5 ಎಕರೆ ಜಮೀನಿಗೆ 4 ಲಕ್ಷ ರೂ ಪರಿಹಾರ! ಕಂಗೆಟ್ಟ ರೈತ ಆತ್ಮಹತ್ಯೆ
ಮುಂಬೈ, ಜನವರಿ 29: ಮಹಾರಾಷ್ಟ್ರದ ಸೆಕ್ರೇಟರಿಯೇಟ್ ಕಚೇರಿಯ ಬಳಿ ಕಳೆದ ವಾರ ವಿಷ ಸೇವಿಸಿದ್ದ ರೈತ ಧರ್ಮ ಪಾಟೀಲ್(84), ಇಲ್ಲಿನ ಜೆಜೆ ಆಸ್ಪತ್ರೆಯಲ್ಲಿ ನಿನ್ನೆ(ಜ.28) ಸಾವಿಗೀಡಾಗಿದ್ದಾರೆ.
ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸುವುದಕ್ಕಾಗಿ ಸರ್ಕಾರ ಅವರ ಜಮೀನನ್ನು ಒತ್ತುವರಿ ಮಾಡಿಕೊಂಡ ಮೇಲೆ ನೀಡಿದ ಅಲ್ಪ ಪರಿಹಾರದ ಮೊತ್ತದ ಕುರಿತು ಬೇಸರ ವ್ಯಕ್ತಪಡಿಸಿ ಅವರು ವಿಷ ಸೇವಿಸಿದ್ದರು. ಒಂದು ವಾರದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಸಾವನ್ನಪ್ಪಿದ್ದಾರೆ.
"ನಮ್ಮ ತಂದೆಯವರ ಐದು ಎಕರೆ ಜಮೀನಿಗೆ ಬದಲಾಗಿ ಸರ್ಕಾರ ಕೇವಲ 4 ಲಕ್ಷ ರೂ. ಪರಿಹಾರ ನೀಡಿತ್ತು. ಈ ಕುರಿತು ಹಲವು ಬಾರಿ ಅವರು, ತಮ್ಮ 84 ರ ಇಳಿ ವಯಸ್ಸಿನಲ್ಲೂ ಸರ್ಕಾರಿ ಕಚೇರಿಗಳಿಗೆ ಅಲೆದಿದ್ದರು. ಆದರೆ ಅವರ ಯಾವ ಕೂಗನ್ನೂ ಸರ್ಕಾರ ಆಲಿಸಲಿಲ್ಲ" ಎಂದು ಮೃತ ಪಾಟೀಲ್ ಅವರ ಪುತ್ರ ಭಾವುಕರಾಗಿ ನುಡಿಸಿದ್ದಾರೆ.

ಈ ಕುರಿತು ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಮಾಹಿತಿಯ ಪ್ರಕಾರ ಪಾಟಿಲ್ ಅವರ ಜಮೀನನ್ನು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಅವಧಿಯಲ್ಲೇ ಒತ್ತುವರಿ ಮಾಡಿಕೊಳ್ಳಲಾಗಿತ್ತು!












Click it and Unblock the Notifications