ಕೊಡಗಿನಲ್ಲಿ ಅಕಾಲಿಕ ಮಳೆ, ನಿಲ್ಲದ ರೈತರ ಗೋಳು
- ಮಡಿಕೇರಿ, ಡಿ.3: ಈ ತಡವಾಗಿಯಾದರೂ ಕೆಆರ್ಎಸ್ ಜಲಾಶಯ ತುಂಬಿತಲ್ಲ ಎಂಬ ನೆಮ್ಮದಿ ಸರ್ಕಾರ ಹಾಗೂ ರೈತರದ್ದಾಗಿದೆ. ಆದರೆ ಕಾವೇರಿ ತವರು ಕೊಡಗಿನಲ್ಲಿ ಕಾಫಿ ಹಾಗೂ ಭತ್ತ ಬೆಳೆಗಾರರು ಇನ್ನೂ ನಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ನೆಮ್ಮದಿ ಕಳೆದುಕೊಂಡಿದ್ದಾರೆ.

ಅದಕ್ಕೆ ಕಾರಣವೂ ಇದೆ. ಕೊಡಗಿನಲ್ಲಿ ಮಳೆಯನ್ನೇ ನಂಬಿ ರೈತರು ಭತ್ತ ಬೆಳೆಯುತ್ತಾರೆ. ಅಲ್ಲದೆ ವರ್ಷದ ನಾಲ್ಕೈದು ತಿಂಗಳು ಇಲ್ಲಿ ಮಳೆ ಸುರಿಯುವುದರಿಂದ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ನಾಟಿ ಮಾಡುವ ರೈತರು ಡಿಸೆಂಬರ್ ವೇಳೆಗೆ ಕೊಯ್ಲಿಗೆ ಬರುವಂತಹ ತಳಿಯ ಭತ್ತವನ್ನೇ ಬೆಳೆಯುತ್ತಾರೆ. ಇನ್ನು ಕೆಲವರು ನೀರಿನ ಸೌಲಭ್ಯವಿಲ್ಲದವರು ಮೂರು ತಿಂಗಳಿಗೆ ಕಟಾವಿಗೆ ಬರುವಂತಹ ಬೆಳೆ ಬೆಳೆಯುತ್ತಾರೆ.
ಮೇ ತಿಂಗಳಲ್ಲಿ ಆರಂಭವಾಗುತ್ತಿದ್ದ ಮಳೆ ಅಕ್ಟೋಬರ್ ತಿಂಗಳಿಗೆಲ್ಲಾ ನಿಂತು ಹೋಗುತ್ತಿತ್ತು. ಇದರಿಂದ ನೆಲವೆಲ್ಲಾ ಒಣಗಿ ಭತ್ತ ಕೊಯ್ಲಿಗೆ ಸುಗಮವಾಗುತ್ತಿತ್ತು. ಡಿಸೆಂಬರ್ ಬರುತ್ತಿದ್ದಂತೆಯೇ ಭತ್ತವೂ ಕೊಯ್ಲಿಗೆ ಬರುತ್ತಿತ್ತು. ಅದನ್ನು ಮುಗಿಸುತ್ತಿದ್ದಂತೆಯೇ ಕಾಫಿಯೂ ಕೊಯ್ಲಿಗೆ ಸಿದ್ದವಾಗಿಬಿಡುತ್ತಿತ್ತು ಎಲ್ಲ ಕೆಲಸವನ್ನು ಯಾವುದೇ ಅಡಚಣೆಯಿಲ್ಲದೆ ಬೆಳೆಗಾರರು ಮುಗಿಸುತ್ತಿದ್ದರು.
ಆದರೆ ಈ ವರ್ಷ ಬೆಳೆಗಾರರ ಎಲ್ಲಾ ನಿರೀಕ್ಷೆಗಳನ್ನು ಮಳೆ ಬುಡಮೇಲು ಮಾಡಿದೆ. ಮಳೆ ಹೋದರೆ ಸಾಕಪ್ಪಾ ಎಂದು ಕೈ ಮುಗಿದರೂ ಮಳೆ ಹೋಗುತ್ತಿಲ್ಲ. ಪರಿಣಾಮ ಭತ್ತ ಬೆಳೆ ನೆಲಕಚ್ಚಿದೆ. ಜೊತೆಗೆ ಅಕ್ಟೋಬರ್ನಲ್ಲಿ ತೆನೆ ಬಿಡುವ ಸಂದರ್ಭದಲ್ಲಿ ಮಳೆ ಸುರಿದಿದ್ದರಿಂದ ಭತ್ತವೆಲ್ಲಾ ಜೊಳ್ಳಾಗಿದೆ.
ಇದರಿಂದ ಲಕ್ಷಾಂತರ ರೂಪಾಯಿಯ ಬೆಳೆ ನಷ್ಟವಾಗಿದೆ. ಜೊತೆಯಲ್ಲಿಯೇ ಕಾಫಿ ಕೂಡ ಹಣ್ಣಾಗುತ್ತಿದ್ದು, ಮಳೆಯಿಂದಾಗಿ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಹಣ್ಣಾಗಿರುವ ಕಾಫಿ ಮಳೆ ಸುರಿಯುತ್ತಿರುವುದರಿಂದ ಕೊಳೆತು ನೆಲಕ್ಕೆ ಬೀಳುತ್ತಿದೆ. ಇದರಿಂದ ಬೆರ್ರಿಬೋರರ್ ಎಂಬ ರೋಗ ಹರಡುವ ಭಯವೂ ಉಂಟಾಗಿದೆ. ಮತ್ತೊಂದೆಡೆ ಕಾರ್ಮಿಕರ ಸಮಸ್ಯೆ ಕೂಡ ಕಾಡತೊಡಗಿದೆ. ಒಟ್ಟಾರೆ ಹೇಳಬೇಕೆಂದರೆ ಕೊಡಗಿನ ಬೆಳೆಗಾರರಿಗೆ ನೆಮ್ಮದಿಯಂತು ಇಲ್ಲವಾಗಿದೆ.












Click it and Unblock the Notifications