ಗೋ ರಕ್ಷಣೆ ಎಲ್ಲರ ಕರ್ತವ್ಯ, ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಗೋ ಶಾಲೆ ನಿರ್ಮಾಣ: ಸುಧಾಕರ್
ದೇವನಹಳ್ಳಿ, ನವೆಂಬರ್ 29: ಹುಟ್ಟಿನಿಂದ ಮಾನವನ ಅಭ್ಯುದಯಕ್ಕೆ ನಿರಂತರವಾಗಿ ಸಹಕಾರಿಯಾಗುವ ಗೋವುಗಳ ರಕ್ಷಣೆಗಾಗಿ ರಾಜ್ಯದ 31 ಜಿಲ್ಲೆಯಲ್ಲಿಯೂ ಜಿಲ್ಲಾ ಮಟ್ಟದ ಗೋಶಾಲೆ ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ಅಗತ್ಯ ಜಮೀನು ಗುರುತಿಸಲಾಗಿದೆ. ಗೋವುಗಳನ್ನು ಪ್ರತಿಯೊಬ್ಬರು ರಕ್ಷಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೊಡುಗೇಹಳ್ಳಿಯಲ್ಲಿ ಮಂಗಳವಾರ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಪರಂಪರೆ, ಚರಿತ್ರೆಯಲ್ಲಿ ಗೋವುಗಳನ್ನು ದೇವರಿಗೆ ಸಮಾನವಾಗಿ ಪೂಜೆಸುತ್ತಿದ್ದು, ಗೋವುಗಳನ್ನು ನಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಇಂತಹ ಗೋವುಗಳಿಗೆ ವಯಸ್ಸಾಗುತ್ತಿದ್ದಂತೆ ಅಮಾನವೀಯವಾಗಿ ನಡೆದುಕೊಳ್ಳುವುದಕ್ಕೆ ಕಡಿವಾಣ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಗೋಶಾಲೆಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ.
ಕರ್ನಾಟಕದ ಶೇ.100ರಷ್ಟು ಮಂದಿಯ ಆರೋಗ್ಯ ತಪಾಸಣೆ ಗುರಿ: ಸುಧಾಕರ್
ಗೋವುಗಳ ರಕ್ಷಣೆ ಮೂಲಕ ದೇಶದ ಪರಂಪರೆ ಎತ್ತಿಹಿಡಿಯುವ ಕೆಲಸ ಮಾಡುತ್ತಿರುವ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ ತಲೆ ಎತ್ತಲಿವೆ. ಅದಕ್ಕೂ ಪೂರ್ವದಲ್ಲಿ ಕೊಡುಗೇಹಳ್ಳಿಯಲ್ಲಿ ವಿದ್ಯುಕ್ತವಾಗಿ ಗೋಶಾಲೆ ಆರಂಭವಾಗಿದೆ. ಗೋವಿನ ಆರೈಕೆಯಿಂದ ಮನುಷ್ಯನ ಸ್ವಭಾವದಲ್ಲಿಯೂ ಬದಲಾವಣೆ ಕಂಡು ಬರಲಿದೆ ಎಂದು ಸುಧಾಕರ್ ಆಶಿಸಿದರು.
ಗೋ ಆರೈಕೆಯಿಂದ ಮಾನವೀಯ ಗುಣಗಳು
ಗೋವುಗಳ ಆರೈಕೆಯಿಂದ ಮಾನವನ ವ್ಯಕ್ತಿತ್ವ ವಿಕಸನವಾಗಿ ದಯೆ, ಪ್ರೀತಿ ಹೆಚ್ಚಲು ಕಾರಣವಾಗಲಿದೆ. ಮನುಷ್ಯ ಮಾನವೀಯ ಗುಣಗಳನ್ನು ರೂಢಿಸಿಕೊಳ್ಳಬೇಕು. ಹಿಂದೆ ವಯಸ್ಸಾದ ಹಸುಗಳನ್ನು ವ್ಯವಹರಿಸುತ್ತಿದ್ದ ರೀತಿ ಅಮಾನವೀಯವಾಗಿತ್ತು. ಅದನ್ನು ಅರಿತ ಪ್ರಧಾನಿ ನರೇಂದ್ರ ಮೋದಿಯವರು ವಯಸ್ಸಾದ ಗೋವುಗಳ ಸಂರಕ್ಷಣೆಗೆ ವಿಶೇಷ ಕಾನೂನು ತಿದ್ದುಪಡಿ ತಂದರು. ಗೋಹತ್ಯೆ ಮಾಡದಂತೆ ಕ್ರಮ ವಹಿಸಿದ್ದರ ಫಲವಾಗಿ ರಾಜ್ಯದಲ್ಲಿಯೂ ಕಾಯ್ದೆ ಜಾರಿಯಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ರಾಜ್ಯಾದ್ಯಂತ 104 ಪಶು ವೈದ್ಯಕೀಯ ಸಂಸ್ಥೆ ಕಾರ್ಯ
ಜಿಲ್ಲೆಯಲ್ಲಿ ಸುಮಾರು 1.20 ಲಕ್ಷ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿವೆ. 104 ಪಶುವೈದ್ಯಕೀಯ ಸಂಸ್ಥೆಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿನಿತ್ಯ 5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಹಾಲಿನ ಬೆಲೆ ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಹಾಲಿಗೆ ಪ್ರತಿ ಲೀಟರ್ಗೆ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಇದನ್ನು ಆರಂಭಿಸಿದವರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಎಂದು ಸರ್ಕಾರ ಸಾಧನೆ ಕುರಿತು ವಿವರಿಸಿದರು.
ಜಾನುವಾರುಗಳ ರಕ್ಷಣೆಗೆ 293 ಮೊಬೈಲ್ ಕ್ಲಿನಿಕ್
ರಾಜ್ಯದಲ್ಲಿ ಒಟ್ಟು 293 ಮೊಬೈಲ್ ಕ್ಲಿನಿಕ್ ಗಳನ್ನು ಕೇಂದ್ರ ಸಚಿವ ಪ್ರಭು ಚೌಹಾಣ್ ಅವರು ನೀಡಿದ್ದಾರೆ. ಇವು ಸಂಚರಿಸಿ, ಜಾನುವಾರುಗಳ ಆರೋಗ್ಯ ರಕ್ಷಣೆಯಲ್ಲಿ ನಿರತವಾಗಿವೆ. ಇಲಾಖೆ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ಸಚಿವರಾದ ನಂತರ ಇಲಾಖೆಗೆ ಕಾಯಕಲ್ಪ ಮಾಡುತ್ತಿರುವುದು ಸಂತಸದ ವಿಷಯ.
ಗೋಶಾಲೆಗಳಲ್ಲಿ ಪ್ರತಿ ಹಸುವಿಗೆ ವರ್ಷಕ್ಕೆ 11 ಸಾವಿರ ನೀಡಿದರೆ ಅದರ ಸಂಪೂರ್ಣ ಪೋಷಣೆಯನ್ನು ಸರ್ಕಾರ ಮಾಡುತ್ತಿದೆ. ಈ ಗೋಶಾಲೆಯ ಅಭ್ಯುದಯಕ್ಕೆ ಜಿಲ್ಲಾಧಿಕಾರಿಗಳು ವಿಶೇಷ ಆಸಕ್ತಿ ನೀಡಬೇಕು ಮತ್ತು ಸ್ಥಳೀಯರೂ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಹೆಚ್ಚೆಚ್ಚು ರೈತರು ಹೈನುಗಾರಿಕೆಗೆ ಮುಂದಾಗಬೇಕು
ಹೈನುಗಾರಿಕೆಯಿಂದ ರೈತರ ಆದಾಯ ಹೆಚ್ಚಾಗುವ ಜೊತೆಗೆ ಹೈನುಗಾರಿಕೆ ಮಾಡುವವರ ಸಂಖ್ಯೆಯು ಇನ್ನೂ ಅಧಿಕವಾಗಬೇಕು. ಸಾವಯವ ಕೃಷಿಗೆ ನಾವು ಹೊಂದಿಕೊಳ್ಳಬೇಕು. ಸಾವಯವ ಕೃಷಿಗೆ ಪ್ರಮುಖವಾಗಿ ಅಗತ್ಯವಿರುವುದು ಸಗಣಿ. ಇಂತಹ ಮಾನವ ಹಿತವಾದ ಎಲ್ಲ ವಸ್ತುಗಳನ್ನು ನೀಡುವ ಗೋವುಗಳ ರಕ್ಷಣೆ ಅಗತ್ಯ. ಜಿಲ್ಲೆಯ ಹೊಸಕೋಟೆ ಬಳಿ ಮತ್ತೊಂದು ಗೋಶಾಲೆ ಆರಂಭಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಶಾಸಕ ಕೆ. ಶ್ರೀನಿವಾಸಮೂರ್ತಿ, ಮಾಜಿ ಶಾಸಕ ನಾಗರಾಜ್, ಆಯುಕ್ತರಾದ ಅಶ್ವಥಿ, ಜಿಲ್ಲಾದಿಕಾರಿ ಲತಾ, ಸಿಇಒ ರೇವಣ್ಣಪ್ಪ, ಮಲ್ಲಯ್ಯ, ಡಾ. ಮಂಜುನಾಥ್, ಗಂಗಮ್ಮ ಚನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.