ಸಮ್ಮೇಳನದಲ್ಲಿ ಅಶೋಕ್, ಅಶ್ವಥ್ ಮಿಂಚಿಂಗ್

ಉದ್ಯಾನ ನಗರಿಯ ಸಾಂಸ್ಕೃತಿಕ ಬೀಡು ಬಸವನಗುಡಿಯಲ್ಲಿ ನಡೆದ ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಹಾಗಂತ ಸಚಿವ ಅಶೋಕ್ ಘೋಷಿಸಿದ್ದಾರೆ.
ಮೂರು ದಿನಗಳ ಕಾಲ ನಡೆದ ಸಮ್ಮೇಳನಕ್ಕೆ ಜನ ಸಾಗರವೇ ಹರಿದು ಬಂತು. ಸುಮಾರು ಮೂರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಮಿತಾನಂದ ಅನುಭವಿಸಿದರು ಅವರೆಲ್ಲರಿಗೂ ತುಂಬ ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಬೆಂಗಳೂರಿನ ಸಮಸ್ತ ಕನ್ನಡಿಗರು, ಕನ್ನಡಾಭಿಮಾನಿಗಳು, ದೂರದೂರದ ಊರುಗಳಿಂದ ಆಗಮಿಸಿ ಕಾರ್ಯಕ್ರಮ ಯಶಸ್ಸುಗೊಳಿಸಿದ್ದಾರೆ. ಎಲ್ಲರೂ ಒಗ್ಗೂಡಿ ಕನ್ನಡ ತೇರು ಎಳೆದು ಧನ್ಯತಾ ಭಾವ ಮೆರೆದಿದ್ದಾರೆ. ಇದು ಸ್ವಾಗತ ಸಮಿತಿಯ ಅಧ್ಯಕ್ಷನಾಗಿ ತುಂಬು ಸಂತಸ ತಂದಿದೆ ಎಂದು ಅವರು ಆನಂದಪರವಶರಾಗಿ ನುಡಿದರು.
ಅಶೋಕ್ ಕೇಂದ್ರ ಬಿಂದು : ಬಸವನಗುಡಿಯಲ್ಲೇ ಸಮ್ಮೇಳನ ನಡೆಸಲು ಅಶೋಕ್ ಸಾಹೇಬ್ರು ನಿರ್ಧರಿಸಿದ ಮೇಲೆ ಪರಿಷತ್ತಿನ ಕಡೆಯಿಂದ ಆಯೋಜಕರು ಬಂದರೋ ಬಿಟ್ಟರೋ ಅಶೋಕ್ ಅವರ ಹಿಂಬಾಲಕರಂತೂ ಮೂರು ದಿನಗಳ ಕಾಲ ಸಾಹಿತ್ಯ ಸುಧೆಯಲ್ಲಿ ಮಿಂದು ಪಾವನರಾದರು.
ಪೂರ್ವ ಜನ್ಮದ ಸುಕೃತ: ಅಶ್ವತ್ಥನಾರಾಯಣ
ಇಷ್ಟು ದಿನಗಳ ಕಾಲ ರಾಜಕೀಯ ಸಮಾರಂಭ ಏರ್ಪಡಿಸಿ ಮಾತ್ರವೇ ಅನುಭವ ಇತ್ತು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾಗುವ ಅವಕಾಶ ಸಿಕ್ಕಿದ್ದು, ತಮ್ಮ ಪೂರ್ವ ಜನ್ಮದ ಸುಕೃತ ಎಂದು ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಅವಕಾಶ ತಮ್ಮಬದುಕಿನಲ್ಲೊಂದು ಮೈಲಿಗಲ್ಲು, ಸಾಹಿತ್ಯ ಸರಸ್ವತಿಯ ಸೇವೆ ಮಾಡುವ ಸೌಭಾಗ್ಯ ತಮ್ಮದಾಗಿದೆ ಎಂದು ವಿಶ್ಲೇಷಿಸಿದರು.
ಆಯೋಜನೆಯಲ್ಲಿ ಕೆಲವೊಂದು ಲೋಪಗಳಾಗಿವೆ ಎಂಬುದನ್ನು ಒಪ್ಪಿಕೊಂಡ ಅವರು, ಇಂಥ ಸಮ್ಮೇಳನ ನಡೆಸುವಾಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೂ ಜವಾಬ್ದಾರಿ ವಹಿಸುವುದು ಅಗತ್ಯ. ತಮ್ಮ ತಮ್ಮ ಜಿಲ್ಲೆಯಿಂದ ಬರುವ ಸದಸ್ಯರ ಊಟ, ವಸತಿಯ ಹೊಣೆಯನ್ನು ಆಯಾ ಜಿಲ್ಲೆಯ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ನಿರ್ವಹಿಸಿದೆ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಧಾವಂತದಲ್ಲೂ ಕನ್ನಡ ಪ್ರೇಮಿಗಳು ಸಮ್ಮೇಳನಕ್ಕೆ ನೀಡಿರುವ ಸ್ಪಂದನ ಅದ್ವಿತೀಯ ಎಲ್ಲರಿಗೂ ನಾವು ಆಭಾರಿಗಳು ಎಂದು ತಿಳಿಸಿದರು.












Click it and Unblock the Notifications