ಕಲ್ಲಡ್ಕ ಘರ್ಷಣೆ: ರತ್ನಾಕರ್ ಶೆಟ್ಟಿ ಪರಾರಿ, PSI ಸೇರಿ ಮೂವರು ಅಮಾನತು!
ಮಂಗಳೂರು, ಜೂನ್ 15 : ಕಲ್ಲಡ್ಕದಲ್ಲಿ ಖಲೀಲ್ ಹಾಗೂ ರತ್ನಾಕರ್ ಶೆಟ್ಟಿ ಗುಂಪುಗಳ ಮಧ್ಯೆ ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳ ಘಟಕದ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ರತ್ನಾಕರ್ ಶೆಟ್ಟಿ ಪರಾರಿ ಆಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರತ್ನಾಕರ್ ತಪ್ಪಿಸಿಕೊಳ್ಳಬಾರದೆಂದು ಎರಡು ಪಾಳಿಗೆ ತಲಾ ಇಬ್ಬರಂತೆ ನಾಲ್ವರು ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿತ್ತು. ಇದೀಗ ಪೊಲೀಸ್ ಕಾವಲಿನ ನಡುವೆಯೂ ರತ್ನಾಕರ್ ಶೆಟ್ಟಿ ಆಸ್ಪತ್ರೆಯಿಂದ ಪರಾರಿಯಾಗಿರುವುದು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ವಿರುದ್ಧ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಜೂನ್ 14ರ ಗುರುವಾರ ಮೂವರು ಪೋಲೀಸ್ ಹೆಡ್ ಕಾನ್ಸ್ ಟೇಬಲ್ ಗಳಾದ ರಾಧಾಕೃಷ್ಣ, ರಮೇಶ್ ಲಾಮಾನಿ ಮತ್ತು ಪಿಎಸ್ಐ ಒಮಾನಾ ಅವರನ್ನು ರತ್ನಾಕರ್ ಶೆಟ್ಟಿಯಾ ಕಾವಲಿಗಾಗಿ ನೇಮಕಮಾಡಲಾಗಿತ್ತು. ಆದರೆ ಕರ್ತವ್ಯದ ನಿರ್ಲಕ್ಷ್ಯತನದಿದಂದ ಪಿಎಸ್ಐ ಸೇರಿ ಮೂವರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ.
ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದು, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕಲ್ಲಡ್ಕದ ಮಿಥುನ್ ನ ಆಪ್ತನಾದ ರತ್ನಾಕರ್ ಶೆಟ್ಟಿ ಕೂಡಾ ತಲೆಮರೆಸಿಕೊಳ್ಳಲು ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಅಲ್ಲದೆ ರತ್ನಾಕರ್ ಶೆಟ್ಟಿ ಪರಾರಿಗೆ ಸಹಕರಿಸಿದವರನ್ನು ಪತ್ತೆ ಹಚ್ಚಿ ಪೊಲೀಸರು ಸೂಕ್ತ ಕ್ರಮ ಜರಗಿಸಬೇಕೆಂದು ಆಗ್ರಹವೂ ಕೇಳಿ ಬರುತ್ತಿದೆ.