ರೈತರ ಮನವೊಲಿಕೆಗೆ ಮುಂದಾದ ಕೃಷಿ ಸಚಿವ; ಮುಂದಿನ ನಡೆ ಏನು?
ನವದೆಹಲಿ, ಡಿಸೆಂಬರ್ 10: ಕೃಷಿ ಕಾಯ್ದೆಗಳಲ್ಲಿ ತಿದ್ದುಪಡಿ ತರುವ ಕುರಿತು ಕೇಂದ್ರ ಸರ್ಕಾರ ನೀಡಿದ್ದ ಲಿಖಿತ ಪ್ರಸ್ತಾವವನ್ನು ರೈತ ಒಕ್ಕೂಟಗಳು ಬುಧವಾರ ತಿರಸ್ಕರಿಸಿದ್ದು, ಡಿಸೆಂಬರ್ 14ರಂದು ದೇಶದಾದ್ಯಂತ ಮತ್ತೆ ಪ್ರತಿಭಟನೆಗೆ ಕರೆ ನೀಡಿವೆ.
ಈ ಬೆನ್ನಲ್ಲೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ತಮ್ಮ ಈ ಧರಣಿಯನ್ನು ಕೊನೆಗೊಳಿಸುವಂತೆ ಮತ್ತೊಮ್ಮೆ ಮನವಿ ಮಾಡಲಿರುವುದಾಗಿ ತಿಳಿದುಬಂದಿದೆ.
ರೈತರು ಹಾಗೂ ಸರ್ಕಾರದ ನಡುವಿನ ಈ ಬಿಕ್ಕಟ್ಟನ್ನು ಕೊನೆಗೊಳಿಸಲು ಸರ್ಕಾರದೊಂದಿಗೆ ರೈತರು ಸಹಕರಿಸಬೇಕೆಂದು ಸಚಿವರು ಮನವಿ ಮಾಡಿಕೊಳ್ಳಲಿರುವುದಾಗಿ ತಿಳಿದುಬಂದಿದೆ. ರೈತರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರೆಸುವ ಭರವಸೆ ನೀಡುವುದಾಗಿ ತಿಳಿದುಬಂದಿದೆ.

ರೈತರು ಬುಧವಾರ ಸರ್ಕಾರದ ಲಿಖಿತ ಪ್ರಸ್ತಾವವನ್ನು ತಿರಸ್ಕರಿಸಿದ ನಂತರ ಈ ಕುರಿತು ಚರ್ಚಿಸಲು ಗೃಹ ಸಚಿವ ಅಮಿತ್ ಶಾ ಅವರನ್ನು ಕೃಷಿ ಸಚಿವ ತೋಮರ್ ಭೇಟಿಯಾಗಿದ್ದರು. ರೈಲ್ವೆ, ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಅವರೂ ಈ ಸಂದರ್ಭ ಉಪಸ್ಥಿತರಿದ್ದರು.
ಸರ್ಕಾರವು ಕಾಯ್ದೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಒಳಗೊಂಡಂತೆ ಸುಮಾರು ಏಳೆಂಟು ವಿಷಯಗಳನ್ನು ತಿದ್ದುಪಡಿ ಮಾಡಿ ರೈತ ಮುಖಂಡರಿಗೆ ಲಿಖಿತ ಪ್ರಸ್ತಾವವನ್ನು ಮುಂದಿಟ್ಟಿತ್ತು. ಇದರೊಂದಿಗೆ ಸುಮಾರು ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನೂ ನಿಲ್ಲಿಸಬೇಕಾಗಿ ಮನವಿ ಮಾಡಲಾಗಿತ್ತು. ಆದರೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ರೈತ ನಾಯಕರು, ಯಾವುದೇ ತಿದ್ದುಪಡಿಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವೆಂದರೆ ಪ್ರತಿಭಟನೆ ಕೈಬಿಡುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದರು.
ಇದೇ ಡಿಸೆಂಬರ್ 14ರಂದು ಧರಣಿಗೆ ರೈತರು ಮತ್ತೆ ಕರೆಕೊಟ್ಟಿದ್ದು, ದೆಹಲಿ ಚಲೋ ಧರಣಿ ಹಾಗೂ ಘೇರಾವ್ ಬಿಜೆಪಿ ಮಿನಿಸ್ಟರ್ ಧರಣಿ ಹಮ್ಮಿಕೊಂಡಿರುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ. ಇಡೀ ಭಾರತದ ರೈತರು ಈ ಧರಣಿಗೆ ಸಹಕರಿಸಬೇಕಾಗಿ ಕರೆ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೃಷಿ ಸಚಿವರು ಮತ್ತೆ ರೈತರ ಮನವೊಲಿಸುವುದಾಗಿ ತಿಳಿದುಬಂದಿದೆ.












Click it and Unblock the Notifications