ಕೊರೊನಾ ಕಾಟದ ನಡುವೆ ಕಳಪೆ ಬಿಡಿ ಬೀಜ ಬಿತ್ತನೆ ಮಾರಾಟ!
ಹಾವೇರಿ, ಏಪ್ರಿಲ್.24: ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ನಡುವೆ ಕೃಷಿ ಬಿತ್ತನೆಗೆ ಅಣಿಯಾಗಿರುವ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಕೃಷಿ ವಿಚಕ್ಷಣಾ ತಂಡ ಕಾರ್ಯೋನ್ಮುಖವಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ನಗರದಲ್ಲಿ ರಾತ್ರೋರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಳಪೆ ಬಿಡಿ ಬೀಜ ದಾಸ್ತಾನು ವಶಕ್ಕೆ ಪಡೆದಿದ್ದಾರೆ.
ಹಾವೇರಿ ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಮಂಜುನಾಥ್ ಹಾಗೂ ಸಿಪಿಐ ಭಾಗ್ಯವತಿ ನೇತೃತ್ವದ ಅಧಿಕಾರಿಗಳ ತಂಡವು ಗುರುವಾರ ರಾತ್ರಿ ಬ್ಯಾಡಗಿ ನಗರದಲ್ಲಿ ಇರುವ ಸೂರ್ಯ ಕೋಲ್ಡ್ ಸ್ಟೋರೇಜ್ ಮೇಲೆ ದಾಳಿ ನಡೆಸಿದ್ದು, ಆರು ಕೋಟಿ ರೂಪಾಯಿ ಮೌಲ್ಯದ ಕಳಪೆ ಬಿಡಿ ಬೀಜ ದಾಸ್ತಾನನ್ನು ವಶಕ್ಕೆ ಪಡೆದಿದೆ.
ಬ್ಯಾಡಗಿಯ ಸೂರ್ಯ ಕೋಲ್ಡ್ ಸ್ಟೋರೇಜ್ ನಲ್ಲಿ 2,950 ಕ್ವಿಂಟಾಲ್ ಹಾಗೂ ಛತ್ರ ಗ್ರಾಮದಲ್ಲಿ ಇರುವ ವಕ್ರತುಂಡ ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸಲಾಗಿದ್ದ 2,800 ಕ್ವಿಂಟಾಲ್ ಕಳಪೆ ಬಿಡಿ ಬೀಜಗಳನ್ನು ವಶಕ್ಕೆ ಪಡೆಯಲಾಗಿದೆ.

ಕೃಷಿ ಕಾರ್ಯಚಟುವಟಿಕೆಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ:
ಕೊರೊನಾ ವೈರಸ್ ನಿಂದಾಗ ಭಾರತಕ್ಕೆ ಭಾರತವೇ ಸ್ತಬ್ಧಗೊಂಡಿದೆ. ಒಂದೇ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆ ಸುರಕ್ಷಿತವಾಗಿರುವ ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಯಥಾವತ್ತಾಗಿ ಸಾಗುತ್ತಿವೆ.
ರಾಜ್ಯಾದ್ಯಂತ ಕೃಷಿ ಕಾರ್ಯಚಟುವಟಿಕೆಗಳಿಗೆ ಯಾವುದೇ ರೀತಿ ತೊಂದರೆ ಎದುರಾಗಬಾರದು. ರೈತರ ಕೃಷಿ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಮುಂಗಾರು ಬಿತ್ತನೆ ಬೀಜ ಮಾರಾಟಕ್ಕೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಆದೇಶ ನೀಡಿದ್ದರು. ಇದರ ಮಧ್ಯೆ ಕಳಪೆ ಬಿಡಿ ಬೀಜ ದಾಸ್ತಾನು ಮಾರಾಟಕ್ಕೆ ಮುಂದಾಗಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಎಲ್ಲ ದಾಸ್ತಾನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು, ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications