ಕೊಲೆ, ದರೋಡೆಗಾಗಿ ಹೊಂಚು ಹಾಕುತ್ತಿದ್ದ 9 ಖದೀಮರು ಅಂದರ್
ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಹಾಗೂ ದರೋಡೆಗಾಗಿ ಸಂಚು ರೂಪಿಸುತ್ತಿದ್ದ 9 ಕುಖ್ಯಾತ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 2 ಪಿಸ್ತೂಲ್, 7 ಗುಂಡು, ಚೂರಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು, ಫೆಬ್ರವರಿ 20: ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಹಾಗೂ ಶ್ರೀಮಂತ ವ್ಯಕ್ತಿಗಳ ದರೋಡೆಗಾಗಿ ಸಂಚು ರೂಪಿಸುತ್ತಿದ್ದ 9 ಕುಖ್ಯಾತ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ2 ಪಿಸ್ತೂಲ್, ಸಜೀವ ಗುಂಡುಗಳು, ಚೂರಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ಸಿಸಿಬಿ ಪೊಲೀಸರು ಈ 9 ಜನರನ್ನು ಬಂಧಿಸಿದ್ದಾರೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲ್ ನಿಂದ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದ್ದ ಈ ಕಳ್ಳರು ವ್ಯಕ್ತಿಯೊಬ್ಬರ ಕೊಲೆಗೆ ಕಾರು ಮತ್ತು ಆಟೋ ರಿಕ್ಷಾವೊಂದರಲ್ಲಿ ಕುಳಿತು ಸಂಚು ರೂಪಿಸುತ್ತಿದ್ದರು.[ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಸಿದ ಹೆಣ್ಮಕ್ಕಳ ಸಂಖ್ಯೆ!]
ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸುರತ್ಕಲ್ ನ ಸಫ್ವಾನ್, ಹುಸೈನ್, ಮೊಹಮ್ಮದ್ ಫೈಸಲ್ , ಎಮ್ಮೆಕೆರೆಯ ಅಬ್ದುಲ್ ನಾಸಿರ್, ಮುಕ್ಕ ಸುರತ್ಕಲ್ ನ ಸಂಶುದ್ದೀನ್, ಉಳ್ಳಾಲದ ಹಳೆಕೋಟೆಯ ಉಮ್ಮರ್ ಫಾರೂಕ್ ಹಾಗೂ ಮೊಹಮ್ಮದ್ ಅನ್ಸಾರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ 2 ಪಿಸ್ತೂಲ್ ಗಳು, 7 ಸಜೀವ ಮದ್ದುಗುಂಡುಗಳು, 2 ಚೂರಿಗಳು, 3 ಮೊಬೈಲ್ ಫೋನ್ ಗಳು, ಕೆಎ-19 ಎಂಇ-4009 ನೋಂದಣಿಯ ಮಾರುತಿ ಸ್ವಿಪ್ಟ್ ಕಾರು, ಕೆಎ-19 ಎಬಿ-6123 ಬಜಾಜ್ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.[ಕಾಲಿಯಾ ರಫೀಕ್ ನ ಕೊಲ್ಲಿಸಿದ್ದು ನಾನೇ ಎಂದ ದುಬೈನಲ್ಲಿರುವ ಜಿಯಾ]
ಈ ಆರೋಪಿಗಳ ಪೈಕಿ ಸಫ್ವಾನ್ ಹುಸೈನ್ ಎಂಬಾತನ ವಿರುದ್ದ ಕೊಲೆ, ಕೊಲೆ ಯತ್ನ, ಅಪಹರಣ, ದರೋಡೆ, ಕರ್ತವ್ಯ ನಿರತ ಪೊಲೀಸರ ಹಲ್ಲೆ ಮುಂತಾದ ಒಟ್ಟು 23 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಜಾಮೀನು ಪಡೆದು 2 ತಿಂಗಳ ಹಿಂದಷ್ಟೆ ಈತ ಬಿಡುಗಡೆಗೊಂಡಿದ್ದ.
ಇನ್ನು ಮೊಹಮ್ಮದ್ ಫೈಸಲ್, ಸಂಶುದ್ದೀನ್, ಅಬ್ದುಲ್ ನಾಸೀರ್ ಯಾನೆ ಡಾನ್ ನಾಸೀರ್, ಉಮರ್ ಫಾರೂಕ್ ಯಾನೆ ಮಾನಾ ಫಾರೂಕ್ ವಿರುದ್ಧವೂ ಕೊಲೆ ಯತ್ನ, ದರೋಡೆ, ಅಪಹರಣ, ಜೈಲ್ ನಲ್ಲಿ ಗಲಾಟೆ ಮುಂತಾದ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗಷ್ಟೆ ಜೈಲ್ ನಿಂದ ಬಿಡುಗಡೆಗೊಂಡಿದ್ದರು. ಮೊಹಮ್ಮದ್ ಅನ್ಸಾರ್ ನ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.