ಸಿಂಘು ಗಡಿ ಸಂಚಾರ ಮುಕ್ತಗೊಳಿಸಲು 20 ಗ್ರಾಮಸ್ಥರ ಮಹಾಪಂಚಾಯತ್
ಚಂಡೀಘರ್, ಜೂ 20: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ-ಸಿಂಘು ಗಡಿಯನ್ನು ಸಂಚಾರ ಮುಕ್ತಗೊಳಿಸುವಂತೆ ಆಗ್ರಹಿಸಿದ ಹರಿಯಾಣದ ಸೋನಿಪತ್ ಬಳಿ 20 ಗ್ರಾಮಗಳ ಜರು ಮಹಾಪಂಚಾಯತ್ ನಡೆಸಿದರು.
"ಉದ್ಯೋಗಕ್ಕಾಗಿ ತೆರಳುವ ಜನರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ಮತ್ತು ಟ್ಯೂಷನ್ ಹಾಗೂ ಕೋಟಿಂಗ್ ಕೇಂದ್ರಗಳಿಗೆ ಹೋಗುವುದಕ್ಕೆ ಆಗುತ್ತಿಲ್ಲ. ವಾಣಿಜ್ಯ ಘಟಕಗಳು, ಅಂಗಡಿಗಳು ತೀವ್ರ ನಷ್ಟ ಅನುಭವಿಸುತ್ತಿವೆ. ರೈತರು ಹಾಗೂ ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ. ರೈತರ ಹೋರಾಟಕ್ಕೆ ನಾವು ವಿರೋಧವನ್ನೂ ವ್ಯಕ್ತಪಡಿಸುತ್ತಿಲ್ಲ, ಆದರೆ ನಾಗರಿಕರಾಗಿ ನಮಗೂ ಸಮಾನ ಹಕ್ಕು ಇದೆ ಅಲ್ಲವೇ," ಎಂದು ಪ್ರತಿಭಟನಾನಿರತ ವ್ಯಕ್ತಿ ರಾಂಪಾಲ್ ಸರೋಹಾ ಹೇಳಿದ್ದಾರೆ.
"ರೈತರ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಕಳೆದ ಏಳು ತಿಂಗಳಿನಿಂದಲೂ ಈ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಈ ರಸ್ತೆಯ ಒಂದು ಭಾಗದಲ್ಲಾದರೂ ಸಂಚಾರಕ್ಕೆ ಅವಕಾಶ ನೀಡಬೇಕು, ಇಲ್ಲದಿದ್ದರೆ ಸಾರ್ವಜನಿಕರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ ಎನ್ನುವುದೇ ನಮ್ಮ ಒತ್ತಾಯ," ಎಂದಿದ್ದಾರೆ.


10 ದಿನ ರೈತರಿಗೆ ಸಮಯ ನೀಡಿದ ಗ್ರಾಮಸ್ಥರು
ಕೇಂದ್ರ ಸರ್ಕಾರದ ಜೊತೆ ಸಂಧಾನ ಮಾತುಕತೆ ನಡೆಸಿ ರೈತರು ತಮ್ಮ ಬೇಡಿಕೆಗಳನ್ನು ಸಲ್ಲಿಸುವುದಕ್ಕೆ ನಾವು ಇನ್ನೂ 10 ದಿನ ಸಮಯಾವಕಾಶವನ್ನು ನೀಡುತ್ತೇವೆ. ಅದು ಸಾಧ್ಯವಾಗದಿದ್ದರೆ, ದೆಹಲಿಯಲ್ಲಿ ದೊಡ್ಡ ಮಟ್ಟದ ಮಹಾಪಂಚಾಯತ್ ಅನ್ನು ನಡೆಸಲಾಗುತ್ತದೆ. ಅಂದು ಕುಂಡ್ಲಿ, ನರೇಲಾ ಸೇರಿದಂತೆ ದೆಹಲಿ ಮತ್ತು ಹರಿಯಾಣ ನಡುವಿನ 100ಕ್ಕೂ ಹೆಚ್ಚು ಗ್ರಾಮಗಳ ಜನರು ಭಾಗವಹಿಸಲಿದ್ದಾರೆ," ಎಂದು ರಾಂಪಾಲ್ ಸರೋಹಾ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ರೈತರಿಗೆ ಸಂಧಾನದ ಆಹ್ವಾನ
"ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೆ ಸಂಧಾನ ಮಾತುಕತೆಯನ್ನು ಪುನಾರಂಭಿಸುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ," ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಘೋಷಿಸಿದ್ದರು. "ರೈತರ ಜೊತೆಗೆ ಚರ್ಚೆ ನಡೆಸುವುದಕ್ಕೆ ಕೇಂದ್ರ ಸರ್ಕಾರವು ಸನ್ನದ್ಧವಾಗಿದೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಬೇಡಿಕೆಯೊಂದನ್ನು ಹೊರತುಪಡಿಸಿ, ಮಧ್ಯರಾತ್ರಿ ರೈತ ಸಂಘಟನೆಗಳು ಕಾಯ್ದೆಯ ನಿಬಂಧನೆಗಳ ಬಗ್ಗೆ ಚರ್ಚಿಸಲು ಮುಂದಾದರೆ ಸರ್ಕಾರ ಅದಕ್ಕೆ ಆಹ್ವಾನ ನೀಡಲಿದೆ," ಎಂದು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಸಂದೇಶದಲ್ಲಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪಷ್ಟಪಡಿಸಿದ್ದರು.

ಕೇಂದ್ರ ಸಚಿವರು ನಡೆಸಿದ 11 ಸುತ್ತಿನ ಚರ್ಚೆ ವಿಫಪಲ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಆಹಾರ ಸಚಿವ ಪಿಯೂಶ್ ಗೋಯೆಲ್ ಸೇರಿದಂತೆ ಮೂವರು ಕೇಂದ್ರ ಸಚಿವರು ಪ್ರತಿಭಟನಾನಿರತ ಸಂಘಟನೆಗಳ ಜೊತೆಗೆ ಸಂಧಾನ ಸಭೆ ನಡೆಸಿದ್ದರು. ಈವರೆಗೂ ನಡೆಸಿದ 11 ಸುತ್ತಿನ ಸಂಧಾನ ಮಾತುಕತೆಗಳು ವಿಫಲಗೊಂಡಿತ್ತು. ಕಳೆದ ಜನವರಿ 22ರಂದು ಕೊನೆಯದಾಗಿ 41 ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ನಡುವಿನ ಸಂಧಾನ ಮಾತುಕತೆ ಮುರಿದು ಬಿದ್ದಿತ್ತು. ಇದಾಗಿ ನಾಲ್ಕು ದಿನಗಳಲ್ಲೇ ನಡೆದ ಜನವರಿ 26ರ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗಿದ್ದು, ಅಂದು ನವದೆಹಲಿಯಲ್ಲಿ ರೈತರು ನಡೆಸಿದ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು.

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳು ಯಾವುವು?
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ನವೆಂಬರ್ 26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications