ಕೈಗೂಡದ ಸಂಧಾನ ಪ್ರಯತ್ನ: ಡಿ. 8ರ ಭಾರತ್ ಬಂದ್ ಬಳಿಕ ಮತ್ತೊಂದು ಸಭೆ
ನವದೆಹಲಿ, ಡಿಸೆಂಬರ್ 5: ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೆಲವು ಬದಲಾವಣೆಗಳನ್ನು ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರೈತ ಸಂಘಟನೆಗಳು ತಿರಸ್ಕರಿಸಿದ್ದರಿಂದ ಶನಿವಾರ ನಡೆದ ಮನವೊಲಿಕೆ ಪ್ರಯತ್ನದ ಸಭೆ ವಿಫಲವಾಗಿದೆ. ಇದರಿಂದ ಬುಧವಾರ ಮತ್ತೊಂದು ಸುತ್ತಿನ ಮಾತುಕತೆಯನ್ನು ನಿಗದಿಗೊಳಿಸಲಾಗಿದೆ.
ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ ಬಳಿಕ ರೈತರೊಂದಿಗೆ ಕೇಂದ್ರ ಸರ್ಕಾರವು ನಡೆಸಿದ ಐದನೇ ಮಾತುಕತೆ ಇದಾಗಿದೆ. ಶನಿವಾರ ಮಧ್ಯಾಹ್ನ ಆರಂಭವಾದ ಮಾತುಕತೆ ವೇಳೆಯೂ ರೈತ ಪ್ರತಿನಿಧಿಗಳು ಸಚಿವರ ಜತೆ ಚರ್ಚಿಸಲು ನಿರಾಕರಿಸಿದರು. ಕಾಯ್ದೆಯನ್ನು ಹಿಂದಕ್ಕೆ ಪಡೆಯುತ್ತೀರಾ, ಇಲ್ಲವಾ ಎಂಬ ಉತ್ತರ ಕೊಡಿ ಎಂದು ಬರೆದ ಬಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಸಭೆಯ ಆರಂಭದಲ್ಲಿ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿಯ ಕುರಿತಾದ ಲಿಖಿತ ಪ್ರಸ್ತಾವಗಳನ್ನು ಮುಂದಿರಿಸಿತು. ಆದರೆ ಇದಕ್ಕೆ ರೈತರು ಒಪ್ಪಲಿಲ್ಲ. ಕಾಯ್ದೆ ರದ್ದುಗೊಳಿಸದ ವಿನಾ ಬೇರೆ ಯಾವುದಕ್ಕೂ ಒಪ್ಪುವುದಿಲ್ಲ ಎಂದರು. ಈ ಅರ್ಥಹೀನ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಭೆಯಿಂದ ಹೊರನಡೆಯುವ ಬೆದರಿಕೆ ಹಾಕಿದರು. ಕೊನೆಗೆ ಸಚಿವರು ಮಾತುಕತೆಗೆ ಕೂರುವಂತೆ ಮನವೊಲಿಸಿದರು.
'ಇಂದು ಸಭೆಯಲ್ಲಿ ವಿಭಿನ್ನ ಸಂಗತಿಗಳು ಚರ್ಚೆಗೆ ಬಂದವು. ನಾವು ನ್ಯಾಯೋಚಿತ ಪರಿಹಾರವನ್ನು ಬಯಸಿದ್ದೆವು. ಆದರೆ ಇಂದಿನ ಮಾತುಕತೆಯಲ್ಲಿ ಅದು ಸಾಧ್ಯವಾಗಲಿಲ್ಲ. ಡಿಸೆಂಬರ್ 9ರಂದು ಮತ್ತೊಂದು ಮಾತುಕತೆ ನಡೆಯಲಿದೆ. ಎಲ್ಲ ವಿಚಾರಗಳ ಬಗ್ಗೆಯೂ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ರೈತರಿಗೆ ತಿಳಿಸಿದ್ದೇವೆ. ಪರಿಹಾರ ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ' ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.
ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ. ಈ ಯೋಜನೆಗೆ ಕಾಯ್ದೆಗಳಿಂದ ಯಾವುದೇ ಆಪತ್ತು ಇಲ್ಲ. ಇದು ಆಧಾರರಹಿತ ಅನುಮಾನ ಎಂದು ತೋಮರ್ ಪುನರುಚ್ಚರಿಸಿದರು. ಆದರೆ ಯಾವುದೇ ಮಾತುಕತೆಯಿಂದಲೂ ಪ್ರಯೋಜನವಿಲ್ಲ. ಈ ಮೂರೂ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸದ ಹೊರತು ಬೇರೆ ಯಾವುದೇ ತೀರ್ಮಾನಕ್ಕೂ ತಾವು ರಾಜಿಯಾಗುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದಿದ್ದಾರೆ. ಸ
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಡಿ. 8ರಂದು ಭಾರತ್ ಬಂದ್ಗೆ ಕೃಷಿ ಸಂಘಟನೆಗಳು ಕರೆ ನೀಡಿವೆ. ಆದರೆ ಕೇಂದ್ರ ಸರ್ಕಾರವು ಬಂದ್ ನಂತರದ ದಿನವೇ ಮುಂದಿನ ಸಭೆಯನ್ನು ನಿಗದಿಗೊಳಿಸಿದೆ.












Click it and Unblock the Notifications