ಮೈಸೂರಿನ ಖಾಲಿ ಮನೆಯಲ್ಲಿ ಬೆಂಕಿ : ಹೌಹಾರಿದ ಸ್ಥಳೀಯರು
ಮೈಸೂರಿನ ರಾಮಾನುಜ ಮುಖ್ಯರಸ್ತೆಯ ಖಾಲಿ ಮನೆಯೊಂದರಂದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮಂಡ್ಯ ಜಿಲ್ಲೆಯ ವಿಶ್ವಕರ್ಮ ಚಿನ್ನಾಭರಣ ಮಳಿಗೆಯಲ್ಲಿ ಚಿನ್ನಾಭರಣ ನಗದು ಕಳ್ಳತನವಾಗಿದೆ. ಅತಿಯಾದ ಮದ್ಯಸೇವನೆಯಿಂದ ವ್ಯಕ್ತಿಯೊಬ್ಬ ಮೃತನಾಗಿದ್ದಾನೆ.
ಮೈಸೂರು, ಫೆಬ್ರವರಿ 6 : ಹಲವು ದಿನಗಳಿಂದ ಖಾಲಿಯಿದ್ದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮೈಸೂರಿನ ರಾಮಾನುಜ ಮುಖ್ಯರಸ್ತೆಯಲ್ಲಿ ಜರುಗಿದೆ.
ಮೈಸೂರಿನ ರಾಮಾನುಜ ಮುಖ್ಯ ರಸ್ತೆಯಲ್ಲಿರುವ ಗೌರಮ್ಮ ಎಂಬವರಿಗೆ ಸೇರಿದ ಮನೆಯೊಂದರಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಬೆಂಕಿ ಕಾಣಿಸಿಕೊಂಡು ದಟ್ಟವಾಗಿ ಹೊಗೆ ಆವರಿಸಿತ್ತು. ಗೌರಮ್ಮ ಅವರು 15-20ವರ್ಷಗಳಿಂದ ಆ ಮನೆಯಲ್ಲಿ ವಾಸವಿರದೇ ಇರುವುದರಿಂದ ಮನೆ ಹಾಗೆಯೇ ಖಾಲಿ ಬಿದ್ದಿತ್ತು. ಮನೆಯ ಹಿಂದುಗಡೆ ಕೆಲವರು ಕಸ ಬೀಸಾಡುತ್ತಿರುವುದರಿಂದ ಮನೆಯೊಳಗೂ ಕಸ ಸೇರಿಕೊಂಡಿತ್ತು ಎನ್ನಲಾಗಿದೆ.[ಮಾಜಿ ಸಂಸದನ ಮನೆಯಲ್ಲಿ ಬೆಂಕಿ : ಸೊಸೆ, ಮೊಮ್ಮಕ್ಕಳು ಸಜೀವ ದಹನ]
ಬೆಳಿಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣ ಸರಸ್ವತಿಪುರಂನ ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ನಾಗರಾಜ್ ಅರಸ್ ನೇತೃತ್ವದ ತಂಡ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರೋ ಬೀಡಿ ಸೇದಿ ಎಸೆದಿದ್ದು, ಬೆಂಕಿ ಹೊತ್ತಿರಬೇಕೆಂದು ಶಂಕಿಸಲಾಗಿದೆ.
ಕೆ.ಆರ್.ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಕೆ.ಆರ್. ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಸ್ಥಳದಲ್ಲಿ ಕಸ ಎಸೆಯದಿರುವಂತೆ ತಾಕೀತು ಮಾಡಿದ್ದಾರೆ.
ಚಿನ್ನಾಭರಣ ಮಳಿಗೆಯಲ್ಲಿ ಆಭರಣ,ನಗದು ದೋಚಿದ ಕಳ್ಳರು
ಮೈಸೂರು: ಚಿನ್ನಾಭರಣಗಳ ಮಳಿಗೆಯಲ್ಲಿ ಬೆಳಂಬೆಳಗ್ಗೆಯೇ ಕಳ್ಳರು ತಮ್ಮ ಕೈಚಳಕ ತೋರಿಸಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಹಾಗೂ ರು. 68ಸಾವಿರ ನಗದನ್ನು ಅಪಹರಿಸಿ ಪರಾರಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ಆಲಭುಜನಹಳ್ಳಿ ರಸ್ತೆಯ ವಿಶ್ವಕರ್ಮ ಚಿನ್ನಾಭರಣ ಮಳಿಗೆಯಲ್ಲಿ ಸೋಮವಾರ ಬೆಳಿಗ್ಗೆ ಕಳ್ಳತನ ಜರುಗಿದೆ. ಮಳಿಗೆಯ ಒಳನುಗ್ಗಿದ ಕಳ್ಳರು ಸುಮಾರು 15ಕೆಜಿ ಬೆಳ್ಳಿ, 35ಗ್ರಾಂ ಚಿನ್ನ, ರು. 68ಸಾವಿರ ನಗದನ್ನು ದೋಚಿದ್ದಾರೆ.
ಭಾನುವಾರ ಎಂದಿನಂತೆ ವ್ಯಾಪಾರ ಮುಗಿಸಿ ಮನೆಗೆ ತೆರಳಿದ್ದ ಜ್ಯುವೆಲರಿ ಮಾಲೀಕರು ಸೋಮವಾರ ಬೆಳಗ್ಗೆ ಬಾಗಿಲು ತೆರೆದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ. ಗ್ಯಾಸ್ ಕಟರ್ ನಿಂದ ಬೀಗ ಒಡೆದು ಒಳ ನುಗ್ಗಿರುವ ಕಳ್ಳರು ಬೆಳ್ಳಿ, ಚಿನ್ನ, ನಗದನ್ನು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸಿಪಿಐ ಶಿವಮಲ್ಲು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತಿಯಾದ ಮದ್ಯ ಸೇವನೆಯಿಂದ ಯುವಕ ಸಾವು
ಮೈಸೂರು: ಅತಿಯಾದ ಮದ್ಯ ಸೇವನೆಯಿಂದ ಯುವಕನೊಬ್ಬ ಮೈಸೂರಿನಲ್ಲಿ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಟಿ.ನರಸೀಪುರ ತಾಲೂಕು ಅಸುವಟ್ಟಿಗೆ ಗ್ರಾಮದ ನಿವಾಸಿ ಭರತ್ (20) ಎಂದು ಗುರುತಿಸಲಾಗಿದೆ.
ಈತ ಮೈಸೂರಿನ ಬಾರ್ ಒಂದರಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದು, ಅತಿಯಾಗಿ ಮದ್ಯ ಸೇವಿಸಿ ಆಗ್ರಹಾರದ ಬಳಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.