ಅಬ್ಬಬ್ಬಾ! 54000 ಕೋಟಿ ರೂ ಸಾಲ ಮನ್ನಾ ಮಾಡ್ತಾರಂತೆ
ಹೈದರಾಬಾದ್, ಜೂನ್ 4: ದೇಶದಲ್ಲೇ ಮೊದಲ ಬಾರಿಗೆ ಇನ್ನೂ ಅಧಿಕಾರಕ್ಕೆ ಬರುವ ಮುನ್ನವೇ ರಾಜ್ಯದ ಮುಖ್ಯಮಂತ್ರಿಯೊಬ್ಬರು 54000 ಕೋಟಿ ರೂ ರೈತ ಸಾಲ ಮನ್ನಾ ಮಾಡುವ ಮಾತನ್ನಾಡಿದ್ದಾರೆ. ಇದೂ ಒಂದು ರೀತಿಯ ದಾಖಲೆಯೇ!
ಹೌದು, ಜೂನ್ 8ಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಚಂದ್ರಬಾಬು ನಾಯ್ಡು ಎಂಬ ಪಳಗಿದ ರಾಜಕಾರಣಿ, ನಾನಾ ಬ್ಯಾಂಕುಗಳಲ್ಲಿ ಆಂಧ್ರದ ರೈತರು ಪಡೆದಿರುವ 54000 ಕೋಟಿ ರೂ ಸಾಲವನ್ನು ಮನ್ನಾ ಮಾಡುವ ಕಡತಕ್ಕೆ ಸಹಿ ಹಾಕುವ ಮೂಲಕ ಮತ್ತೊಮ್ಮೆ ರಾಜ್ಯದ ಸಾರಥ್ಯ ವಹಿಸಲಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ಮೂಲಗಳು ಖಚಿತ ದನಿಯಲ್ಲಿ ಹೇಳಿವೆ. ಬ್ಯಾಂಕುಗಳಿಗೆ ಸಾಲ ಮರು ಪಾವತಿಸುವುದರ ಬದಲಿಗೆ ರಾಜ್ಯ ಸರಕಾರವು ಸರಕಾರಿ ಬಾಂಡುಗಳನ್ನು ನೀಡಲಿದೆಯಂತೆ.
ತಿರುಗುಬಾಣ: ಅಂದಹಾಗೆ, ಸಂಪೂರ್ಣವಾಗಿ ಸಾಲ ಮನ್ನಾ ಮಾಡುತ್ತೇನೆ ಎಂದು ಚಂದ್ರಬಾಬು ನಾಯ್ಡು ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಕ್ಕೇ ಜನ ಅವರನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಗಮನಾರ್ಹ. (ನಮ್ಮ ಅಗತ್ಯಕ್ಕೆ ಸಾಲ ಕೊಟ್ಟವರನ್ನ ಬಲಿಪಶು ಮಾಡ್ಬೇಕಾ?)

ಒಂದೊಮ್ಮೆ ಸಮೃದ್ಧಿಯಾಗಿದ್ದ ಆಂಧ್ರವು ಇಂದು ಕಂದಾಯ ಆದಾಯ ಕೊರತೆಯೊಂದಿಗೆ ಸೃಷ್ಟಿಯಾಗುತ್ತಿರುವ ದುರ್ದೈವಿ ರಾಜ್ಯ ಎಂಬ ಅಗ್ಗಳಿಕೆಯೊಂದಿಗೆ ಆರಂಭ ಪಡೆಯುತ್ತಿದೆ. ಆದರೂ ಮೊದಲ ಮುಖ್ಯಮಂತ್ರಿ ನಾಯ್ಡು 54000 ಕೋಟಿ ರೂ ಸಾಲ ಮನ್ನಾ ಮಾಡಿ, ರಾಜ್ಯದ ಖಜಾನೆಯನ್ನು ಮತ್ತಷ್ಟು ಬರಿದುಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ.
ನೂತನ ನಾಡಿನ ಮುಖ್ಯಮಂತ್ರಿಯಾಗಿ ತಾವು ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಸಾಕ್ಷಿಯಾಗಿ 5 ಲಕ್ಷ ಜನರು ಮತ್ತು 12 ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುವುದನ್ನು ಖಚಿತಪಡಿಸಿಕೊಂಡಿರುವ ನಾಯ್ಡು ಅದೇ ಘಳಿಗೆಯಲ್ಲಿ ಈ ಬೃಹತ್ ಪ್ರಮಾಣದ ಸಾಲವನ್ನು ಮನ್ನಾ ಮಾಡಿ ವ್ಯಾಪಕವಾಗಿಗಮನ ಸೆಳೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ರೈತರು ಅಡಮಾನ ಸಾಲ ಮತ್ತು ಚಿನ್ನಾಭರಣದ ಮೇಲೆ ರೈತಾಪಿ ಜನ ಮಾಡಿರುವ ಸಾಲದ ಮೊತ್ತವು 6,000 ಕೋಟಿ ರೂ. ಇದೆ.
ಆದರೆ ಇದರ ಒಳಸುಳಿಗಳು ಅನೇಕವಾಗಿವೆ. 2008ರಲ್ಲಿ ಇಂತಹ ಸಾಲದ ಮೊತ್ತ ( 54000 ಕೋಟಿ ರೂ.ಗೆ ಹೋಲಿಸಿದಲ್ಲಿ) ಕೇವಲ 9,000 ಕೋಟಿ ರೂ. ಇದ್ದಿತ್ತು. ಅದೀಗ ಐದಾರು ವರ್ಷಗಳಲ್ಲಿ ಐದಾರು ಪಟ್ಟು ಹೇಗೆ ಹೆಚ್ಚಾಯಿತು ಎಂದು ಹಣಕಾಸು ತಜ್ಞರು ಬ್ಯಾಂಕುಗಳತ್ತ ಅನುಮಾನದ ದೃಷ್ಟಿಯಿಂದ ನೋಡತೊಡಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಬ್ಯಾಂಕುಗಳೇ ತನ್ನ ಬ್ಯಾಲೆನ್ಸ್ ಶೀಟನ್ನು ಸಮತೋಲನದಲ್ಲಿಡಲು ಈ ಸಾಲ ಮನ್ನಾಕ್ಕೆ ಪುಸಲಾಯಿಸುತ್ತಿವೆ ಎಂದು ತಿಳಿದುಬಂದಿದೆ.












Click it and Unblock the Notifications