ನರೇಗಾ ನೆರವಿನಲ್ಲಿ ಗುಲಾಬಿ ಬೆಳೆದು ಲಾಭಗಳಿಸಿದ ರೈತ
ಧಾರವಾಡ, ಜುಲೈ 12; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನೆರವಿನಲ್ಲಿ ಹಲವಾರು ರೈತರು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಹ ಅಗತ್ಯ ಸಲಹೆ ನೀಡಿದ್ದು, ರೈತರು ಲಾಭ ಪಡೆಯುತ್ತಿದ್ದಾರೆ.
ಧಾರವಾಡ ತಾಲೂಕಿನ ಮನಸೂರು ಗ್ರಾಮದ ರೈತ ಶಂಕ್ರಪ್ಪ ಸಿದ್ದಪ್ಪ ಅಂಗಡಿ ಸಹ ನರೇಗಾ ಯೋಜನೆಯ ನೆರವಿನಲ್ಲಿ 1 ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆದಿದ್ದರು. ಸುಮಾರು 5 ಲಕ್ಷ ರೂಪಾಯಿಗಳಿಗೂ ಅಧಿಕ ಆದಾಯ ಪಡೆದು ಮಾದರಿಯಾಗಿದ್ದಾರೆ.
ನರೇಗಾ ಯೋಜನೆಯ ಲಾಭ ಪಡೆದು, ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಹೊಸ ತೋಟವನ್ನು ನಿರ್ಮಿಸಿಕೊಂಡರು. ಇದಕ್ಕಾಗಿ ಸುಮಾರು 1,55,886 ರೂ. ಕೂಲಿ ವೆಚ್ಚ ಹಾಗೂ ಸಾಮಗ್ರಿ ಮೊತ್ತವಾಗಿ 43,000 ರೂ. ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಲ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 45,349 ರೂ. ಅನುದಾನ ಪಡೆದರು.

ಪ್ರಸ್ತುತ ಹೂವುಗಳನ್ನು ಕಟಾವು ಮಾಡುತ್ತಿದ್ದಾರೆ. ಇಲ್ಲಿ ತನಕ ಪ್ರತಿ ದಿನಕ್ಕೆ 2000 ರಿಂದ 2500 ಹೂಗಳನ್ನು ಕಟಾವು ಮಾಡಿದ್ದಾರೆ. ಸುಮಾರು 6 ಲಕ್ಷ ರೂ. ಮೌಲ್ಯದ ಉತ್ಪನ್ನ ಬಂದಿದ್ದು, ಮೊದಲನೇ ವರ್ಷದ ಖರ್ಚು ಕಳೆದು ಸುಮಾರು ರೂ. 5 ಲಕ್ಷ ಆದಾಯಗಳಿಸಿದ್ದಾರೆ.
"ನರೇಗಾ ಯೋಜನೆಯಡಿ ಗುಲಾಬಿ ಪ್ರದೇಶ ವಿಸ್ತರಣೆಗೆ ಸಹಾಯಧನ ಹಾಗೂ ಕಾಲಕಾಲಕ್ಕೆ ಬೆಳೆಗೆ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ . ಮನಸೂರ ಮತ್ತು ಮನಗುಂಡಿ ಗ್ರಾಮಗಳಲ್ಲಿ ಸುಮಾರು 25 ರಿಂದ 30 ಜನ ರೈತ ಫಲಾನುಭವಿಗಳು ಯೋಜನೆಯಡಿ ಗುಲಾಬಿ ಪ್ರದೇಶ ವಿಸ್ತರಣೆಗೆ ಸಹಾಯಧನವನ್ನು ಪಡೆದುಕೊಂಡಿದ್ದಾರೆ" ಎಂದು ಹೋಬಳಿ ಮಟ್ಟದ ಅಧಿಕಾರಿ ಯಲ್ಲಮ್ಮ ಐರಣಿ ಹೇಳಿದ್ದಾರೆ.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಿ ಈ ಕುರಿತು ಮಾಹಿತಿ ನೀಡಿದ್ದು, "ಮನಗುಂಡಿ ಮತ್ತು ಮನಸೂರು ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಒಟ್ಟು 40 ಎಕರೆ ಪ್ರದೇಶದಲ್ಲಿ ಗುಲಾಬಿ ಪ್ರದೇಶ ಅನುಷ್ಠಾನಗೊಳಿಸಲಾಗಿದೆ. ಸುಮಾರು 40 ಲಕ್ಷ ರೂ. ಸಹಾಯಧನ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ರೈತರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉಪಯೋಗ ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕರೆ ನೀಡಿದ್ದಾರೆ.












Click it and Unblock the Notifications