ಸಿಎಂ ವಿರುದ್ಧ ರೈತರ ಸಿಟ್ಟು, ಕಾಂಗ್ರೆಸ್ ನಲ್ಲಿ ಕಚ್ಚಾಟ, ಭರ್ಜರಿ ಊಟ- ಇದು ಅಧಿವೇಶನ
Recommended Video

ಬೆಳಗಾವಿ, ಡಿಸೆಂಬರ್ 10: "ಮುಖ್ಯಮಂತ್ರಿಗಳು ರೈಲು ಬಿಡ್ತಾರೆ" ಎಂದು ಆರೋಪಿಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ರೈತ ಮಹಿಳೆಯರು ಸೋಮವಾರ ಪೀಪಿ ಊದಿ ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರವು ಜನರಿಗೆ ಸುಳ್ಳು ಹೇಳಿ, ಕಣ್ಣಿಗೆ ಮಣ್ಣು ಹಾಕುತ್ತಿದೆ. ಸುವರ್ಣ ಸೌಧದಲ್ಲಿ ಅಧಿವೇಶನದ ಹೆಸರಲ್ಲಿ ಸುಮ್ಮನೆ ಪೀಪಿ ಊದುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರೈತ ಮಹಿಳೆ ಜಯಶ್ರೀ ಗುರನ್ನವರ ನೇತೃತ್ವದಲ್ಲಿ ಪೀಪಿ ಊದಿ ಪ್ರತಿಭಟನೆ ನಡೆಸಲಾಯಿತು. ಜತೆಗೆ ಒಂದು ಕಡೆ ಸಕ್ಕರೆ, ಇನ್ನೊಂದು ಕಡೆ ಮಣ್ಣು ತುಂಬಿದ ಬುಟ್ಟಿ ಹಿಡಿದು ತಮಟೆ ಬಾರಿಸಿ, ತುತ್ತೂರಿ ಊದಿ ಆಕ್ರೋಶ ವ್ಯಕ್ತಪಡಿಸಿದರು. ಇಂದು ರೈತರಿಗೆ ಮಣ್ಣು ಕೊಡುತ್ತಾರೋ, ರೈತರ ಬದುಕಿಗೆ ಸಿಹಿ ಕೊಡುತ್ತಾರೋ ನೋಡೋಣ ಎಂದು ಘೋಷಣೆಗಳನ್ನು ಕೂಗಿದರು.
ರೈತರ ಪುಂಗಿ ಚಳವಳಿ ನಡೆಯುತ್ತಿದ್ದ ಸ್ಥಳಕ್ಕೆ ಡಿಸಿಪಿ ಸೀಮಾ ಲಾಟ್ಕರ್ ಬಂದರು. ಪ್ರತಿಭಟನಾನಿರತರ ಮನವೊಲಿಸಿ, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ ಪುಂಗಿ, ಪೀಪಿ ಊದುತ್ತಿದ್ದ ಪ್ರತಿಭಟನಾನಿರತರನ್ನು ಕಂಡು, ಅವರು ತಮ್ಮ ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ. ಕಬ್ಬು ಬಾಕಿ ಪಾವತಿ ಹಾಗೂ ದರ ನಿಗದಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ
ಎಲ್ಲ ರಾಜಕೀಯ ಪಕ್ಷಗಳೂ ರೈತ ಸಂಘಟನೆ ಒಡೆಯಲು ಪ್ರಯತ್ನ ಮಾಡುತ್ತಿವೆ. ಇದರ ಫಲವಾಗಿ ಸಂಘಟನೆಗಳು ಒಡೆದು ಹೋಗಿದೆ. ಒಗ್ಗಟ್ಟಿನಿಂದ ಹೋರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲ ದಿನವೇ ಕಬ್ಬಿಗೆ ಎಫ್.ಆರ್.ಪಿ ಬೆಲೆ ನಿಗದಿಗೊಳಿಸಬೇಕು. ಈ ಭಾಗದ ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಿದ್ದಾರೆ. ಆದರೆ 2012, 2013, 2014ರ ಬಾಕಿ ಉಳಿಸಿಕೊಂಡಿದ್ದಾರೆ. ಶೀಘ್ರವೇ ಬಾಕಿ ಪಾವತಿಸಬೇಕು. ಇದುವರೆಗೂ ಕಬ್ಬಿನ ದರ ನಿಗದಿ ಆಗಿಲ್ಲ. ದರ ನಿಗದಿಯಲ್ಲಿ ಸರಕಾರವೇ ಗೊಂದಲದಲ್ಲಿದೆ.

ಸಂಸದೆ ಶೋಭಾ ಕರಂದ್ಲಾಜೆ
ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಬೇಕು ಎಂದು ಇಲ್ಲಿ ಸುವರ್ಣ ಸೌಧ ಕಟ್ಟಲಾಗಿದೆ. ಆದರೆ ಇಲ್ಲಿ ಕಸ ಹೊಡೆಯುವವರು ಸಹ ಯಾರೂ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ರೈತ ಹೋರಾಟ ಅಣಕಿಸುವ ಮಾತನಾಡುತ್ತಾರೆ. ಸರಕಾರ ಕಾಳಜಿ ತೋರಿಸುತ್ತಿಲ್ಲ. ಬರಗಾಲದಲ್ಲಿ ನೀರಿನ ಬಳಕೆ ಮಾಡಿಲ್ಲ. ಮಾತೃ ಪೂರ್ಣ ಎಂಬುದು ಬೋಗಸ್ ಯೋಜನೆ. ಇನ್ನು ಸಚಿವ ಡಿ.ಕೆ.ಶಿವಕುಮಾರ್ ಸಿದ್ದಗಂಗಾ ಶ್ರೀಗಳು ಚಿಕಿತ್ಸೆ ಪಡೆದ ಆಸ್ಪತ್ರೆ ಬಗ್ಗೆ ನೀಡಿದ ಹೇಳಿಕೆಯು ರಾಜ್ಯ ಒಡೆಯುವಂಥದ್ದು. ವೈದ್ಯರನ್ನು ನಾವು ದೇವರಿಗೆ ಹೋಲಿಸುತ್ತೇವೆ. ವೈದ್ಯರು ಯಾವ ಜಾತಿ ಎಂದು ನೋಡಬಾರದು, ಆಸ್ಪತ್ರೆ ವೈದ್ಯರು ಹೇಗೆ ಚಿಕಿತ್ಸೆ ಮಾಡಿದರು ಎಂಬುದು ಮುಖ್ಯ. ಇದರಲ್ಲಿ ಜಾತಿ ರಾಜಕಾರಣ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ಲಿಂಗಾಯತ ವೀರಶೈವರನ್ನ ಒಡೆಯಲು ಹೋಗಿ ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯ ಆಗಿದೆ. ಸಿದ್ದರಾಮಯ್ಯನವರು ಯಾಕೆ ಅಧಿವೇಶನವನ್ನು ತಪ್ಪಿಸಿದ್ದಾರೋ ಗೊತ್ತಿಲ್ಲ. ಸರಕಾರ ಹಾಗೂ ಈ ಮೈತ್ರಿ ಪಕ್ಷಗಳಲ್ಲಿ ಎಲ್ಲವೂ ಸರಿ ಇಲ್ಲ.

ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ನಗರ ಶಾಸಕ
ಸರಕಾರವು ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಸಿದ್ದರಾಮಯ್ಯ ಊರಲ್ಲಿ ಇಲ್ಲ ಅಂತಿದ್ದಾರೆ. ಸಾಲಮನ್ನಾ ವಿಚಾರದಲ್ಲಿ ಸಂಪೂರ್ಣ ಸೋತಿದ್ದಾರೆ. ನಾಳೆ ಬಾ- ನಾಳೆ ಬಾ ಅಂತ ಕಥೆ ಹೇಳಿದಂತಾಗಿದೆ. ರೈತರಿಗೆ ಇದುವರೆಗೆ ಸಾಲ ಮನ್ನಾ ಮಾಡದೆ ಈ ವಿಚಾರವಾಗಿ ಮುಖ್ಯಮಂತ್ರಿ 'ನಾಳೆ ಬಾ' ಯೋಜನೆಯನ್ನು ತಂದಿದ್ದಾರೆ.

ಮುಖ್ಯಮಂತ್ರಿಗೆ ಸ್ವಾಗತ ಕೋರಲು ರಮೇಶ್ ಜಾರಕಿಹೊಳಿ ಬರಲಿಲ್ಲ
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅನಿತಾ ಅವರನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಮಾಜಿ ಶಾಸಕ ಕೋನರೆಡ್ಡಿ, ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣನವರ್ ಸ್ವಾಗತಿಸಿದರು. ಆದರೆ ಶಿಷ್ಟಾಚಾರದ ಪ್ರಕಾರ ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿ ಸ್ವಾಗತಿಸಬೇಕಿತ್ತು. ಆದರೆ ಅವರು ಗೈರಾಗಿದ್ದರು. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್, ನಾನು ಅವರ ಪಿಆರ್ ಓನಾ? ಮುಖ್ಯಮಂತ್ರಿಗಳ ಸ್ವಾಗತಕ್ಕೆ ಅವರು ಬರಬೇಕಿತ್ತು. ಯಾಕೆ ಬಂದಿಲ್ಲ ಎಂಬುದು ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ ಎಂದರು.
ನನ್ನ ಕ್ಷೇತ್ರದ ಬಗ್ಗೆ ಎಂಬತ್ತು ಪ್ರಶ್ನೆಗಳನ್ನು ಇಟ್ಟುಕೊಂಡಿದ್ದೇನೆ. ಸದನದಲ್ಲಿ ಆ ಬಗ್ಗೆ ಚರ್ಚಿಸುತ್ತೇನೆ. ಜಿಲ್ಲೆಗೆ ಬಂದ ನಾಯಕರನ್ನು ಸ್ವಾಗತ ಮಾಡಿಕೊಳ್ಳುವುದು ವಾಡಿಕೆ. ಹೀಗಾಗಿ ನಾನು ಸ್ವಾಗತ ಮಾಡುವುದಕ್ಕೆ ಬಂದಿದ್ದೇನೆ. ಸುವರ್ಣಸೌಧ ಕೂಡ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಎಂಇಎಸ್ ಮಹಾಮೇಳಾವ್ ಗೆ ಜನರೇ ಬರಲಿಲ್ಲ
ಬೆಳಗಾವಿಯ ವ್ಯಾಕ್ಸಿನ್ ಡಿಪೋ ರಸ್ತೆ ಮಧ್ಯದಲ್ಲಿ ಎಂಇಎಸ್ ಮಹಾಮೇಳಾವ್ ಆರಂಭ. ಮಹಾಮೇಳಾವ್ ಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನ ಸೇರದ ಹಿನ್ನೆಲೆಯಲ್ಲಿ ವೇದಿಕೆ ಮುಂಭಾಗದ ಕುರ್ಚಿಗಳು ಮಾತ್ರ ಭರ್ತಿ. ಹಿಂದಿನ ಕುರ್ಚಿಗಳು ಖಾಲಿ ಖಾಲಿ ಕಂಡುಬಂದವು. ಯಾವಾಗ ಅಂದುಕೊಂಡ ಸಂಖ್ಯೆಯಲ್ಲಿ ಜನರು ಸೇರಲಿಲ್ಲವೋ ಕಾರ್ಯಕ್ರಮ ಆರಂಭ ಮಾಡಲು ನಿಗದಿ ಆಗಿದ್ದ ಸಮಯವನ್ನೇ ಮುಂದೂಡಲು ಆಯೋಜಕರು ತೀರ್ಮಾನ ಕೈಗೊಂಡರು.

ಕಲಾಪ ಮುಂದೂಡಿಕೆಗೆ ಬಿಜೆಪಿಯಿಂದ ಒತ್ತಾಯ
ಬೆಳಗಾವಿಯ ಅಧಿವೇಶನದ ಮೊದಲ ದಿನ ಸಂತಾಪ ಸೂಚನೆಯ ಬಳಿಕ ದಿನದ ಕಲಾಪ ಮುಂದೂಡಿಕೆಗೆ ಆಗ್ರಹಿಸಲು ಬಿಜೆಪಿ ನಿರ್ಧಾರ ಮಾಡಿತು. ಮಾಜಿ ಪ್ರಧಾನಿ ವಾಜಪೇಯಿ, ಕೇಂದ್ರ ಸಚಿವರಾಗಿದ್ದ ಅನಂತಕುಮಾರ್, ಜಾಫರ್ ಶರೀಫ್, ಮಾಜಿ ಸಚಿವ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಲು ಕಲಾಪ ಮುಂದೂಡಬೇಕು ಎಂದು ಬಿಜೆಪಿ ಒತ್ತಾಯಕ್ಕೆ ನಿರ್ಧರಿಸಿತು.

ದಿನದ ಭೋಜನ ವ್ಯವಸ್ಥೆ ಹೀಗಿದೆ
ಅದಿವೇಶನದಲ್ಲಿ ಭೋಜನ ತಯಾರಿಗೆ 50 ಜನ ಬಾಣಸಿಗರು, 400 ಜನ ಸರ್ವಿಸ್ ಬಾಯ್ಸ್ ಇದ್ದಾರೆ. ಎರಡು ಬಗೆ ಪಲ್ಯ, ಕ್ಯಾಪ್ಸಿಕಮ್ ಮಸಾಲ, ಗ್ರೀನ್ ಬಟಾಣಿ ಮಸಾಲೆ, ಹೆಸರುಬೇಳೆ ಪಾಯಸ, ಸಾಂಬಾರ್, ಮಸಾಲೆ ರೈಸ್ ಮತ್ತು ವೈಟ್ ರೈಸ್, ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿಪುಡಿ, ಉಪ್ಪಿನ ಕಾಯಿ, ಹಪ್ಪಳ ಗ್ರೀನ್ ಸಲಾಡ್, ರಸಂ, ತಂದೂರಿ ರೋಟಿ, ರಾಗಿ ಮುದ್ದೆ- ಸೊಪ್ಪಿನ ಸಾರು, ಸೌತೆಕಾಯಿ ಹುಳಿ, ಕೇಸರ್ ಪಲಾವ್, ಗಂಜಿ ಸಿದ್ಧಪಡಿಸಲಾಗಿದೆ. ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಶೈಲಿಯ ಭೋಜನ ತಯಾರಿಸಲಾಗಿದೆ. ಕಳೆದ ಬಾರಿಯ ಅಧಿವೇಶನದಲ್ಲಿ ಆಹಾರ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು.












Click it and Unblock the Notifications