ಅಡಿಕೆ ಬೆಳೆಗೆ ರೋಗ: ಉಚಿತ ಔಷಧಿ, ಸಲಕರಣೆಗೆ ಸರ್ಕಾರದ ಸಬ್ಸಿಡಿ
ಬೆಂಗಳೂರು, ಸೆಪ್ಟೆಂಬರ್ 16: ಮಲೆನಾಡಿನ ಕೆಲವು ಭಾಗಗಳಲ್ಲಿ, ರೈತರ ಬೆನ್ನೆಲುಬಾಗಿರುವ ಅಡಿಕೆ ಬೆಳೆಗಳಿಗೆ ಎಲೆ ಚುಕ್ಕೆ ರೋಗ ಬಾಧೆ ಕಾಣಿಸಿಕೊಂಡಿದೆ. ಇದು ರೈತ ಸಮುದಾಯದಲ್ಲಿ ಆತಂಕ ಮೂಡಲು ಕಾರಣವಾಗಿದ್ದು, ರೋಗ ತಡೆಗಾಗಿ ಸರ್ಕಾರ ಸಹಾಯಧನ ನೀಡಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ತೋಟಗಾರಿಕಾ ಸಚಿವ ಮುನಿರತ್ನ ಅವರು ಶುಕ್ರವಾರ ತೋಟಗಾರಿಕಾ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು. ಎಲೆ ಚುಕ್ಕೆ ರೋಗ ಹರಡುವಿಕೆ, ಅದರ ನಿಯಂತ್ರಣ ಹಾಗೂ ಸದ್ಯದ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅದಲ್ಲದೇ ಅಡಿಕೆ ಬೆಳೆಗಳನ್ನು ರೋಗ ಬಾಧೆಯಿಂದ ಹಾನಿ ಅನುಭವಿಸಿದ ರೈತರಿಗೆ, ಆರ್ಥಿಕ ಪರಿಹಾರ ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಎಲೆ ಚುಕ್ಕೆ ರೋಗವನ್ನು ಹತೋಟಿಗೆ ತರುವ ಕುರಿತು, ರೈತರಿಗೆ, ಉಚಿತವಾಗಿ ಔಷಧಿ ಹಾಗೂ ಸುಧಾರಿತ ಧೋಟಿಯನ್ನು ಒದಗಿಸುವ ಬಗ್ಗೆ ಅಧಿಕಾರಿಗಳಿಗೆ ಸಚಿವರು ಹಲವು ನಿರ್ದೇಶನಗಳನ್ನು ನೀಡಿದರು. ಅಲ್ಲದೇ ಎಷ್ಟು ಪ್ರಮಾಣದಲ್ಲಿ ಅಡಕೆ ಬೆಳೆ ಬೆಳೆಯಲಾಗಿದೆ. ಎಲೆ ಚುಕ್ಕೆ ರೋಗದಿಂದಾಗಿ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷಾ ಕಾರ್ಯ ನಡೆಸುವಂತೆಯು ತೋಟಗಾರಿಕೆ ಸಚಿವ ಮುನಿರತ್ನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದಿಂದ ಅಗತ್ಯ ಸಹಕಾರ ನೀಡಲು ಸೂಚನೆ

ಎಲೆ ಚುಕ್ಕೆ ರೋಗ ಬಾಧೆಯ ತೀವ್ರತೆಯ ಬಗ್ಗೆ ಪ್ರಸ್ತಾಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, "ತಕ್ಷಣವೇ ರೋಗವನ್ನು ಹತೋಟಿಗೆ ತರುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಉಚಿತವಾಗಿ ಔಷಧಿ ಹಾಗೂ ಔಷಧಿ ಸಿಂಪಡಣೆಗೆ ಬೇಕಾದ ಅಗತ್ಯ ಸಲಕರಣೆ ಪಡೆಯಲು ಸರ್ಕಾರದಿಂದ ಸಹಾಯಧನ ಸೇರಿದಂತೆ ವಿವಿಧ ರೀತಿಯಲ್ಲಿ ಸಹಕಾರ ನೀಡಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಈಗಾಗಲೇ ಕೊರೋನಾ, ಅತೀವ ಮಳೆ ಕಂಡಿರುವ ರಾಜ್ಯದ ಮಲೆನಾಡಿನ ಭಾಗ ಜನರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮಳೆಯಿಂದ ತತ್ತರಿಸಿದ್ದ ಅಡಿಕೆ ಬೆಳೆಗಾರರು ಕಳೆದ ಕೆಲವು ದಿನಗಳಿಂದ ಎಲೆ ಚುಕ್ಕೆ ರೋಗದಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಆತಂಕ ಎದರಿಸುತ್ತಿದ್ದಾರೆ. ಅಡಿಕೆ ಬೆಳೆಗೆ ತಗುಲಿರುವ ಎಲೆ ಚುಕ್ಕೆ ರೋಗ ಬಾಧೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಇದನ್ನು ಗಮನಿಸಿರುವ ರಾಜ್ಯ ತೋಟಗಾರಿಕೆ ಇಲಾಖೆಯು ಅಧಿಕಾರಿಗಳ ಜತೆ ಸೇರಿದಂತೆ ಅಡಿಕೆ ಬೆಳೆಗಾರರಿಗೆ ಆರ್ಥಿಕ ಸಹಾಯ ಸೇರಿದಂತೆ ಅಗತ್ಯ ನೆರವು ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಆದಷ್ಟು ಶೀಘ್ರವೇ ಸಹಾಯಧನ ಕುರಿತು ಸಂಪೂರ್ಣ ಮಾಹಿತಿ ರೈತರಿಗೆ ಇಲಾಖೆ ನೀಡಲಿದೆ.
ಸಭೆಯಲ್ಲಿ ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್. ಅಂಗಾರ ಹಾಗೂ, ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications