ರೈತರಿಗೆ ಸುಳ್ಳು ಹೇಳಬೇಡಿ: ರಾಹುಲ್ ಗಾಂಧಿಗೆ ಮೋದಿ ಸಲಹೆ
ನವದೆಹಲಿ, ಡಿಸೆಂಬರ್ 28: ಸಾಲ ಮನ್ನಾದ ಹೆಸರಿನಲ್ಲಿ ರೈತರನ್ನು ತಪ್ಪುದಾರಿಗೆ ಎಳೆಯುವುದನ್ನು ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರ ದೇಶದಾದ್ಯಂತ ರೈತರ ಸಾಲಮನ್ನಾ ಮಾಡುವವರೆಗೂ ನರೇಂದ್ರ ಮೋದಿ ಅವರಿಗೆ ನಿದ್ದೆ ಮಾಡಲು ಅಥವಾ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ ದಿನಗಳ ಬಳಿಕ ಮೋದಿ ಈ ತಿರುಗೇಟು ನೀಡಿದ್ದಾರೆ.
'ಅದನ್ನು ಮಾಡಲು ಸಾಧ್ಯವಿಲ್ಲ ಎಂಬುದು ನಿಮಗೆ ಗೊತ್ತು. ಇದು ಚುನಾವಣೆಯಲ್ಲಿ ಗೆಲ್ಲುವ ಸಾಲುವಾಗಿಯಷ್ಟೇ ಮಾಡಿರುವುದು. ಚುನಾವಣೆಯಲ್ಲಿ ಗೆಲ್ಲಲು ನೀವು ಯುವಕರನ್ನು ಮೂರ್ಖರನ್ನಾಗಿಸುತ್ತಿದ್ದೀರಿ. ಚುನಾವಣೆಯಲ್ಲಿ ಗೆಲ್ಲಲು ರೈತರ ಬೆನ್ನಿಗೆ ಇರಿಯುತ್ತಿದ್ದೀರಿ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗದೆ ಇದ್ದರೆ ರೈತರಿಗೆ ತಿಳಿಸಿ. ಅವರು ಅದನ್ನು ಒಪ್ಪಿಕೊಳ್ಳುತ್ತಾರೆ. ಸುಳ್ಳು ಹೇಳಿ ಅವರ ಜೀವದೊಂದಿಗೆ ಆಟವಾಡಬೇಡಿ' ಎಂದು ಮೋದಿ ಹೇಳಿದ್ದಾರೆ.
2008ರಲ್ಲಿಯೂ ಅವರು ಸಾಲಮನ್ನಾ ಘೋಷಣೆ ಮಾಡಿದ್ದರು. ಆಗ ರೈತರ ಸಾಲ 6 ಲಕ್ಷ ಕೋಟಿ ಇತ್ತು. 60,000 ಕೋಟಿ ಸಾಲಮನ್ನಾ ಮಾಡುವುದಾಗಿ ಪ್ರಕಟಿಸಿದರು. ಕೊನೆಗೆ 52,000 ಕೋಟಿ ಮಾತ್ರ ಪಾವತಿಸಿದರು. ಪಂಜಾಬ್ನಲ್ಲಿ ಚುನಾವಣೆಗೂ ಮುನ್ನ ಸಾಲಮನ್ನಾ ಭರವಸೆ ನೀಡಿದ್ದರು. ಆದರೆ ಏನನ್ನೂ ನೀಡಿಲ್ಲ. ಕರ್ನಾಟಕದಲ್ಲಿಯೂ ಕೇವಲ 800 ರೈತರಿಗೆ ಪ್ರಯೋಜನವಾಗಿದೆ. ಅದೂ ಟೋಕನ್ ಮಾತ್ರ ಎಂದು ಆರೋಪಿಸಿದ್ದಾರೆ.












Click it and Unblock the Notifications