'ರೈತರಿಗೆ ಆತಂಕ ಬೇಡ, ಬಿತ್ತನೆ ಬೀಜ-ಗೊಬ್ಬರದ ದಾಸ್ತಾನು ಇದೆ'
ಬಾಗಲಕೋಟೆ, ಏ. 07: ರೈತ ಸಮುದಾಯ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಬಿತ್ತನೆಗೆ ಅಗತ್ಯವಾದ ಬೀಜ ಗೊಬ್ಬರ ಕ್ರಿಮಿನಾಶಕ ದಾಸ್ತಾನು ಇದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಪ್ರತಿನಿಧಿಗಳು, ಕೃಷಿ ತೋಟಗಾರಿಕಾ ಪೊಲೀಸ್ ಆರೋಗ್ಯ ಸೇರಿದಂತೆ ಇತರೆ ಇಲಾಖೆಗಳ ಜೊತೆ ಲಾಕ್ಡೌನ್ ನಂತರದ ಕೃಷಿ ಸ್ಥಿತಿಗತಿಗಳ ಕುರಿತು ಸಮಾಲೋಚನಾ ಸಭೆ ನಡೆಸಿದ ಬಳಿಕ ಮಾಹಿತಿ ಕೊಟ್ಟಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ರಾಜ್ಯದ ಜನತೆಯಷ್ಟೇ ಅಲ್ಲದೇ ರೈತ ಸಮುದಾಯಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಬಿತ್ತನೆ ಕಾರ್ಯ ಸರಿಯಾಗಿ ಆಗದೇ ಇದ್ದರೆ ಮುಂದಿನ ದಿನಗಳಲ್ಲಿ ಆನ್ನ ಸಿಗದಂತಹ ಪರಿಸ್ಥಿತಿಯೂ ನಿರ್ಮಾಣವಾಗುವ ಆತಂಕವಿದೆ. ಹೀಗಾಗಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕೃಷಿ ಚಟುವಟಿಕೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸತತ ಸಭೆಗಳನ್ನು ನಡೆಸಿ ರೈತ ಸಮುದಾಯಕ್ಕೆ ಲಾಕ್ಡೌನ್ನಿಂದ ಯಾವುದೇ ರೀತಿಯ ತೊಂದರೆಯಾಗದಂತೆ ದಿಟ್ಟಕ್ರಮ ಕೈಗೊಂಡಿದ್ದಾರೆ.

ಪ್ರತಿ ಜಿಲ್ಲೆಗೆ ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ನಡೆಸುತ್ತಿದ್ದು, ರೈತರ ಬಿತ್ತನೆಗೆ ಅಗತ್ಯವಾದ ಬೀಜ, ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳನ್ನು ಒದಗಿಸಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ. ಕೃಷಿ ಪರಿಕರ ತರಕಾರಿ ಹಣ್ಣುಹಂಪಲು ಸಾಗಿಸಲು ಮಾರಾಟಕ್ಕೆ ಲಾಕ್.ಡೌನ್ ನಿಂದ ಸಡಿಲಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಬಿತ್ತನೆ ಮಳೆ ಬಿದ್ದ ಕೂಡಲೇ ಶುರುವಾಗಲಿದೆ. ಮಲೆನಾಡು, ಅರೆ ಮಲೆನಾಡು ಹಾಗು ಬಯಲು ಸೀಮೆಯ ರೈತರು ಮುಂಗಾರಿಗ ಆರಂಭದಲ್ಲಿಯೆ ಬಿತ್ತನೆ ಮಾಡುತ್ತಾರೆ. ಹೀಗಾಗಿ ಕೃಷಿ ಸಚಿವರು ಭರವಸೆ ಕೊಟ್ಟಿದ್ದಾರೆ. ಆದರೆ ಈ ವರೆಗೂ ಬಿತ್ತನೆ ಬೀಜ, ಗೊಬ್ಬರದ ಅಂಗಡಿಗಳು ತೆರೆಯದೆ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ.












Click it and Unblock the Notifications