ಉತ್ತರ ಕನ್ನಡದಲ್ಲಿ ಮುಂಗಾರು ಚುರುಕು, ರೈತರಿಗೆ ಗೊಬ್ಬರದ ಸಮಸ್ಯೆ
ಕಾರವಾರ, ಜೂನ್ 23: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಜೋರಾದ ಬೆನ್ನಲ್ಲೇ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಅದರಲ್ಲಿಯೂ ಅರೆಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಈಗಾಗಲೇ ಭೂಮಿ ಹದಮಾಡತೊಡಗಿದ್ದು ಬೀಜ ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ.
ರೈತರಲ್ಲಿ ಹುರುಪು ಹೆಚ್ಚಿದೆ. ಬಿತ್ತನೆಗೆ ಪೂರಕ ವಾತಾವರಣ ಕಂಡು ಬಂದಿದ್ದು ಕೃಷಿ ಚಟುವಟಿಕೆ ಗರಿಗೆದರಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಪೂರಕ ವಾತಾವರಣ ಸೃಷ್ಟಿಯಾಗಿರುವುದು ಅನ್ನದಾತರಲ್ಲಿ ಸಮಾಧಾನ ಮೂಡಿಸಿದೆ.
ಜಿಲ್ಲೆಯ ಕೆಲವು ಕಡೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಿಗದ ಕಾರಣ ಹದ ಮಾಡಿದ ಜಮೀನನ್ನು ಖಾಲಿ ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ರೈತರು ಗೊಬ್ಬರ, ಬೀಜ ಯಾವಾಗ ಸಿಗಲಿದೆ? ಎಂದು ಕಾದು ಕುಳಿತಿದ್ದಾರೆ.
ರೈತರು ನಿತ್ಯವೂ ಸೊಸೈಟಿಗಳಿಗೆ ಹೋಗಿ ಬರಿಗೈನಲ್ಲಿ ವಾಪಸ್ ಬರುವಂತಾಗಿದೆ. ಕಮ್ಮಿ ಬೆಲೆಯ ರಸಗೊಬ್ಬರ, ಬಿತ್ತನೆ ಬೀಜವನ್ನು ಹೆಚ್ಚಿನ ದರ ನೀಡಿ ಖಾಸಗಿಯಾಗಿ ಕೊಂಡುಕೊಳ್ಳುವ ಅನಿವಾರ್ಯತೆ ಬಂದೊದಗಿದೆ. ಸಂಬಂಧ ಪಟ್ಟ ಇಲಾಖೆ ಗಮನಿಸ ಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಡಿಎಪಿ ರಸಗೊಬ್ಬರದ ಲಭ್ಯತೆ ಕೊರತೆ ಕೃಷಿ ಚಟುವಟಿಕೆಗಳಲ್ಲಿ ಸ್ಥಗಿತ
ಉತ್ತರಕನ್ನಡ ಜಿಲ್ಲೆಯಲ್ಲಿ ಮುಂಗಾರು ಜೋರಾದ ಬೆನ್ನಲ್ಲೇ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು ಎಲ್ಲೆಡೆ ಕೃಷಿಕರು ಭೂಮಿ ಹದ ಮಾಡುತ್ತಿದ್ದಾರೆ. ಮಳೆ ಕೂಡ ವ್ಯಾಪಕವಾಗಿ ಬೀಳುತ್ತಿರುವ ಕಾರಣ ರೈತರಿಗೆ ಪೂರಕ ವಾತಾವರಣ ಸೃಷ್ಟಿಸಿದ್ದು, ಕೃಷಿ ಚಟುವಟಿಕೆಗಳಲ್ಲಿ ತಲ್ಲಿನರಾಗುವಂತಾಗಿದೆ. ಆದರೆ ಕೃಷಿಕರಿಗೆ ಬೀಜ ಬಿತ್ತನೆ ವೇಳೆ ಅಗತ್ಯವಿರುವ ಡಿಎಪಿ ರಸಗೊಬ್ಬರದ ಲಭ್ಯತೆ ಇಲ್ಲದಂತಾಗಿದ್ದು ಇದು ಕೃಷಿ ಚಟುವಟಿಕೆಗಳು ವಿಳಂಬವಾಗುವಂತೆ ಮಾಡಿದೆ. ಕೃಷಿಕರು ರಸಗೊಬ್ಬರಗಳ ಅಧಿಕೃತ ಮಾರಾಟಗಾರರು, ಪರವಾನಿಗೆ ಪಡೆದ ಸಹಕಾರಿ ಸಂಸ್ಥೆಗಳಲ್ಲಿ ರಸಗೊಬ್ಬರಕ್ಕೆ ವಿಚಾರಿಸಿ ಬರಿಗೈಯಲ್ಲಿ ಮರಳುತ್ತಿದ್ದಾರೆ.

ಪೂರೈಕೆ ಇಲ್ಲದೆ ಕೃಷಿ ಚಟುವಟಿಕೆ ವಿಳಂಬ
ಇನ್ನು ಬಿತ್ತನೆ ಬೀಜಗಳು ಸಹ ಬೇಕಾದಷ್ಟು ಪ್ರಮಾಣದಲ್ಲಿ ಸಿಗದೇ ರೈತರು ಕಂಗಾಲಾಗಿದ್ದಾರೆ. ಪ್ರತಿ ವರ್ಷ ಮೇ ಮಧ್ಯಂತರದಲ್ಲಿ ರಸಗೊಬ್ಬರ, ಭತ್ತ ಪೂರೈಕೆಯಾಗುತ್ತಿದ್ದು, ಸೆಪ್ಪಂಬರ್ವರೆಗೂ ಹಂತಹಂತವಾಗಿ ಪೂರೈಕೆಯಾಗುತಿತ್ತು. ಆದರೆ ಈ ಬಾರಿ ಪೂರೈಕೆ ವಿಳಂಬವಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಬೆಳೆಯುವ ಭತ್ತ, ಜೋಳ, ಶುಂಠಿ ನಾಟಿ ಮಾಡುವ ಸಮಯದಲ್ಲಿ ಡಿಎಪಿ ಮತ್ತು ಎನ್ಪಿಕೆ ರಸಗೊಬ್ಬರಗಳನ್ನು ಬಹಿತೇಕ ರೈತರು ಕಡ್ಡಾಯವಾಗಿ ಬಳಸುವುದರಿಂದ ಪೂರೈಕೆ ಇಲ್ಲದೆ ಕೃಷಿ ಚಟುವಟಿಕೆ ವಿಳಂಬವಾಗುವಂತಾಗಿದೆ.
ಬನವಾಸಿ ರೈತ ರಾಘವೇಂದ್ರ ನಾಯ್ಕ ಮಾತನಾಡಿ, "ಇನ್ನು ಕೆಲವೆಡೆ ಹದಗೊಳಿಸಿದ ಭೂಮಿಯನ್ನು ರಸಗೊಬ್ಬರ ಇಲ್ಲದ ಕಾರಣ ಬೀಜ ಬಿತ್ತನೆ ಮಾಡಲಾಗದೇ ಹಾಗೆ ಬಿಡಲಾಗಿದೆ. ಇದೇ ಕಾರಣಕ್ಕೆ ಕೆಲವೆಡೆ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ" ಎಂದು ಹೇಳಿದ್ದಾರೆ.

ಖಾಸಗಿ ಅಂಗಡಿಗಳಲ್ಲಿ ಕೊಂಡುಕೊಳ್ಳುತ್ತಿರುವ ರೈತರು
"ಇನ್ನು ಪ್ರತಿ ವರ್ಷ ಮುಂಗಾರು ಹಂಗಾಮು ಆರಂಭಗೊಳ್ಳುವ ಮುನ್ನ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗುತಿತ್ತು. ಆದರೆ ಈ ಬಾರಿ ರಸಗೊಬ್ಬರ, ಬೀಜ ಬಿತ್ತನೆ ಬೀಜ ಎರಡು ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಶಿರಸಿ, ಸಿದ್ದಾಪುರ, ಬನವಾಸಿ, ಮುಂಡಗೋಡ ಭಾಗದಲ್ಲಿ ಕೃಷಿ ಚಟುವಟಿಕೆ ಸ್ಥಗಿತವಾಗಿದೆ. ಇನ್ನು ಕೆಲವು ರೈತರು ಹೆಚ್ಚಿನ ದರ ನೀಡಿ ಖಾಸಗಿ ಅಂಗಡಿಗಳಲ್ಲಿ ಕೊಂಡು ತರುತ್ತಿದ್ದಾರೆ" ಎಂದು ಬನವಾಸಿ ಮದುರಳ್ಳಿಯ ರೈತ ಬಸವರಾಜ ನಾಯ್ಕತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಕಾರವಾರ ಜಂಟಿ ಕೃಷಿ ಇಲಾಖೆ ನಿರ್ದೇಶಕರಾದ ಹೊನ್ನಪ್ಪ ಗೌಡ ಮಾತನಾಡಿ, "ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ 344 ಮಿ. ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ112 ಮಿ. ಮೀ ಮಾತ್ರ ಮಳೆಯಾಗಿ ಶೇ.67 ರಷ್ಟು ಕೊರತೆಯಾಗಿದೆ. ಆದರೆ ಮುಂಗಾರು ಪೂರ್ವದಲ್ಲಿಯೇ ಉತ್ತಮ ಮಳೆಯಾದ ಕಾರಣ ಹಳಿಯಾಳ, ಮುಂಡಗೋಡ ಭಾಗಗಳಲ್ಲಿ ಶೇ.80 ರಷ್ಟು ಬಿತ್ತನೆ ಪೂರ್ಣವಾಗಿದೆ. ಕರಾವಳಿಯಲ್ಲಿ ಇದೀಗ ಉಳುಮೆ ಹಾಗೂ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ. ಜುಲೈ ಅಂತ್ಯದ ವೇಳೆಗೆ ಎಲ್ಲ ಕಡೆ ಬಿತ್ತನೆ ಪ್ರಾರಂಭವಾಗಲಿದೆ" ಎಂದರು.

ರಸಗೊಬ್ಬರ, ಬಿತ್ತನೆ ಬೀಜ ಸಿಗದೆ ತೊಂದರೆ ಅನುಭವಿಸುತ್ತಿರುವ ರೈತರು
ಇನ್ನು ಬಿತ್ತನೆ ಬೀಜ ಜಿಲ್ಲೆಗೆ 7900 ಕ್ವಿಂಟಲ್ ಬೇಕಾಗಿದೆ. ಈ ಪೈಕಿ 6700 ಕ್ವಿಂಟಲ್ ಸರಬರಾಜಾಗಿದ್ದು, 4200 ವಿತರಣೆಯಾಗಿದೆ. ಹತ್ತಿ, ಜೋಳ, ಭತ್ತ ಎಲ್ಲವೂ ಕೂಡ ಇದೀಗ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಾಗುತ್ತಿದೆ. ಇನ್ನು 4,750 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, 1,300 ಮೆಟ್ರಿಕ್ ಟನ್ ಸೊಸೈಟಿಗಳಿಗೆ ಕಳುಹಿಸಲಾಗಿದೆ. ಹೆಚ್ಚಿನ ಬೇಡಿಕೆ ಇದ್ದು ಮುಂದಿನ ವಾರದೊಳಗೆ ಸೊಸೈಟಿಗಳಿಗೆ ಬರಲಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಮಳೆ ಉತ್ತಮವಾಗುತ್ತಿರುವ ಬೆನ್ನಲ್ಲೇ ರೈತರು ಕೃಷಿ ಭೂಮಿ ಹದಗೊಳಿಸಿ ಬಿತ್ತನೆಗೆ ಸಿದ್ದವಾಗುತ್ತಿದ್ದರು ದುರದೃಷ್ಟವಶಾತ್ ರೈತರಿಗೆ ಸಿಗಬೇಕಿದ್ದ ರಸಗೊಬ್ಬರ, ಬಿತ್ತನೆ ಬೀಜ ಸಿಗದೆ ತೊಂದರೆ ಅನುಭವಿಸುವಂತಾಗಿದೆ.












Click it and Unblock the Notifications