'ಮೋದಿ ಅಧಿಕಾರ ಮುಗಿಯುವ 2024ರವರೆಗೂ ಪ್ರತಿಭಟನೆ ಮುಂದುವರಿಸಲು ಸಿದ್ಧ'
ನವದೆಹಲಿ, ಡಿಸೆಂಬರ್ 16: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಎಷ್ಟು ಸುದೀರ್ಘ ಅವಧಿಗೆ ಬೇಕಾದರೂ ಪ್ರತಿಭಟನೆ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಎರಡನೆಯ ಅಧಿಕಾರಾವಧಿ 2024ರಲ್ಲಿ ಅಂತ್ಯಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸಲು ಸಿದ್ಧ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ರೈತ ಚಳವಳಿಗೆ ಕಳಂಕ ತರುವ ಮೂಲಕ ಅದನ್ನು ಒಡೆಯುವ ಶಕ್ತಿಗಳನ್ನು ಎದುರಿಸಲು ಕಾವಲು ಕಾದಿರುವುದಾಗಿ ಹೇಳಿದ್ದಾರೆ.
'ದೆಹಲಿಗೆ ಬರುವ ಮುನ್ನ ಆರು ತಿಂಗಳಲ್ಲಿ ನಾವು ಮನೆಗಳ ಒಳಗೆ ಸುಮ್ಮನೆ ಕುಳಿತಿದ್ದವರಲ್ಲ. ಪಂಜಾಬ್ನಲ್ಲಿ ಕೂಡ ನಾವು ಉಪ ಆಯುಕ್ತರ ಕಚೇರಿಗಳ ಮುಂದೆ ಹಗಲು ರಾತ್ರಿ ಧರಣಿಗಳನ್ನು ನಡೆಸಿದ್ದೇವೆ. ರೈಲ್ ರೋಕೋ ಮೋರ್ಚಾ ಆಯೋಜಿಸಿದ್ದೇವೆ. ಹೀಗಾಗಿ ಪ್ರತಿಭಟನೆ ನಡೆಸಿ ಬೇಸರವಾಗಿ ನಾವು ವಾಪಸ್ ಹೋಗುತ್ತೇವೆ ಎಂದು ಅಂದುಕೊಂಡರೆ ಅದು ಅವರ ತಪ್ಪು' ಎಂದು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಅಧ್ಯಕ್ಷ ಸತ್ನಂ ಸಿಂಗ್ ಪನ್ನು ತಿಳಿಸಿದ್ದಾರೆ.

'ದೆಹಲಿ ಚಲೋ ಚಳವಳಿಯ ಸಲುವಾಗಿ ದೆಹಲಿಗೆ ಬರುವ ಮುನ್ನ ನಾವು ಸುದೀರ್ಘ ಅವಧಿಯ ಪ್ರತಿಭಟನೆಗೆ ಸಜ್ಜುಗೊಂಡಿದ್ದೆವು. ಆರು ತಿಂಗಳಿಗಾಗುವಷ್ಟು ಕಾಲ ಪಡಿತರಗಳನ್ನು ತಂದಿದ್ದೆವು. ಪಂಜಾಬ್ನಲ್ಲಿನ ನಮ್ಮ ಜನರು ಮತ್ತಷ್ಟು ಆಹಾರ ತರಲಿದ್ದಾರೆ' ಎಂದಿದ್ದಾರೆ.
'ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೂ ನಾವು ಹಿಂದಕ್ಕೆ ಸರಿಯುವುದಿಲ್ಲ. ಮೋದಿ ಅವರ ಸಂಪೂರ್ಣ ಅವಧಿ ಮುಗಿಯುವವರೆಗೆ ಬೇಕಾದರೂ ನಾವಿಲ್ಲಿ ಕೂರುತ್ತೇವೆ. ಸರ್ಕಾರದ ಪರವಾಗಿರುವ ಸಂಘಟನೆಗಳು ನಮ್ಮ ಚಳವಳಿಯ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿವೆ ಎನ್ನುವುದು ನಮಗೆ ತಿಳಿದಿದೆ. ಆದರೆ ಅದಕ್ಕೆ ನಾವು ಅವಕಾಶ ನೀಡುವುದಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications