ತೋಟಗಳಿಗೆ ನೀರಿಲ್ಲ, ಅಡಿಕೆ ಬೆಳೆಗಾರರು ಕಂಗಾಲು
ಮಂಗಳೂರು, ಮೇ 06 : ದಕ್ಷಿಣ ಕನ್ನಡ ಭಾಗದ ರೈತರು ಚಿಂತಾಕ್ರಾಂತರಾಗಿದ್ದಾರೆ. ಭೀರಕ ಬರಗಾಲದ ಬಿಸಿ ಜಿಲ್ಲೆಗೂ ತಟ್ಟಿದ್ದು, ಅಡಿಕೆ ಬೆಳೆ ನೀರಿಲ್ಲದೆ ಸೊರಗುತ್ತಿದೆ. ಮುಂದಿನ ವರ್ಷ ಶೇ 20ರಷ್ಟು ಬೆಳೆ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನೀರಿನ ಮೂಲಗಳು ಬತ್ತಿಹೋಗಿದ್ದು, ರೈತರು ತಮ್ಮ ತೋಟಕ್ಕೆ ನೀರು ಹರಿಸುವುದನ್ನು ತಿಂಗಳ ಹಿಂದೆಯೇ ನಿಲ್ಲಿಸಿದ್ದಾರೆ. ಪರಿಣಾಮವಾಗಿ ಅಡಿಕೆ, ತೆಂಗು, ಬಾಳೆ ಗಿಡಗಳು ಸೊರಗಿವೆ. ಕುಡಿಯುವ ನೀರೂ ಸಿಗದಿರುವುದಾಗ ಬೆಳೆಗಳಿಗೆ ನೀರೆಲ್ಲಿ?.[ಅರೇಕಾ ಟೀ ಮಾರುಕಟ್ಟೆಗೆ]

'ಜಿಲ್ಲೆಯ ಹೆಚ್ಚಿನ ರೈತರು ಅಡಿಕೆ ಬೆಳೆಯನ್ನು ಅವಲಂಭಿಸಿದ್ದಾರೆ. ಆದರೆ, ಇದೀಗ ತಲೆದೋರಿರುವ ನೀರಿನ ಸಮಸ್ಯೆಯಿಂದಾಗಿ ರೈತರು ಆತಂಕಗೊಂಡಿದ್ದಾರೆ. ನೀರಿಲ್ಲದೆ ಸೊರಗಿದ ಮರಗಳು ನೆಲಕ್ಕುರುಳುತ್ತಿವೆ' ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ಸುರೇಶ್ ಭಂಡಾರಿ ಹೇಳಿದ್ದಾರೆ. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]
ಅಡಿಕೆ ಬೆಳೆಯ ಇಳುವರಿಯು ಮುಖ್ಯವಾಗಿ ನೀರನ್ನು ಅವಲಂಬಿಸಿದೆ. ಈ ಬಾರಿ ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇದು ತೀವ್ರವಾಗಿದೆ. ಇದರಿಂದ ಬೆಳೆಗಳಿಗೆ ನೀರು ಸಿಕ್ಕಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡಿ ಎಂದು ರೈತರು ಒತ್ತಾಯಿಸುತ್ತಿದ್ದಾರೆ. [ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ]
'ಜಿಲ್ಲೆಯಲ್ಲಿ ಪ್ರಮುಖ ನೀರಿನ ಮೂಲಗಳು ಬತ್ತಿಹೋಗಿದ್ದು, ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಾವಿ ಮತ್ತು ಕೆರೆಯನ್ನು ನೀರಾವರಿಗೆ ಬಳಸುತ್ತಿದ್ದವರು ತಿಂಗಳ ಹಿಂದೆಯೇ ತೋಟಕ್ಕೆ ನೀರು ಬಿಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಪರಿಣಾಮ ಮುಂದಿನ ವರ್ಷ ಶೇ 20 ಬೆಳೆ ನಷ್ಟ ಎದುರಾಗಲಿದೆ' ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಚ್.ಆರ್.ಯೋಗೀಶ್ ಹೇಳಿದ್ದಾರೆ.












Click it and Unblock the Notifications