ಸಣ್ಣ ಪುಟ್ಟ ಕೈಗಾರಿಕಾ ಘಟಕಗಳು ಕೆಲಸ ಮಾಡುವಂತಾಗಲಿ...
ಕೊರೊನಾ
ವೈರಸ್ ಸೋಂಕಿನ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಸೊರಗಿವೆ. ಅಲ್ಪ ಸ್ವಲ್ಪ ಉಸಿರಾಡಲು ಅವಕಾಶ ಸಿಕ್ಕಿದ್ದ ಕೃಷಿ ಕ್ಷೇತ್ರದ ಮೇಲೂ ಬಹುದೊಡ್ಡ ಪೆಟ್ಟು ಬಿದ್ದಿದೆ. ಆ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮೇ 7ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಸಂಘಟನೆಗಳ ಮುಖಂಡರುಗಳ ಸಭೆ ಕರೆದಿದ್ದರು. ಅನೇಕ ಕೃಷಿ ಚಿಂತಕರು, ರೈತ ಮುಖಂಡರು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರೆಲ್ಲರನ್ನು ಒನ್ ಇಂಡಿಯಾ ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಸರಣಿಯನ್ನು ಪ್ರಕಟಿಸುತ್ತಿದೆ. id="toptextpromo"> id='are-slot-1' class='oiad oi-axt oiadv'>ಸರಣಿ
5ರಲ್ಲಿ ರೈತ ಮುಖಂಡರಾದ ನಂದಿನಿ ಜಯರಾಮ್ ಒನ್ ಇಂಡಿಯಾಗೆ ನೀಡಿದ ಸಂದರ್ಶನದ ಸಾರಾಂಶ ಸರ್ಕಾರದ ಗಮನಕ್ಕೆ ಮತ್ತು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. id='are-slot-2' class='oiad oi-axt oiadv'>
ನಂದಿನಿ ಜಯರಾಮ್ ಅನುಭವದ ಮಾತು...
ನಮ್ಮ ತೋಟದ್ದೇ ಉದಾಹರಣೆ ನೋಡೋದಾದ್ರೆ, ತೆಂಗಿನ ಕಾಯಿ ಕೀಳಿಸಿ ಮಾರುಕಟ್ಟೆಗೆ ತಗೊಂಡು ಹೋಗಬೇಕು ಅನ್ನುವಷ್ಟರಲ್ಲಿ ಲಾಕ್ ಡೌನ್ ಬಂತು. ಹದಿನೈದಿಪ್ಪತ್ತು ಸಾವಿರ ಕಾಯಿ. ಎಲ್ಲಿಟ್ಕೊಳ್ಳೋದು. ಕೊಬ್ಬರಿ ಮಾಡೋಕೆ ಅಂತ ಇರೋ ಅಟ್ಟದಲ್ಲಿ ಜಾಗ ಇಲ್ಲ. ಈಗಾಗ್ಲೇ ಅಲ್ಲಿ ಕೊಬ್ಬರಿಗಾಗಿ ಕಾಯಿ ತುಂಬಿ ಆಗಿದೆ. ಕೀಳಿಸಿರುವ ಕಾಯಿ ಮಾರೋಕೆ ಮಾರ್ಕೆಟ್ ಇಲ್ಲ. ಇಂಥ ಸಂದರ್ಭದಲ್ಲಿ ಎಲ್ರೂ ಕೊಬ್ಬರಿ ಮಾಡೋಕೆ ಹಾಕ್ತಾರೆ. ಕಡೆಗೆ ಕೊಬ್ಬರಿ ರೇಟ್ ಬಿದ್ದೋಗಿ ಮತ್ತೊಂದು ಸಮಸ್ಯೆ ಎದುರಾಗ್ತದೆ.
ಕೃಷಿಯಲ್ಲಿ ಒಮ್ಮೆ ಎಡವುದ್ರೆ ಬಹಳ ಕಷ್ಟ. ಮತ್ತೆ ಎಲ್ಲವನ್ನೂ ಹಿಡಿತಕ್ಕೆ ತಗೋಳೋಕೆ ಬಹಳ ಪ್ರಯಾಸ ಪಡಬೇಕು. ಈಗ ನೋಡಿ, ಮೊದಲು ಕೀಳಿಸಿದ್ದ ಕಾಯಿಗಳೇ ಮಾರಾಟ ಆಗಿಲ್ಲ. ಮತ್ತೆ ಕಾಯಿ ಕೀಳಿಸಬೇಕಿದೆ !

ಮುಖ್ಯ ಬೆಳೆಗಳಿಗೆ ಮಾರುಕಟ್ಟೆ ಇಲ್ಲದಿದ್ದರೆ ಕಷ್ಟ
ತೆಂಗಿನ ತೋಟದ ಮಧ್ಯೆ ಉಪಬೆಳೆಯಾಗಿ ಬಾಳೆ ಬೆಳೆದಿದ್ವಿ. ಹಣ್ಣು ಕೇಳೋರಿಲ್ಲ. ಗಿಡದಲ್ಲೇ ಹಣ್ಣಾಗಿ ಹಾಳಾಗ್ತಿರೋದಲ್ದೆ ಕೋತಿಗಳ ಕಾಟ ಬೇರೆ ಶುರುವಾಗಿದೆ. ಬಾಳೆಯಿಂದ ಬರೋ ಆದಾಯ ಖೋತಾ ಆಯ್ತು ಅಂದ್ಕೊಳ್ಳುವಷ್ಟರಲ್ಲಿ ಕೋತಿಗಳು ಎಳನೀರು ಮತ್ತು ಹಣ್ಣಿನ ಬೆಳೆಗಳನ್ನು ನಾಶ ಮಾಡ್ತಿವೆ. ನಮ್ಮ ತೋಟದಲ್ಲಿ ಮುಖ್ಯ ಬೆಳೆಯಲ್ಲದ ಹಲಸು, ಮಾವು ಅಕ್ಕಪಕ್ಕದವರ ಜೊತೆ ಹಂಚಿ ತಿನ್ನೋದು ಖುಷಿ ಕೊಡುತ್ತೆ. ಆದ್ರೆ ಮುಖ್ಯ ಬೆಳೆಗಳಿಗೆ ಮಾರ್ಕೆಟ್ ಇಲ್ಲದಾಗ ಕಷ್ಟ.
ಹಾಲಿನದ್ದು ಇನ್ನೊಂದು ವಿಚಾರ. ಈ ಕೊರೊನಾ ಭಯದಿಂದ ಕರೆದ ಹಾಲು ತಗೊಂಡೋಗಿ ಡೈರಿಗೆ ಹಾಕೋಕೆ ಯಾರೂ ಮುಂದಾಗಲಿಲ್ಲ. ಮನೆಲೇ ಉಳಿಸ್ಕೊಂಡು, ಕಾಯಿಸಿ, ಹೆಪ್ಪಾಕಿ, ಮೊಸರು ಬೆಣ್ಣೆ ಮಾಡೋದೊಂದು ಕೆಲಸ. ಕೃಷಿಯಲ್ಲಿ ಒಂದು ಚೂರು ಯಡವಟ್ಟಾದ್ರೆ ಒಂದಕ್ಕೊಂದು ಲಿಂಕ್, ಸಮಸ್ಯೆಗಳ ಸರಮಾಲೆ ಶುರುವಾಗುತ್ತೆ. ತೋಟದ ಕೆಲಸಗಳಿಗೆ ಅಂತ ಕೂಲಿ ಆಳುಗಳಿಗೆ ಕಮಿಟ್ ಮಾಡ್ಕೊಂಡಿರ್ತೀವಿ. ಅವರ ಸಮಯಕ್ಕೆ ಹಣ ಕೊಡಬೇಕು. ಏನೋ ಸಮಸ್ಯೆಗಳು ಹೇಳಿ ತಪ್ಪಿಸ್ಕೊಳ್ಳೋ ಹಾಗಿಲ್ಲ. ಹಳ್ಳಿಗಳಲ್ಲಿ ಮಾತಿಗೆ ತಪ್ಪಿದ್ರು ಅನ್ನೋ ಮಾತು ಬೇರೆ ಬರುತ್ತೆ. ಹೀಗೆ...

ಈಗ ತತ್ ಕ್ಷಣ ಏನು ಆಗಬೇಕು?
ಲಾಕ್ ಡೌನ್ ಕೊಂಚ ಸಡಿಲಗೊಳಿಸಿದ ಮೇಲೆ ಅನೇಕ ಕಾರ್ಖಾನೆಗಳು ಆರಂಭವಾಗಿವೆ. ಆದ್ರೆ ಜಿಲ್ಲಾ ತಾಲ್ಲೂಕು ಮಟ್ಟದ ಸಣ್ಣ ಪುಟ್ಟ ಕೈಗಾರಿಕೆಗಳು ಕೆಲಸ ಮಾಡೋಕೆ ಆಗ್ತಿಲ್ಲ. ಉದಾಹರಣೆಗೆ ತೆಂಗಿನ ಎಣ್ಣೆ ತೆಗೆಯುವ, ಕಾಯಿ ಪೌಡರ್ ಮಾಡುವ ಪುಟ್ಟ ಕೈಗಾರಿಕೆಗಳ ಕೆಲಸ ಆರಂಭವಾಗಿಯೇ ಇಲ್ಲ. ಇದರ ಜೊತೆಗೆ ಮಂಡಕ್ಕಿ, ಅವಲಕ್ಕಿ ಮಾಡುವ ಘಟಕಗಳೂ ಮುಚ್ಚಿಯೇ ಇವೆ. ಹೀಗಾದಾಗ ಒಂದಿಡೀ ಚೈನ್ ಲಿಂಕ್ ಕಟ್ ಆಗುತ್ತೆ. ಮೊದಲು ಇವೆಲ್ಲಾ ಕೆಲಸ ಮಾಡುವಂತೆ ಆಗಬೇಕು. ಆರೋಗ್ಯದ ದೃಷ್ಟಿಯಿಂದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಈ ಕೆಲಸಗಳು ಆರಂಭಿಸಬಹುದು. ಕೆ.ಆರ್. ಪೇಟೆ ಎಳನೀರು ಮಾರ್ಕೆಟ್ ಅಧಿಕೃತವಾಗಿ ಓಪನ್ ಆಗಿಲ್ಲ. ಆದರೆ ಅಲ್ಲೇ ಸ್ವಲ್ಪ ದೂರದಲ್ಲಿ ಮಾರ್ಕೆಟ್ ವಹಿವಾಟು ಖಾಸಗಿಯಾಗಿ ನಡೀತಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಏಕೆ ಮಾರ್ಕೆಟ್ ತೆರೆಯಬಾರದು?

ದೀರ್ಘಾವಧಿಯಲ್ಲಿ ಸರ್ಕಾರ ಏನೆಲ್ಲಾ ಮಾಡಬಹುದು?
ಸರ್ಕಾರದ ಜವಾಬ್ದಾರಿ ದೊಡ್ಡದಿದೆ. ಮೊದಲು ರೈತ ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳನ್ನು ಇಲ್ಲವಾಗಿಸಬೇಕು. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಭದ್ರತೆ ಒದಗಿಸಬೇಕು. ಹಾಲಿಗೆ ಹೇಗೆ ಸ್ಥಳೀಯವಾಗಿ procure ಮಾಡೋ ವ್ಯವಸ್ಥೆ ಇದೆಯೋ ಅದೇ ರೀತಿ ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಸ್ಥಳೀಯವಾಗಿಯೇ ಕೊಳ್ಳುವ ವ್ಯವಸ್ಥೆ ಮಾಡಬೇಕು. ಸರ್ಕಾರ ಇದಕ್ಕೇನು ಹೊಸದಾಗಿ ಬಂಡವಾಳ ಹೂಡಬೇಕಿಲ್ಲ.
ತಾವು ಬೆಳೆದ ಬೆಳೆಯನ್ನು ಸರ್ಕಾರಿ ವ್ಯವಸ್ಥೆಯಲ್ಲಿಯೇ ಮಾರಾಟ ಮಾಡುತ್ತೇವೆಂಬ ಪ್ರಾಮಾಣಿಕತೆ ರೈತರಲ್ಲೂ ಬೇಕು. ಸರ್ಕಾರಗಳಿಗೂ ಬದ್ಧತೆ ಇರಬೇಕು. ಇದೆಲ್ಲಾ ಸಹಕಾರ ಸಂಘಗಳ ಮುಖೇನವೇ ಆಗಬೇಕು. ಈ ರೀತಿಯ ವ್ಯವಸ್ಥೆ ಬಂದಾಗ ರೈತರು ಕೂಡ ಮೊದಲೇ ಸಹಕಾರ ಸಂಸ್ಥೆಗಳಿಗೆ ತಾವು ಏನೆಲ್ಲಾ ಬೆಳೆಯುತ್ತಿದ್ದೇವೆ ? ಯಾವ ಸಮಯಕ್ಕೆ ಎಷ್ಟು ಪ್ರಮಾಣ ಉತ್ಪಾದಿಸುತ್ತೇವೆ ಎಂಬ ಮುನ್ನಂದಾಜನ್ನು ಕೂಡಾ ಮೊದಲೇ ಹೇಳಿ ಉತ್ಪನ್ನ ತಂದು ಮಾರುವಂತಹ ಸನ್ನಿವೇಶ ಬರಬೇಕು.
ಅಭಿವೃದ್ಧಿ ಎಂದೆಲ್ಲಾ ದೊಡ್ಡ ದೊಡ್ಡ ಮಾತನಾಡುವ ನಾಯಕರು, ಮೊದಲು ಹಳ್ಳಿಗಳ ಅಭಿವೃದ್ಧಿಯತ್ತ ಗಮನಹರಿಸಬೇಕು. ಕೃಷಿ ಕ್ಷೇತ್ರ ಅಭಿವೃದ್ಧಿ ಮಾಡದೆ ಯಾವ ಅಭಿವೃದ್ಧಿ ಸಾಧ್ಯ?
ಸರಣಿ ಮುಂದುವರೆಯುವುದು












Click it and Unblock the Notifications