ಬರ ನಿರ್ವಹಣೆ; ಬೆಳೆ ಪರಿಸ್ಥಿತಿ ಖುದ್ದು ಅವಲೋಕಿಸಿದ ಕೊಪ್ಪಳ ಡಿಸಿ
ಕೊಪ್ಪಳ, ಆಗಸ್ಟ್ 31; ಕರ್ನಾಟಕದ ಕಂದಾಯ ಇಲಾಖೆ ಬರ ಪರಿಸ್ಥಿತಿ ಘೋಷಣೆ ಮಾಡಲು ಬರ ನಿರ್ವಹಣೆಯ ಕ್ಷೇತ್ರ ಪರಿಶೀಲನೆ ಆರಂಭಿಸಿದೆ. ಎಲ್ಲಾ ಜಿಲ್ಲೆಗಳಲ್ಲಿ ಆಗಸ್ಟ್ 28ರಿಂದ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ರೈತರ ಹೊಲಗಳಿಗೆ ಖುದ್ದಾಗಿ ಭೇಟಿ ನೀಡಿ, ಬರ ನಿರ್ವಹಣೆ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಪರಿಶೀಲಿಸಿದರು. ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಕುಕನೂರ, ಯಲಬುರ್ಗಾ ಮತ್ತು ಕುಷ್ಟಗಿ ತಹಶೀಲ್ದಾರ್, ಕೃಷಿ ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗಳು ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಕುಕನೂರ ತಾಲೂಕಿನ ತಳಕಲ್, ಬನ್ನಿಕೊಪ್ಪ ಮತ್ತು ಇಟಗಿ ಗ್ರಾಮಗಳಿಗೆ, ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಮತ್ತು ಬಂಡಿ ಗ್ರಾಮಗಳಿಗೆ, ಕುಷ್ಟಗಿ ತಾಲೂಕಿನ ಹನುಮಸಾಗರ ಮತ್ತು ಚಳಗೇರಿ ಹಲವು ಗ್ರಾಮಗಳ ರೈತರ ಜಮೀನಿಗೆ ತೆರಳಿ ಬೆಳೆ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದರು.
ತಳಕಲ್ ಗ್ರಾಮದ ರೈತ ತಿಮ್ಮಾರೆಡ್ಡಿ ಹುನಗುಂದ ಹೊಲಕ್ಕೆ ಭೇಟಿ ನೀಡಿದ ತಂಡ, ಈರುಳ್ಳಿ ಬೆಳೆ, ಮುದಿಯಪ್ಪ ಅವರ ಮುಸುಕಿನ ಜೋಳದ ಬೆಳೆ, ಇಟಗಿ ಗ್ರಾಮದ ರೈತರಾದ ಮಂಜುಯ್ಯ ಸಶಿಮಠ ಅವರ ಈರುಳ್ಳಿ ಬೆಳೆ, ಕಮಲಾಕ್ಷಿ ಅವರ ಮುಸುಕಿನ ಜೋಳದ ಬೆಳೆಗಳು ತೇವಾಂಶ ಕೊರತೆಯಿಂದಾಗಿ ಹಾನಿಯಾದ ಬಗ್ಗೆ ಪರಿಶೀಲಿಸಿತು. ಜಿಲ್ಲಾಧಿಕಾರಿಗಳು ಯಲಬುರ್ಗಾ, ಕುಷ್ಟಗಿ ತಾಲೂಕುಗಳಲ್ಲಿನ ರೈತರ ಜಮೀನಿಗೆ ಸಹ ತೆರಳಿ ಮೆಕ್ಕೆಜೋಳ, ಸಜ್ಜೆ, ತೊಗರಿ, ಹತ್ತಿ ಮತ್ತು ಶೇಂಗಾ ಬೆಳೆಗಳು ಸಹ ತೇವಾಂಶ ಕೊರತೆಯಿಂದಾಗಿ ಹಾನಿಯಾದ ಬಗ್ಗೆ ವೀಕ್ಷಣೆ ನಡೆಸಿದರು.
ಬರ ಮತ್ತು ಸಾಧಾರಣ ಬರ; ಜಿಲ್ಲಾಧಿಕಾರಿಗಳು ಮಾತನಾಡಿ, "ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸರ್ಕಾರದ ಪರಿಷ್ಕೃತ ಬರ ಕೈಪಿಡಿ 2020ರನ್ವಯ ಹಂತ 1 ಮತ್ತು ಹಂತ 2ರಲ್ಲಿ ಸೂಚಿಸಿರುವ ಮಾನದಂಡಗಳ್ವಯ ಪರಿಶೀಲಿಸಿ ಪ್ರಸಕ್ತ ಮುಂಗಾರು ಜೂನ್ 1ರಿಂದ ಆಗಸ್ಟ್ 19ರ ಅವಧಿಯಲ್ಲಿ ರಾಜ್ಯದಲ್ಲಿ ತೀವ್ರ ಬರ ಮತ್ತು ಸಾಧಾರಣ ಬರ ಪರಿಸ್ಥಿತಿ ಕಂಡು ಬಂದಿರುವ ವಿವಿಧ ತಾಲೂಕುಗಳನ್ನು ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳೆಂದು ಗುರುತಿಸಲಾಗಿದೆ" ಎಂದರು.
"3ನೇ ಹಂತದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ತಾಲೂಕುಗಳಲ್ಲಿ ಶೇ.10ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರತಿ ಬೆಳೆಗಳ ಸುಮಾರು 5 ಸೈಟ್ಗಳನ್ನು ಇ-ಆಡಳಿತ ಇಲಾಖೆಯ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಮಾಡಲು ತಿಳಿಸಿದ ಪ್ರಕ್ರಿಯೆಯು, ಈ ಹಿಂದೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಿದಂತೆ ಕೊಪ್ಪಳ ಜಿಲ್ಲೆಯಲ್ಲಿಯೂ ಪೂರ್ಣವಾಗಬೇಕು" ಎಂದು ಹೇಳಿದರು.
ಬರ ನಿರ್ವಹಣೆಯ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಈಗಾಗಲೇ ರಚಿಸಲಾಗಿರುವ ಜಂಟಿ ಸಮೀಕ್ಷೆ ತಂಡಗಳು, ಕಂದಾಯ ಇಲಾಖೆಯು ಜಂಟಿ ಕಾರ್ಯದರ್ಶಿಗಳು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸುತ್ತಿವೆ. ವೇಳಾಪಟ್ಟಿಯನುಸಾರ ಆಗಸ್ಟ್ 31ರೊಳಗೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕು.
2023-24ನೇ ಸಾಲಿನಲ್ಲಿ ಬರ ನಿರ್ವಹಣೆ ಕುರಿತಂತೆ ಕೊಪ್ಪಳ ಜಿಲ್ಲೆಯಲ್ಲಿ ನಿಗದಿತ ತಾಲೂಕುಗಳಲ್ಲಿ ಜಂಟಿ ಸಮೀಕ್ಷೆಯ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಕೃಷಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡು ರಚನೆಯಾಗಿರುವ ತಂಡಗಳು ವಿವಿಧೆಡೆ ಕಾರ್ಯಪ್ರವೃತ್ತವಾಗಿವೆ.
ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ನಡೆಸಲು ಯಲಬುರ್ಗಾ ತಾಲೂಕಿನಲ್ಲಿ 9, ಗಂಗಾವತಿ ತಾಲೂಕಿನಲ್ಲಿ 7, ಕುಷ್ಟಗಿ ತಾಲೂಕಿನಲ್ಲಿ 18, ಕುಕನೂರ ತಾಲೂಕಿನಲ್ಲಿ 6, ಕನಕಗಿರಿ ತಾಲೂಕಿನಲ್ಲಿ 8 ಸೇರಿ ಒಟ್ಟು 48 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ತಲಾ ಒಂದು ಹಳ್ಳಿಗೆ ಒಬ್ಬರಂತೆ ಅಧಿಕಾರಿಯನ್ನು ನೇಮಿಸಿ ಮೇಲುಸ್ತುವಾರಿ ನಡೆಸಲಾಗುತ್ತಿದೆ.












Click it and Unblock the Notifications