ಕಲಬುರಗಿ; 78 ಕಡಲೆ ಕಾಳು ಖರೀದಿ ಕೇಂದ್ರಗಳ ಸ್ಥಾಪನೆ
ಕಲಬುರಗಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಮಾಡಲು 78 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಕಲಬುರಗಿ, ಫೆಬ್ರವರಿ 23; ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 78 ಕಡಲೆ ಕಾಳು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಡಲೆ ಕಾಳು ಬೆಳೆದ ರೈತರು ಹತ್ತಿರದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ, ಅಗತ್ಯ ದಾಖಲೆ ಕೊಟ್ಟು ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.
ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷ ಯಶವಂತ ವಿ. ಗುರುಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಕಡಲೆಕಾಳು ಪ್ರತಿ ಕ್ವಿಂಟಾಲ್ಗೆ 5335 ರೂ. ಗಳ ಬೆಂಬಲ ಬೆಲೆಯ ದರದಲ್ಲಿ ಖರೀದಿ ಮಾಡಲಾಗುತ್ತದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 78 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಪ್ರತಿ ಎಕರೆಗೆ 4 ಕ್ವಿಂಟಾಲ್ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ ಪ್ರಮಾಣ 15 ಕ್ವಿಂಟಾಲ್ನಂತೆ ಎಫ್ಎಕ್ಯೂ ಗುಣಮಟ್ಟದ ಕಡಲೆ ಕಾಳುಗಳನ್ನು ಮಾತ್ರ ಖರೀದಿಸಲಾಗುತ್ತದೆ. ಕಡಲೆ ಕಾಳು ಬೆಳೆದ ರೈತರು ಹತ್ತಿರದ ಖರೀದಿ ಕೇಂದ್ರಕ್ಕೆ ತೆರಳಿ 2023ರ ಮಾರ್ಚ್ 31ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ರೈತರಿಂದ ಖರೀದಿ ಮಾಡುವ ಕಾಲಾವಧಿಯನ್ನು 2023ರ ಮೇ 16 ರವರೆಗೆ ನಿಗದಿಪಡಿಸಿದೆ.
ಕಲಬುರಗಿ ಜಿಲ್ಲೆಯಲ್ಲಿ ಕಲಬುರಗಿ ತಾಲೂಕಿನಲ್ಲಿ 13, ಸೇಡಂ ತಾಲೂಕಿನಲ್ಲಿ 11, ಅಫಜಲಪುರ ತಾಲೂಕಿನಲ್ಲಿ 8, ಆಳಂದ ತಾಲೂಕಿನಲ್ಲಿ 12, ಚಿಂಚೋಳಿ ತಾಲೂಕಿನಲ್ಲಿ 7, ಚಿತ್ತಾಪುರ ತಾಲೂಕಿನಲ್ಲಿ 20 ಹಾಗೂ ಜೇವರ್ಗಿ ತಾಲೂಕಿನಲ್ಲಿ 6 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಖರೀದಿ ಕೇಂದ್ರಗಳ ವಿವರ ಹಾಗೂ ಕಡಲೆ ಕಾಳು ಖರೀದಿ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಕಲಬುರಗಿ ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಅನೀಲಕುಮಾರ ಹಾದಿಮನಿ ಅವರನ್ನು ಮೊಬೈಲ್ ಸಂಖ್ಯೆ 7899199990 ಮೂಲಕ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಲಾಗಿದೆ.
ಕಲಬುರಗಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ನಿಯಮಿತದ ಶಾಖಾ ವ್ಯವಸ್ಥಾಪಕ ಶೃತಿ ಸಜ್ಜನ್ರನ್ನು ಮೊಬೈಲ್ ಸಂಖ್ಯೆ 9449864446 ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತದ ನಾಗರಾಜ್ರನ್ನು ಮೊಬೈಲ್ ಸಂಖ್ಯೆ 9964474444 ಮೂಲಕ ಸಂಪರ್ಕಿಸಲು ಕೋರಲಾಗಿದೆ.
ಖರೀದಿ ಕೇಂದ್ರಗಳ ಮಾರ್ಪಾಡು; ಬಳ್ಳಾರಿ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾಗಿದ್ದ ರೈತರ ಖರೀದಿ ಕೇಂದ್ರಗಳಲ್ಲಿ ಮಾರ್ಪಾಡು ಮಾಡಲಾಗಿದೆ. 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈಗಾಗಲೇ ತೆರೆಯಲಾಗಿದ್ದ ರೈತರ ಖರೀದಿ ಕೇಂದ್ರಗಳನ್ನು ಸಾಗಾಣಿಕೆ ಹಾಗೂ ಹಮಾಲಿಗಳ ಹಿತದೃಷ್ಟಿಯಿಂದ ಮಾರ್ಪಾಡು ಮಾಡಲಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಪವನ್ಕುಮಾರ್ ಮಾಲಪಾಟಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಬಳ್ಳಾರಿ ತಾಲೂಕಿನಲ್ಲಿ ಈ ಹಿಂದೆ ಎಪಿಎಂಸಿ ಯಾರ್ಡ್ನಲ್ಲಿದ್ದ ಖರೀದಿ ಕೇಂದ್ರವನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ತೆರೆಯಲಾಗಿದೆ.
ಅದೇರೀತಿಯಾಗಿ ಸಿರುಗುಪ್ಪ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಖರೀದಿ ಕೇಂದ್ರವು ತಾಲೂಕಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಕಂಪ್ಲಿ ತಾಲೂಕಿನ ಎಪಿಎಂಸಿ ಯಾರ್ಡ್ನಲ್ಲಿದ್ದ ಖರೀದಿ ಕೇಂದ್ರವು ತಾಲೂಕಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications