ಮುಖ್ಯಮಂತ್ರಿಗೆ ಹೃದಯ ಹಿಂಡುವ ಡೆತ್ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ
Recommended Video

ಮಂಡ್ಯ, ನವೆಂಬರ್ 23: ಮಂಡ್ಯದ ರೈತನೊಬ್ಬ ಸಿಎಂ ಕುಮಾರಸ್ವಾಮಿ ಹೆಸರಲ್ಲಿ ಹೃದಯ ಹಿಂಡುವ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟಿದ್ದಾನೆ.
ಮಂಡ್ಯ ತಾಲ್ಲೂಕಿನ, ದುದ್ದ ಹೋಬಳಿಯ ಕನ್ನಹಟ್ಟಿ ಗ್ರಾಮದ ಜಯಕುಮಾರ್ (43) ಆತ್ಮಹತ್ಯೆಗೆ ಶರಣಾಗಿರುವ ರೈತ. ಆತನ, ಆತನ ಕುಟುಂಬದ ಸ್ಥಿತಿಯನ್ನು ಸವಿವರವಾಗಿ ಪತ್ರದಲ್ಲಿ ಬರೆದು ಆತ ನೇಣುಬಿಗಿದುಕೊಂಡಿದ್ದಾನೆ.
ಆತ ಬರೆದಿರುವ ಡೆತ್ನೋಟ್ ಪ್ರಕಾರ ಆತ ಖಾಯಿಲೆಯ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನಾದರೂ ಆತನ ಡೆತ್ನೋಟ್ನಲ್ಲಿನ ವಿವರಗಳನ್ನು ಓದಿದರೆ ರೈತನ ಬದುಕು ಎಂತಹದ್ದು ಎಂಬುದು ಎಂದು ಅರ್ಥವಾಗಿ ಕಣ್ಣು ಆರ್ದ್ರವಾಗುತ್ತದೆ.
ರೈತ ಜಯಕುಮಾರ್ ಗೆ ಇರುವುದು 28 ಗುಂಟೆ ಭೂಮಿ. ಅವರ ಅಣ್ಣ-ತಮ್ಮಂದಿರಿಗೂ ಅಷ್ಟೆ ಪ್ರಮಾಣದ ಭೂಮಿ ಇದೆ. ಯಾರೂ ಆರ್ಥಿಕವಾಗಿ ಸಬಲರಲ್ಲ. ಇಂತಹುದರಲ್ಲಿ ಆತನ ಅಮ್ಮನಿಗೆ ಸಕ್ಕರೆ ಖಾಯಿಲೆ, ರಕ್ತದೊತ್ತಡ ಆಗಿದೆ. ಅದಕ್ಕಾಗಿ ಆಸ್ಪತ್ರೆಗೆ ಖರ್ಚು ಮಾಡಿದ್ದಾರೆ, ಮಕ್ಕಳ ಆರ್ಥಿಕ ಸ್ಥಿತಿ ನೋಡಿಯೋ ಏನು ಅಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಪ್ಪನ ಖಾಯಿಲೆಗೆ 2 ಲಕ್ಷ ಸಾಲ
ಆದರೆ ವಿಧಿ ಜಯಕುಮಾರ್ ಬೆನ್ನು ಬಿಟ್ಟಿಲ್ಲ ಅದೇ ವರ್ಷ ಅಪ್ಪನಿಗೆ ಲಿವರ್ ಸಮಸ್ಯೆಯನ್ನು ತಂದು ಒಡ್ಡಿದೆ. ಅಪ್ಪನ ಚಿಕಿತ್ಸೆಗೆಂದು ಸುಮಾರು 2 ಲಕ್ಷ ಸಾಲ ಮಾಡಿದ್ದಾರೆ ಜಯಕುಮಾರ್. ಅಪ್ಪ ಹಾಗೋ-ಹೀಗೋ ಚೇತರಿಸಿಕೊಂಡಿದ್ದಾರೆ. ಆದರೆ ನಿಷ್ಕರುಣಿ ದೇವರು ಬಿಡಬೇಕಲ್ಲ, ಮತ್ತೆ ಜೈಕುಮಾರ್ ಕಷ್ಟ ತಂದೊಡ್ಡಿದ್ದಾರೆ.

ಜಯಕುಮಾರ್ ಗೆ ಗಂಟಲು ಕ್ಯಾನ್ಸರ್
ಗಂಟಲು ನೋವೆಂದು ಆಸ್ಪತ್ರೆಗೆ ಹೋದ ಜಯಕುಮಾರ್ ಗೆ ವೈದ್ಯರು ಗಂಟಲು ಕ್ಯಾನ್ಸರ್ ಆಗಿದೆ ಎಂದು ಹೇಳಿದ್ದಾರೆ. ಚಿಕಿತ್ಸೆಗೆ ಮೂರು ಲಕ್ಷ ಆಗುವುದೆಂದು ವೈದ್ಯರು ಹೇಳಿದ್ದಾರೆ. ಅಪ್ಪನ ಖಾಯಿಲೆಗೆ 2 ಲಕ್ಷ ಸಾಲ ಮಾಡಿದ್ದ ಜಯಕುಮಾರ್ ಗೆ ಮತ್ತೊಮ್ಮೆ ಸಾಲಗಾರರ ಮುಂದೆ ಹೋಗಿ ನಿಲ್ಲಲು ಸ್ವಾಭಿಮಾನ ಅಡ್ಡಬಂದಿದೆ. ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಾರೆ.

ಡೆತ್ನೋಟ್ ನಲ್ಲಿ ಪೂರ್ಣ ಮಾಹಿತಿ
ವಿವರವಾಗಿ ಡೆತ್ನೋಟ್ ಬರೆದಿಟ್ಟಿರುವ ರೈತ ಜಯಕುಮಾರ್ ಖಾಯಿಲೆಗೆ ಸಂಬಂಧಿಸಿದ ಹಾಗೂ ಸಾಲಕ್ಕೆ ಸಂಬಂಧಿಸಿದ ಪತ್ರಗಳು ಅಂಗಡಿಯ ಡ್ರಾಯರ್ನಲ್ಲಿವೆ ಎಂದು ಸಾಕ್ಷಿಯನ್ನೂ ನೀಡಿದ್ದಾರೆ.

ಕುಮಾರಸ್ವಾಮಿ ಇಂದು ಮಂಡ್ಯಕ್ಕೆ
ಜಯಕುಮಾರ್ ಅವರು ಕುಮಾರಸ್ವಾಮಿ ಅವರ ಹೆಸರಿಗೆ ಡೆತ್ನೋಟ್ ಬರೆದಿಟ್ಟಿದ್ದಾರೆ, ಕಾಕತಾಳಿಯವೋ ಏನು ಇಂದೇ ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಜಯಕುಮಾರ್ ಕಳೆಬರ ನೋಡುವ ಧೈರ್ಯ ಮಾಡುತ್ತಾರಾ? ವಿಪರ್ಯಾಸವೆಂದರೆ, ದೇಶಕ್ಕೆ ಅನ್ನ ಹಾಕುವ ರೈತ ಸಣ್ಣ ಖಾಯಿಲೆಯನ್ನು ಎದುರಿಸುವ ಮಟ್ಟಿಗೂ ಆರ್ಥಿಕವಾಗಿ ಸಧೃಡವಾಗಿಲ್ಲ.












Click it and Unblock the Notifications