ಪ್ರೇಮಿಗಳ ದಿನಾಚರಣೆ ಆಚರಿಸಲಿ ಬಿಡಿ: ಬಸವರಾಜು
ಚಿತ್ರದುರ್ಗ, ಫೆ. 8 : ಮತಾಂತರ ವಿರೋಧಿಸುವವರು ಅಧರ್ಮಿಷ್ಟರು, ಸ್ವಾಮಿ ಎಂದು ಕರೆಸಿಕೊಳ್ಳುವ ಅರ್ಹತೆ ಯಾರಿಗೂ ಇಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗಿ ಕೊಡಿ, ಯುವಜನತೆ ಪ್ರೇಮಿಗಳ ದಿನ ಆಚರಿಸಿದರೆ ಏನಾಗಲಿದೆ. ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಲ್ ಬಸವರಾಜು ಅವರ ಬೀಸಿದ ಮಾತಿನ ಚಾಟಿ ಇದು. ಶನಿವಾರ ಮಧ್ಯಾಹ್ನ ನಡೆದ ಸಮ್ಮೇಳನಾಧ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳಿಗೆ ಅವರು ಹಾಸ್ಯ, ವಿಡಂಬನೆ, ಲೇವಡಿಯ ಬಾಣಗಳನ್ನು ಬಿಟ್ಟು ಸಾಹಿತ್ಯಾಭಿಮಾನಿಗಳ ಹೃದಯ ಗೆದ್ದರು.
ಮತಾಂತರಕ್ಕೆ ತಡೆಯೊಡ್ಡುವವರು ಸನಾತನವಾದಿಗಳು. ತಮ್ಮ ಸುಖಕ್ಕಾಗಿ ಜಾತಿ ಹೆಸರಿನಲ್ಲಿ ಶೋಷಣೆ ಮಾಡುವವರಿಗೆ ಮತಾಂತರ ಬೇಡವಾಗಿದೆ. ಹಿಂದೂ ಧರ್ಮದಲ್ಲಿ ಈಗ ಯಾರಾದರೂ ಬ್ರಾಹ್ಮಣರಾಗಲು ಸಾಧ್ಯವೇ ಎಂದು ಬಸವರಾಜು ಗುಡುಗಿದರು. ಎಲ್ಲಿಯವರೆಗೆ ಬಡತನ ನಿರ್ಮೂಲನೆ ಆಗುವುದಿಲ್ಲವೋ ಅಲ್ಲಿಯವರಿಗೂ ಯಾರಿಗೂ ಮರ್ಯಾದೆ ಸಿಗೋದಿಲ್ಲ. ಈ ವ್ಯವಸ್ಥೆ ಸುಧಾರಣೆಯಾಗುವವರೆಗೂ ಯಾರಿಗೂ ಸ್ವಾಮಿ ಅನ್ನಿಸಿಕೊಳ್ಳಲು ಅರ್ಹತೆ ಇಲ್ಲ ಎಂದು ಟೀಕಿಸಿದರು.
ಕನ್ನಡ ಮಾಧ್ಯಮದಲ್ಲಿ ಓದಿ ಎಂದು ಹೇಳುವ ಸರ್ಕಾರ, ಆ ಮಕ್ಕಳಿಗೆ ಉದ್ಯೋಗ ನೀಡಬೇಕು. ಇಲ್ಲವಾದರೆ ಕನ್ನಡ ಉಳಿಯುವುದಿಲ್ಲ ಎಂದು ಪ್ರಶ್ನಿಸಿದರು. ಶಾಸ್ತ್ರೀಯ ಸ್ಥಾನಮಾನ ಮಾತಿನಲ್ಲಿ ಬಂದಿದೆ. ಕೃತಿಯಲ್ಲಿ ಬರು ಬಗ್ಗೆ ಅನುಮಾನ. ಈ ಸಂಬಂಧದ ಪ್ರಕರಣ ಕೋರ್ಟ್ ನಲ್ಲಿ ಇದೆ. ಸಮಸ್ಯೆಯನ್ನು ಸರ್ಕಾರವೇ ಬಗೆಹರಿಸಬೇಕು. ಶಾಸ್ತ್ರಿಯ ಎಂದರೆ ಪಂಪ, ರನ್ನ, ಪೊನ್ನ ಅಷ್ಟೇ ಅಲ್ಲ. ದಾಸ, ಶಿವಶರಣ ಪರಂಪರೆಯನ್ನೂ ಪರಿಗಣಿಸಬೇಕು ಎಂದರು.
ಇಂದಿನ ಸಂಶೋಧನೆ ಛೇಡಿಸಿದ ಅವರು ಇಂದಿನ ವಿದ್ವಾಂಸರಿಗೆ ಗೊತ್ತಿರುವುದು ಹೊಗಳುವುದು, ಬೈಯುವುದು. ಜನರ ಕಷ್ಟಗಳ ಬಗ್ಗೆ ಕಾವ್ಯ ಬರೆಯುವವನೇ ವಿದ್ವಾಂಸ ಎಂದು ವ್ಯಾಖ್ಯಾನಿಸಿದರು. ಪ್ರೇಮಿಗಳ ದಿನಾಚರಣೆ ಆಚರಿಸುವುದು ಯುವಜನತೆ ವಿವೇಚನೆಗೆ ಬಿಡಿ. ಅವರೇನು ವಿವೇಚನೆ ರಹಿತರಲ್ಲ. ಜಗತ್ತಿನ ಆಗುಹೋಗುಗಳ ಅರಿವಿದೆ. ಯಾವುದು ತಪ್ಪು, ಯಾವುದು ಸರಿ ಎನ್ನುವ ತಿಳುವಳಿಕೆ ಇದೆ. ಈ ವಿಷಯದಲ್ಲಿ ವಿನಾಕಾರಣ ಮೂಗು ತೂರಿಸುವುದು ಯಾವ ಲಾಭಕ್ಕಾಗಿ ಎಂದು ಅವರು ಗಟ್ಟಿಯಾಗಿ ಪ್ರಶ್ನಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಮೈಸೂರು ಕೆಫೆ : ದುರ್ಗದ ಹೆಮ್ಮೆಯ ಸಂಕೇತ
ಮುಗಿಯಿತು ಬಿಸಿಲುಮಳೆ ಜಾತ್ರೆಯಲ್ಲಿ ಧೂಳಹೊಳೆ
ನಾಗರಹಾವು, ದುರ್ಗಾಸ್ತಮಾನಕ್ಕೆ ಭಾರೀ ಬೇಡಿಕೆ












Click it and Unblock the Notifications