ರೈತರಿಗೆ ಖುಷಿ ಕೊಡದ ಕೇಂದ್ರದ ಎಂಎಸ್ಪಿ ಕೊಡುಗೆ
ನವದೆಹಲಿ, ಜುಲೈ 5: ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಾಗ ರೈತರನ್ನು ಓಲೈಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾಡಿರುವ ಏರಿಕೆ ರೈತರಲ್ಲಿ ಖುಷಿ ಮೂಡಿಸಿಲ್ಲ.
ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟದ ಸಭೆ ಬುಧವಾರ ನಿರ್ಧರಿಸಿತ್ತು. ಬಜೆಟ್ ವೇಳೆ ನೀಡಲಾಗಿದ್ದ ಭರವಸೆಯನ್ನು ಈಡೇರಿಸುವ ಸಲುವಾಗಿ ಈ ದರ ಹೆಚ್ಚಳ ಮಾಡಲಾಗಿದೆ.
ದರ ಏರಿಕೆಯು A2+FL ಸೂತ್ರದ ಆಧಾರದಲ್ಲಿ ಸಿದ್ಧವಾಗಿದ್ದು, ಇದು ವಾಸ್ತವ ವೆಚ್ಚ ಮತ್ತು ಕುಟುಂಬ ಕಾರ್ಮಿಕರ ಮೌಲ್ಯವನ್ನು ಒಳಗೊಂಡು ಬೆಳೆಗೆ ತಗುಲಬಹುದಾದ ಒಟ್ಟು ಉತ್ಪಾದನಾ ವೆಚ್ಚವನ್ನು ಒಳಗೊಳ್ಳುತ್ತದೆ.
ಆದರೆ, ದೇಶದಾದ್ಯಂತ ರೈತ ಸಂಘಟನೆಗಳು ವೆಚ್ಚ ಲೆಕ್ಕಾಚಾರದ ಕುರಿತು ಅಸಂತೋಷ ವ್ಯಕ್ತಪಡಿಸಿವೆ. ಸರ್ಕಾರವು C2 ವೆಚ್ಚ ಲೆಕ್ಕಾಚಾರವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು ಎಂಬುದಾಗಿ ಸಂಘಟನೆಗಳು ಹೇಳಿವೆ.

ಎಂಎಸ್ಪಿ ಏರಿಕೆ ಲೆಕ್ಕಾಚಾರದ ಸೂತ್ರವನ್ನು ಸರಿಯಾಗಿ ಸಿದ್ಧಪಡಿಸಿಲ್ಲ. ಇದರಿಂದ ರೈತರಿಗೆ ಅಷ್ಟೇನೂ ಲಾಭವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
C2 ಸೂತ್ರದಲ್ಲಿ ಭೂಮಿಯ ಬಾಡಿಗೆ ಮೇಲೆ ವಿನಿಯೋಗಿಸಿರುವ ವೆಚ್ಚ, ಬಂಡವಾಳದ ಮೇಲಿನ ಬಡ್ಡಿ ಸೇರಿದಂತೆ ವಿವಿಧ ಬಗೆಯ ವೆಚ್ಚಗಳನ್ನು ಒಳಗೊಂಡಿರುತ್ತದೆ. ಇದರಿಂದ ಉತ್ಪಾದನೆ ವೆಚ್ಚ ಇನ್ನೂ ಹೆಚ್ಚಾಗಿರುತ್ತದೆ.
ಕನಿಷ್ಠ ಬೆಂಬಲ ಬೆಲೆಯಲ್ಲಿನ ಏರಿಕೆ ಯಾವುದಕ್ಕೂ ಸಾಲುವುದಿಲ್ಲ. ಬೆಳೆಗಳ ಉತ್ಪಾದನೆಯಲ್ಲಿ ಎಲ್ಲವೂ ಒಳಗೊಳ್ಳುವುದರಿಂದ A2+FL ಸೂತ್ರ ಇಲ್ಲಿ ಮುಖ್ಯವಾಗುವುದಿಲ್ಲ. ಎಂಎಸ್ಪಿಯನ್ನು ಲೆಕ್ಕಾಚಾರ ಮಾಡಲು C2 ಸೂತ್ರವನ್ನು ಬಳಸಿಕೊಳ್ಳಬೇಕು ಎಂದೇ ಸ್ವಾಮಿನಾಥನ್ ವರದಿ ಹೇಳುತ್ತದೆ ಎಂದು ಉತ್ತರ ಪ್ರದೇಶದ ರೈರ ಮುಖಂಡ ಪುಷ್ಪೇಂದ್ರ ಸಿಂಗ್ ಹೇಳಿದ್ದಾರೆ.
A2+FL ವೆಚ್ಚದ ಆಧಾರದಲ್ಲಿ ಖಾರಿಫ್ ಬೆಳೆಗಳಿಗೆ ಒಟ್ಟು ವೆಚ್ಚದ 1.5 ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ 2018ರ ಫೆಬ್ರುವರಿಯಲ್ಲಿ ಮಂಡನೆಯಾದ ಬಜೆಟ್ ವೇಳೆ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು. ಸ್ವಾಮಿನಾಥನ್ ಅವರು ನೀಡಿರುವ ವರದಿಯಲ್ಲಿ ಪ್ರಸ್ತಾಪಿಸುವಂತೆ C2 ವೆಚ್ಚದ ಸೂತ್ರವನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ ಎಂದಿದ್ದರು.
ಈ ವರ್ಷದ ಆರಂಭದಿಂದಲೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಒತ್ತಡಕ್ಕೆ ಒಳಗಾದ ಕೇಂದ್ರ ಸರ್ಕಾರ ಎಂಎಸ್ಪಿ ಏರಿಕೆ ಘೋಷಣೆ ಮಾಡಿದೆ ಎನ್ನಲಾಗಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಮಹಾರಾಷ್ಟ್ರಗಳ ರೈತ ಸಂಘಟನೆಗಳು ಒದಗಿಸಿರುವ ಮಾಹಿತಿ ಪ್ರಕಾರ, C2 ವೆಚ್ಚ ಲೆಕ್ಕಾಚಾರದಲ್ಲಿ ಎಂಎಸ್ಪಿ ನಿಗದಿಪಡಿಸಿದರೂ ಈಗಿನ ಬೆಲೆಗಿಂತ ಸುಮಾರು ಶೇ 40ರಷ್ಟು ಏರಿಕೆ ಮಾಡಬೇಕಾಗುತ್ತದೆ.
ಭತ್ತಕ್ಕೆ ಈ ಹಿಂದೆ ಕ್ವಿಂಟಲ್ಗೆ 1,550 ರೂ ದರವಿತ್ತು. ಇದಕ್ಕೆ ಅಂದಾಜು 250 ರೂ ಎಂಎಸ್ಪಿ ಹೆಚ್ಚಳದಿಂದ ಪ್ರತಿ ಕ್ವಿಂಟಲ್ ಬೆಲೆ 1,800ಕ್ಕೆ ಹೆಚ್ಚಿದೆ. ಆದರೆ C2 ಲೆಕ್ಕಾಚಾರದಡಿ ಕ್ವಿಂಟಲ್ ಭತ್ತಕ್ಕೆ ತಗುಲುವ ವೆಚ್ಚ 2,250 ಆಗುತ್ತದೆ.
ಪ್ರಸ್ತುತ ಏರಿಕೆ ಮಾಡಿರುವ ಎಂಎಸ್ಪಿಯ ಒಟ್ಟು ವೆಚ್ಚ ಅಂದಾಜು 33,500 ಕೋಟಿ ರೂ.ನಷ್ಟು ಆಗಲಿದೆ.
ಕೇಂದ್ರ ಸರ್ಕಾರವು ಎಂಎಸ್ಪಿ ಹೆಚ್ಚಳ ಮಾಡಿದ್ದರೂ, ರಾಜ್ಯಗಳ ಖರೀದಿ ಕಾರ್ಯಕ್ರಮಗಳ ಮೇಲೆ ರೈತರ ಲಾಭಾಂಶ ಪ್ರಮಾಣ ಅವಲಂಬಿತವಾಗಿದೆ.
ಬೆಳೆಗಳನ್ನು ಖರೀದಿಸುವ ಪ್ರಮಾಣ ಮತ್ತು ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರಗಳು ಹೆಚ್ಚು ಶ್ರಮವಹಿಸಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಮೋಹಿನಿ ಮೋಹನ್ ಹೇಳಿದ್ದಾರೆ.
ಭತ್ತ ಮತ್ತು ಬೇಳೆಕಾಳುಗಳಿಗೆ ಹೆಚ್ಚಿನ ಪ್ರಮಾಣದ ಎಂಎಸ್ಪಿ ಘೋಷಿಸಲಾಗಿದೆ. ಆದರೆ ಇದರಲ್ಲಿ ಹೆಚ್ಚಿನ ಲಾಭವನ್ನು ಕಿರುಧಾನ್ಯಗಳು ಪಡೆದುಕೊಳ್ಳಲಿವೆ. ಭತ್ತದ ಮೇಲಿನ ಎಂಎಸ್ಪಿ ವೆಚ್ಚದಿಂದ ಹೆಚ್ಚುವರಿಯಾಗಿ 12,300 ಕೋಟಿ ಹೊರೆಬೀಳಲಿದೆ.












Click it and Unblock the Notifications