ಕಾಂಗ್ರೆಸ್ ಹೈಕಮಾಂಡ್ನಿಂದ ಕುಮಾರಸ್ವಾಮಿ ಮೇಲೆ ಒತ್ತಡ: ಕಾರಣ ಏನು?
ಬೆಂಗಳೂರು, ನವೆಂಬರ್ 22: ಕಬ್ಬು ಬೆಳೆಗಾರರ ಪ್ರತಿಭಟನೆ, ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ನಡುವಿನ ತಿಕ್ಕಾಟ, ಬಿಜೆಪಿಯ ರಾಜ್ಯವ್ಯಾಪಿ ಪ್ರತಿಭಟನೆಗಳಿಂದ ಬೇಸತ್ತಿರುವ ಕುಮಾರಸ್ವಾಮಿ ಮೇಲೆ ಕಾಂಗ್ರೆಸ್ ಹೈಕಮಾಂಡ್ ಕೂಡ ಒತ್ತಡ ಹೇರುತ್ತಿದೆ.
ಆದಷ್ಟು ಬೇಗ ಸಾಲಮನ್ನಾ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿಗೆ ಸೂಚನೆ ನೀಡಿದೆ. ಪಂಚ ರಾಜ್ಯಗಳ ಚುನಾವಣೆಗೆ ಮುನ್ನವೇ ಸಾಲಮನ್ನಾ ಮಾಡಲು ಹೇಳಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ, ಇದು ಕೈ ಹೈಕಮಾಂಡ್ ಗೆ ಬೇಸರ ಮೂಡಿಸಿದೆ.
ಲೋಕಸಭೆ ಚುನಾವಣೆ ಸನಿಹದಲ್ಲಿದ್ದು ಅದರ ಪ್ರಚಾರ ಆರಂಭಕ್ಕೆ ಮುನ್ನವಾದರೂ ಸಾಲಮನ್ನಾ ಮಾಡಿ ಎಂದು ಹೈಕಮಾಂಡ್ ಸ್ಪಷ್ಟವಾಗಿ ಕುಮಾರಸ್ವಾಮಿ ಅವರಿಗೆ ಸಂದೇಶ ರವಾನಿಸಿದೆ.
ಪಂಚ ರಾಜ್ಯಗಳ ಚುನಾವಣೆಗೆ ಮುನ್ನವೇ ಸಾಲಮನ್ನಾ ಪೂರ್ಣವಾಗಿ ಜಾರಿ ಮಾಡುವಂತೆ ಹೈಕಮಾಂಡ್ ಸಮ್ಮಿಶ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಆಡಳಿತ ಮತ್ತು ಖಾಸಗಿ ಬ್ಯಾಂಕುಗಳ ತಕರಾರಿನಿಂದಾಗಿ ಸಾಲಮನ್ನಾ ಕಾರ್ಯಗತವಾಗಿಲ್ಲ.

ಲೋಕಸಭೆ ಚುನಾವಣೆ ಮೇಲೆ ಪರಿಣಾಮ
ಸಾಲಮನ್ನಾ ವಿಳಂಬವಾದರೆ ಜನರ ಸಹನೆ ಕಟ್ಟೆ ಒಡೆಯುತ್ತದೆ. ಆಡಳಿತ ವಿರೋಧಿ ಅಲೆಯಾಗಿ ರೂಪುಗೊಳ್ಳುವ ಸಾಧ್ಯತೆಯೂ ಇದ್ದು, ಹಾಗೊಮ್ಮೆ ಆಗಿಬಿಟ್ಟರೆ ಅದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾಳಜಿ ಕಾಂಗ್ರೆಸ್ನದ್ದು.

ಕಾಂಗ್ರೆಸ್ ಲಾಭ ಪಡೆಯುವ ಯೋಚನೆ
ಲೋಕಸಭೆ ಚುನಾವಣೆಗೆ ಹೋಗುವುದಕ್ಕೆ ಮುನ್ನಾ ರೈತರ ಸಾಲಮನ್ನಾ ಆದರೆ ಕಾಂಗ್ರೆಸ್ ಅದರ ಲಾಭ ಪಡೆಯುವ ಚಿಂತನೆ ಮಾಡಿದೆ. ರೈತರ ಸಾಲಮನ್ನಾವು ಚುನಾವಣಾ ಪ್ರಚಾರದಲ್ಲಿ ಪ್ರಮುಖ ಅಸ್ತ್ರವಾಗಿ ಕಾಂಗ್ರೆಸ್ ಬಳಸಿಕೊಳ್ಳಲು ಯೋಚಿಸಿದೆ.

ಸರ್ಕಾರದ ಯತ್ನಗಳು ಜಾರಿಯಲ್ಲಿವೆ
ಸಾಲಮನ್ನಾವನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲೆಂದೇ ಸರ್ಕಾರವು ಐಎಎಸ್ ಅಧಿಕಾರಿಯೊಬ್ಬರನ್ನು ಇಬ್ಬರು ಕಮಿಷನರ್ ದರ್ಜೆಯ ಅಧಿಕಾರಿಗಳ ಜೊತೆಗೆ ನೇಮಿಸಿದ್ದು, ಸರಳವಾಗಿ ಸಾಲಮನ್ನಾವನ್ನು ರೈತರಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಬ್ಯಾಂಕ್ಗಳ ತಕರಾರು
ಖಾಸಗಿ ಬ್ಯಾಂಕ್ನವರು ಸರ್ಕಾರದ ಕಾರ್ಯಸೂಚಿಗೆ ಒಪ್ಪಿಗೆ ಸೂಚಿಸುತ್ತಿಲ್ಲವಾದ್ದರಿಂದ ಸಾಲಮನ್ನಾ ವಿಳಂಬ ಆಗುತ್ತಿದೆ. ಕೆಲವು ಬ್ಯಾಂಕುಗಳು ಸಾಲಮನ್ನಾದ ಮೊತ್ತವನ್ನು ಕಂತುಗಳಾಗಿ ಸರ್ಕಾರದಿಂದ ಪಡೆಯಲು ಒಪ್ಪಿವೆ ಆದರೆ ಕೆಲವು ಖಾಸಗಿ ಬ್ಯಾಂಕುಗಳು ಒಪ್ಪಿಲ್ಲ. ಹಾಗಾಗಿ ಅವುಗಳ ಜೊತೆ ಸರ್ಕಾರವು ಮಾತುಕತೆ ನಡೆಸುತ್ತಿದೆ.

ಅಧಿಕಾರಿಗಳು ಹೇಳುತ್ತಿರುವುದೇನು?
ಬೆಂಗಳೂರು ಗ್ರಾಮೀಣ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ಬೆಳೆ ಸಾಲ ಮನ್ನಾವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಈ ವರ್ಷಾಂತ್ಯಕ್ಕೆ ಫಲಾನುಭವಿಗಳೆಲ್ಲರ ಮಾಹಿತಿಯನ್ನು ಸರ್ಕಾರ ಪೂರ್ಣಗೊಳಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮಾಹಿತಿ ಪಡೆದ ಮೇಲೆ ಸಾಲಮನ್ನಾ ಮಾಡಲು ಸಹ ಇನ್ನಷ್ಟು ಸಮಯ ಬೇಕಾಬಹುದು. ಒಟ್ಟಿಗೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಸಾಲಮನ್ನಾ ಆಗುವ ಸಾಧ್ಯತೆ ಇದೆ.












Click it and Unblock the Notifications