ಫೆ.27ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಮೋದಿ
ಹುಬ್ಬಳ್ಳಿ, ಫೆಬ್ರವರಿ 04 : ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಸಮಾವೇಶ ಆಯೋಜಿಸಲು ಕರ್ನಾಟಕ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಫೆ.27ರಂದು ಸಮಾವೇಶ ನಡೆಯುವ ಸಾಧ್ಯತೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಹುಬ್ಬಳ್ಳಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಮಾಹಿತಿ ನೀಡಿದರು. 'ಸಮಾವೇಶವನ್ನು ಎಲ್ಲಿ ಆಯೋಜನೆ ಮಾಡಬೇಕು? ಎಂಬ ಬಗ್ಗೆ ಅಂತಿಮ ತೀರ್ಮಾನವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು. [ಪುತ್ತೂರಿನಲ್ಲಿ ಫೆ. 6ಕ್ಕೆ ಕುಮ್ಕಿ ರೈತರ ಜಾಗೃತಿ ಸಮಾವೇಶ]

'ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರೈತಪರವಾದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಈ ರೈತ ಸಮಾವೇಶ ಆಯೋಜನೆ ಮಾಡಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಜೋಶಿ ತಿಳಿಸಿದರು. [ಮೋದಿ ಆರಂಭಿಸಿದ ಚಿನ್ನ ಠೇವಣಿ ಯೋಜನೆ ಟುಸ್!]
'ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಸಭೆ ನಡೆಸಿ ಫೆ.27ರಂದು ಸಮಾವೇಶ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ದಾವಣಗೆರೆ, ಧಾರವಾಡ ಮತ್ತು ಬೆಳಗಾವಿಯ ಹೆಸರುಗಳನ್ನು ಪರಿಶೀಲಿಸುತ್ತಿದ್ದು, ಎಲ್ಲಿ ಸಮಾವೇಶ ನಡೆಸಬೇಕು? ಎಂಬುದನ್ನು ಅಂತಿಮಗೊಳಿಸಿಲ್ಲ ಎಂದು ಜೋಶಿ ವಿವರಣೆ ನೀಡಿದರು.
ಕೇಂದ್ರ ಸರ್ಕಾರದ ರೈತ ಪರ ಯೋಜನೆಗಳ ಬಗ್ಗೆ ತಿಳಿಸಲು ಬಿಜೆಪಿ ದೇಶಾದ್ಯಂತ ಫೆಬ್ರವರಿ ತಿಂಗಳಿನಲ್ಲಿ 4 ರೈತ ಸಮಾವೇಶಗಳನ್ನು ಆಯೋಜಿಸಲಿದೆ. ಮಧ್ಯಪ್ರದೇಶ, ಓಡಿಸ್ಸಾ, ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ಸಮಾವೇಶಗಳು ನಡೆಯಲಿದ್ದು, ಪ್ರಧಾನಿ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.












Click it and Unblock the Notifications