ದೇವೇಗೌಡರ ಮನವಿಗೂ ಜಗ್ಗದ ಮಾದೇಗೌಡ

ಮಾಜಿ ಪ್ರಧಾನಿ ದೇವೇಗೌಡ ಅವರು ನವದೆಹಲಿಯಲ್ಲಿ ಕೇಂದ್ರ ನೀರಾವರಿ ಸಚಿವ ಸಿಕೆ ಬನ್ಸಾಲ್ ಅವರನ್ನು ಗುರುವಾರ (ಅ.4) ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನೀರು ಬಿಡಲ್ಲ ಎಂದು ನೀರು ಬಿಟ್ಟಿದ್ದಾರೆ. ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ. ಹೀಗಾಗಿ ಜನಾಂದೋಲನ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಸಿಎಂ ಜಗದೀಶ್ ಶೆಟ್ಟರ್ ಅವರು ರೈತರ ಮೇಲೆ ದ್ವೇಷ ಸಾಧನೆ ಮಾಡುತ್ತಿದ್ದಾರೆ.
ಕಾವೇರಿ ಕೊಳ್ಳ ಪ್ರಾಂತ್ಯ ಶಾಸಕರು, ಸಂಸದರು ರಾಜೀನಾಮೆ ನೀಡಲಿ. ತಮಿಳುನಾಡಿಗೆ ನೀಡು ಬಿಡುವುದನ್ನು ನಿಲ್ಲಿಸುವವರೆಗೂ ನನ್ನ ಹೋರಾಟ ಮುಂದುವರೆಯಲಿದೆ. ಉಪವಾಸ ಸತ್ಯಾಗ್ರಹ ನಿಲ್ಲಿಸಲು ಸಾಧ್ಯವಿಲ್ಲ ಎಂದು ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ ಮಾದೇಗೌಡ ಅವರು ಮಂಡ್ಯದಲ್ಲಿ ಹೇಳಿದ್ದಾರೆ.
ಹೆಚ್ಚುವರಿ ನೀರು ಬಿಡುಗಡೆ: ಕಬಿನಿಯಿಂದ ಹೆಚ್ಚಿನ ನೀರು ಬಿಡುತ್ತಿದ್ದನ್ನು ನಿಲ್ಲಿಸಿದ ಸರ್ಕಾರ ಮತ್ತೊಮ್ಮೆ ಕೃಷ್ಣರಾಜಸಾಗರ ದಿಂದ ತಮಿಳುನಾಡಿಗೆ ಸುಮಾರು 10 ಸಾವಿರ ಕ್ಯೂಸೆಕ್ಸ್ ಹರಿಸಿದೆ. 5 ಸಾವಿರಕ್ಕೂ ಅಧಿಕ ಒಳ ಹರಿವು ಇರುವ ಕಾರಣ ನೀರು ಬಿಡಲಾಗಿದೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಮನವಿ: ಮಾದೇಗೌಡ ಅವರು ಉಪವಾಸ ಸತ್ಯಾಗ್ರಹವನ್ನು ಕೂಡಲೇ ಕೈ ಬಿಡಬೇಕು. ಪ್ರಾಧಿಕಾರದ ತೀರ್ಪಿಗೆ ತಡೆ ನೀಡುವ ವಿಚಾರಣೆ ಕೂಡಲೇ ನಡೆಸುವಂತೆ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗುವುದು. ಕೇಂದ್ರದ ತಜ್ಞರ ತಂಡಕ್ಕೆ ಬೇಕಾದ ಮಾಹಿತಿ ಒದಗಿಸಲಾಗುವುದು. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ತೀವ್ರಗೊಂಡ ಪ್ರತಿಭಟನೆ: ಗೆಜ್ಜಲಗೆರೆ, ಮರಿಗೌಡನ ದೊಡ್ಡಿ, ವಿಜಿ ದೊಡ್ಡಿ, ನಾಗಮಂಗಲಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ. ಎಲ್ಲೆಡೆ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ರಾಜಭವನದತ್ತ ಮೆರವಣಿಗೆ ನಡೆಸಿದ್ದು, ಮಾರ್ಗ ಮಧ್ಯದಲ್ಲಿ ಪೊಲೀಸರು ತಡೆ ಒಡ್ಡಿದ್ದಾರೆ.












Click it and Unblock the Notifications