ಕೋಲಾರದಷ್ಟೇ ದಾವಣಗೆರೆ ಟೊಮೆಟೊಗೂ ಬಂತು ಭಾರೀ ಬೇಡಿಕೆ, ಜಮೀನುಗಳಿಗೆ ಸೆಕ್ಯೂರಿಟಿ ಹೇಗಿದೆ ಗೊತ್ತಾ?
ದಾವಣಗೆರೆ, ಜುಲೈ, 12: ಟೊಮೆಟೋಗೆ ಈ ಬಾರಿ ಚಿನ್ನದ ಬೆಲೆ ಬಂದಂತಾಗಿದೆ. ದರ ಗಗನಕ್ಕೇರಿರುವುದರಿಂದ ಬೆಳೆ ರಕ್ಷಿಸಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಕಳ್ಳರ ಕಾಟದಿಂದ ಹಗಲು ರಾತ್ರಿ ಟೊಮೆಟೋ ಬೆಳೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೋಲಾರದಷ್ಟೇ ದಾವಣಗೆರೆ ಜಿಲ್ಲೆಯ ಟೊಮೆಟೋ ನೇಪಾಳದವರೆಗೂ ರಫ್ತಾಗುತ್ತಿದ್ದು, ಬೇಡಿಕೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ರೈತರ ಮೊಗದಲ್ಲಿ ಲಾಭದ ಖುಷಿ ಇದ್ದರೆ, ಬೆಳೆ ಉಳಿಸಿಕೊಳ್ಳುವ ಸವಾಲು ಮತ್ತೊಂದೆಡೆ ಕಾಡತೊಡಗಿದೆ.
ಹೀಗೆ ಜಿಲ್ಲೆಯ ಟೊಮೆಟೋಗೆ ಭಾರೀ ಬೇಡಿಕೆ ಬಂದಿದ್ದು, ರೈತರಿಗೆ ಬೆಳೆಯ ರಕ್ಷಣೆ ಮಾಡುವುದೇ ಇದೀಗ ದೊಡ್ಡ ತಲೆನೋವಾಗಿದೆ. ಹಾಗಾದರೆ ಜಮೀನುಗಳ ಬಳಿ ಕಾವಾಲು ಹೇಗಿದೆ ಎನ್ನುವುದನ್ನು ಇಲ್ಲಿ ಗಮನಿಸಿ.

ದಿನ ಕಳೆದಂತೆ ಟೊಮೊಟೋ ದರ ಹೆಚ್ಚಾಗುತ್ತಲೇ ಇದೆ. ಯಾವಾಗ ಒಂದು ಕೆ.ಜಿ.ಗೆ ನೂರು ರೂಪಾಯಿ ದಾಟಿತೋ ಆಗಿನಿಂದಲೇ ಬೆಳೆದ ಬೆಳೆ ರಕ್ಷಣೆ ಮಾಡೋದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಮೀನಿನಲ್ಲಿ ದೊಣ್ಣೆ ಹಿಡಿದುಕೊಂಡು ರೈತರು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕಳ್ಳರಿಂದ ಟೊಮಾಟೋ ರಕ್ಷಣೆಗೆ ರೈತರು ಹೊಸ ಯೋಜನೆ ರೂಪಿಸಿಕೊಂಡಿದ್ದಾರೆ. ರಾತ್ರಿ ಹಗಲು ಟೊಮೆಟೋ ಬೆಳೆಯ ಹೊಲ ಕಾಯುತ್ತಿರುವ ರೈತರು ಕಳ್ಳರ ಹಾವಳಿ ತಡೆಗೆ ಹರಸಾಹಸಪಡುವಂತಾಗಿದೆ.
ಟೊಮೆಟೋಗೆ ಬಂಪರ್ ದರ ಸಿಕ್ಕಿರುವುದರಿಂದ ಹೊಲಗಳಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೈತರು ದೊಣ್ಣೆ, ಕೋಲುಗಳನ್ನು ಹಿಡಿದು ಜಮೀನು ಸುತ್ತು ಹಾಕುತ್ತಿದ್ದಾರೆ. ಅಪರಿಚಿತರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡಲು ಪ್ರಾರಂಭಿಸಿದ್ದಾರೆ.
ಇಪ್ಪತ್ತನ್ನಾಲ್ಕು ಗಂಟೆಗಳ ಕಾಲ ಕಣ್ಗಾವಲು ಇದ್ದರೂ ಕೂಡ ಕೆಲ ಖತರ್ನಾಕ್ ಖದೀಮರು ಟೊಮೆಟೋ ಕದ್ದೊಯ್ಯುತ್ತಿದ್ದಾರೆ. ನಾವು ಎಷ್ಟೇ ಜಾಗೃತಿ ವಹಿಸಿದರೂ ಹೇಗೋ ಕದ್ದು ಪರಾರಿಯಾಗುತ್ತಿದ್ದಾರೆ ಎನ್ನುತ್ತಾರೆ ರೈತರು. ದಾವಣಗೆರೆ ತಾಲೂಕಿನಲ್ಲಿ ಟೊಮೆಟೋ ಬೆಳೆದ ರೈತರಿಗೆ ಪ್ರತಿದಿನ ಜಾಗರಣೆ ಮಾಡುವಂತಾಗಿದೆ. ಕೆಲವರಂತೂ ಹೊಲದಲ್ಲಿ ಟೆಂಟ್ ಹಾಕಿಕೊಂಡು ಕಾವಲಿಗೆ ನಾಯಿಗಳನ್ನು ಬಳಕೆ ಮಾಡುತ್ತಿದ್ದಾರೆ.
ಪ್ರತಿ ಬಾಕ್ಸ್ ಟೊಮೆಟೋಗೆ 1800ರಿಂದ 2000 ರೂಪಾಯಿ ದರ ಸಿಕ್ಕಿರುವುದರಿಂದ ರೈತರಲ್ಲಿ ಸಂತಸ ಮನೆ ಮಾಡಿದಂತಾಗಿದೆ. ದಾವಣಗೆರೆಯಿಂದ ನೇಪಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ತಮಿಳುನಾಡಿಗೆ ಟೊಮೆಟೋ ಕಳುಹಿಸಿಕೊಡಲಾಗುತ್ತದೆ. ಅಲ್ಲಿಯೂ ಭಾರೀ ಬೇಡಿಕೆ ಇದೆ. ದರವೂ ಹೆಚ್ಚಾಗಿದೆ. ಕಳೆದ ಎರಡರಿಂದ ಮೂರು ವರ್ಷ ಬೆಳೆಗೆ ದರವೇ ಸಿಕ್ಕಿರಲಿಲ್ಲ. ತುಂಬಾ ನಷ್ಟ ಅನುಭವಿಸಿದ್ದೆವು. ಈ ಬಾರಿ ಉತ್ತಮ ಧಾರಣೆ ಇರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ಇಲ್ಲಿನ ಬೆಳೆಗಾರರು.
ಕೋಲಾರದಷ್ಟೇ ದಾವಣಗೆರೆ ಟೊಮೆಟೋಗೆ ಬೇಡಿಕೆ ಬಂದಿದ್ದು, ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ರೀತಿ ದರ ಹೆಚ್ಚಳವಾಗಿದೆ. ಆದರೆ ಹೊಲದಲ್ಲಿ ಟೊಮೆಟೋ ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಇನ್ನು ಕಳ್ಳರ ಕಾಟದಿಂದ ಜನೀನುಗಳಲ್ಲಿ ದೊಣ್ಣೆ, ನಾಯಿಗಳನ್ನು ಹಿಡಿದು ಕಾವಲು ಕಾಯುತ್ತಿರುವ ರೈತರು ಹೈರಣಾಗಿದ್ದಾರೆ. ಒಟ್ಟಿನಲ್ಲಿ ಈ ಹಿಂದೆ ದರ ಸಿಗದೇ ರೈತರು ಕಂಗಾಲಾದ್ದರು. ಆದರೆ ಈ ಬಾರಿ ಹೆಚ್ಚು ಲಾಭ ಸಿಕ್ಕರೂ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.












Click it and Unblock the Notifications