಾರು ಬಿತ್ತನೆಗೆ ಸಜ್ಜಾದ ರಾಯಚೂರು ಜಿಲ್ಲೆಯ ರೈತರು
ರಾಯಚೂರು, ಅಕ್ಟೋಬರ್, 10: ಜಿಲ್ಲೆಯಾದ್ಯಂತ ರೈತರು ಭೂಮಿಯನ್ನು ಹದಗೊಳಿಸಿದ್ದಾರೆ. ಎಲ್ಲೆಡೆಯಲ್ಲೂ ಮಳೆರಾಯ ಅಬ್ಬರಿಸಿದ್ದು, ಹಿಂಗಾರು ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ರಾಯಚೂರು ತಾಲೂಕು ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿ ರೈತರು ಈಗಾಗಲೇ ಅಗತ್ಯ ಬೀಜ ಹಾಗೂ ಗೊಬ್ಬರವನ್ನು ಖರೀದಿಸುತ್ತಿದ್ದಾರೆ. ಅಕ್ಟೋಬರ್ ತಿಂಗಳ ಅಂತ್ಯದೊಳಗಾಗಿ ಹಿಂಗಾರು ಬೀಜ ಬಿತ್ತನೆಯು ಬಹುತೇಕ ಶೇಕಡಾ 50ರಷ್ಟು ಪೂರ್ಣವಾಗಲಿದೆ. ರಾಯಚೂರು ತಾಲೂಕಿನ ರೈತರು ಮಾತ್ರ ಅಕ್ಟೋಬರ್ ಕೊನೆಯಲ್ಲಿ ಬೀಜ ಹಾಗೂ ಗೊಬ್ಬರ ಖರೀದಿ ಆರಂಭಿಸುತ್ತಾರೆ. ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ಅಕ್ಟೋಬರ್ 1ರಿಂದಲೇ ವಿತರಿಸುವುದಕ್ಕೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಕೃಷಿ ಇಲಾಖೆ ಸಿದ್ಧಪಡಿಸಿರುವ ಅಂದಾಜಿನ ಪ್ರಕಾರ 2022-23ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಒಟ್ಟು 1,94,387 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಲಿದೆ. ಅದರಲ್ಲಿ ಖುಷ್ಕಿ ಜಮೀನು ಪ್ರಮಾಣ ಶೇಕಡಾ 63ರಷ್ಟಿದ್ದು, ಶೇಕಡಾ 37ರಷ್ಟು ಭೂಮಿಯು ಮಾತ್ರ ನೀರಾವರಿ ಆಗಿದೆ. ಬಹುತೇಕ ರೈತರು ಕಡಲೆ ಹಾಗೂ ಶೇಂಗಾ ಬಿತ್ತನೆಯತ್ತ ಗಮನಹರಿಸಿದ್ದಾರೆ.
ಕಡಲೆ ಬೀಜಗಳನ್ನು ವ್ಯಾಪಕವಾಗಿ ವಿತರಿಸಲಾಗುತ್ತಿದ್ದು, ಶೇಂಗಾ ಬೀಜಗಳ ವಿತರಣೆ ಕೂಡ ಶೀಘ್ರದಲ್ಲೇ ಎಲ್ಲ ಕಡೆಗೂ ಆರಂಭಿಸುವುದಾಗಿ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 4,488 ಕ್ವಿಂಟಾಲ್ ಕಡಲೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ಅದರಲ್ಲಿ ಈಗಾಗಲೇ 1,634 (ಶೇಕಡಾ 36) ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಜೆಜಿ -11 ಹಾಗೂ ಜಾಕಿ - 9218 ತಳಿ ಕಡಲೆ ಬೀಜಗಳು ಲಭ್ಯವಿದೆ.

ರಸಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ
ಕೆಲವು ಕಡೆ ರೈತರು ಜೋಳ ಬಿತ್ತನೆ ಮಾಡುತ್ತಿದ್ದು, ಒಟ್ಟು 22.20 ಕ್ವಿಂಟಾಲ್ ಬೀಜ ದಾಸ್ತಾನು ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಸುವುದಕ್ಕಾಗಿ ಕೃಷಿ ಇಲಾಖೆಯು ಅಕ್ಟೋಬರ್ ತಿಂಗಳಿಗೆ ಒಟ್ಟು 42,287 ಕ್ವಿಂಟಾಲ್ ಪೂರೈಸುವಂತೆ ಬೇಡಿಕೆ ಸಲ್ಲಿಸಿದೆ. ಅದರಲ್ಲಿ 212 ಕ್ವಿಂಟಾಲ್ ಮಾತ್ರ ರಸಗೊಬ್ಬರ ಸರಬರಾಜು ಆಗಿದೆ. ಎನ್ಪಿಕೆ ಗೊಬ್ಬರಕ್ಕಾಗಿ 24,049 ಕ್ವಿಂಟಾಲ್ಗೂ ಹೆಚ್ಚು ಬೇಡಿಕೆ ಇದೆ. ಈ ವರ್ಷ ಮಳೆ ಉತ್ತಮವಾಗಿ ಸುರಿದಿದ್ದು, ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಕ್ಟೋಬರ್ 1ರಿಂದ 6 ರವರೆಗೂ ಜಿಲ್ಲೆಯಲ್ಲಿ ಒಟ್ಟು 35 ಮಿಲಿ ಮೀಟರ್ ಮಳೆ ದಾಖಲಾಗಿದೆ. ವಾಡಿಕೆ ಮಳೆ 39 ಮಿಲಿ ಮೀಟರ್ ಆಗಬೇಕಿತ್ತು. ದೇವದುರ್ಗ ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದ ಭಾರಿ ಪ್ರಮಾಣದಲ್ಲಿ ಮುಂಗಾರು ಬೆಳೆಗಳು ಹಾನಿಗೊಳಗಾಗಿವೆ. ಇದೀಗ ರೈತರು ಹಿಂಗಾರು ಬಿತ್ತನೆಯತ್ತ ಚಿತ್ತ ನೆಟ್ಟಿದ್ದಾರೆ. ತಾಲೂಕಿನಲ್ಲಿ ಅತಿ ಹೆಚ್ಚು ಕೆಂಪು ಮಸಾರಿ ಜಮೀನು ಇರುವ ಪ್ರದೇಶದಲ್ಲಿ ಶೇಂಗಾ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ.

ಶೇಂಗಾ ಬೀಜಕ್ಕೆ ಹೆಚ್ಚಾಯ್ತು ಬೇಡಿಕೆ
'ನೀರಾವರಿ ಆಶ್ರಿತ ರೈತರು ಹಿಂಗಾರು ಬಿತ್ತನೆಗಾಗಿ ಶೇಂಗಾ ಬೆಳೆಯತ್ತ ಆಸಕ್ತಿ ವಹಿಸಿದ್ದು, ಬೀಜಕ್ಕಾಗಿ ಹತ್ತಿರದ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬೀಜ ಪಡೆಯಬಹುದು. ಜಾಲಹಳ್ಳಿ, ಗಬ್ಬೂರು, ಅರಕೇರಾ ಮತ್ತು ಪಟ್ಟಣದ ರೈತ ಸಂಪರ್ಕ ಕಚೇರಿಯಲ್ಲಿ ಕಡಲೆ, ಜೋಳ ಲಭ್ಯ ಇದೆ. ಆದರೆ ಶೇಂಗಾ ಬೀಜ ಇನ್ನು ಬಂದಿಲ್ಲ. ಪ್ರಸ್ತಾವನೆ ಸಲ್ಲಿಸಿ ಇತರೆ ಬೀಜಗಳನ್ನು ಆದಷ್ಟು ಬೇಗ ರೈತರಿಗೆ ಸಿಗುವಂತೆ ಕ್ರಮ ಕೈಗೊಳ್ಳುತ್ತೇವೆ' ಎಂದು ಸಹಾಯಕ ಕೃಷಿ ನಿರ್ದೇಶಕ ಹೊಸ ಬಸವರಾಜ ಸಿದ್ದರೆಡ್ಡಿ ತಿಳಿಸಿದರು.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹೇಳಿದ್ದೇನು?
ತಾಲೂಕಿನ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆ ಬಿತ್ತನೆಯ ನಿರೀಕ್ಷೆ ಹೊಂದಲಾಗಿದೆ. ಈ ವರ್ಷ ಅತಿ ಹೆಚ್ಚು ಮಳೆ ಸುರಿದಿದ್ದು, ಕೆರೆ ಕಟ್ಟೆಗಳು ತುಂಬಿವೆ. ಅಂತರ್ಜಲ ಮಟ್ಟ ಹೆಚ್ಚಿದ್ದು, ಇದರಿಂದ ಶೇಂಗಾ ಬಿತ್ತನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. 'ಹಿಂಗಾರು ಬಿತ್ತನೆಗೆ ಬೇಕಾಗುವಷ್ಟು ಕಡಲೆ ಮತ್ತು ಬಿಳಿಜೋಳ ಬೀಜ ಸಂಗ್ರಹಣೆಗೆ ಬೇಡಿಕೆ ಇಟ್ಟಿದ್ದೇವೆ. ಈಗಾಗಲೇ 1585 ಕ್ವಿಂಟಾಲ್ ಕಡಲೆ ಮತ್ತು 16 ಕ್ವಿಂಟಾಲ್ ಬಿಳಿಜೋಳ ಬೀಜ ಸಂಗ್ರಹಣೆ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ಇನ್ನು 2 ಸಾವಿರ ಕ್ವಿಂಟಾಲ್ ದಾಸ್ತಾನು ಬರಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ' ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಿದ್ದಪ್ಪ ಬಾಚಿಹಾಳ ತಿಳಿಸಿದರು.

ಬಿತ್ತನೆ ಮಾಡಲಾಗುವ ಭೂಮಿಯ ಪ್ರಮಾಣ
ರಾಯಚೂರು - 4,726 ಹೆಕ್ಟೇರ್ ಬಿತ್ತನೆ
ಮಾನ್ವಿ - 12,614 ಹೆಕ್ಟೇರ್ ಬಿತ್ತನೆ
ಸಿರವಾರ - 10,956 ಹೆಕ್ಟೇರ್ ಬಿತ್ತನೆ
ದೇವದುರ್ಗ - 33,723 ಹೆಕ್ಟೇರ್ ಬಿತ್ತನೆ
ಲಿಂಗಸುಗೂರು - 56,668 ಹೆಕ್ಟೇರ್ ಬಿತ್ತನೆ
ಮಸ್ಕಿ - 50,797 ಹೆಕ್ಟೇರ್ ಬಿತ್ತನೆ












Click it and Unblock the Notifications