ಮಂಗಳೂರು : ಕಾರು, ಸರ್ಕಾರಿ ಬಸ್ ಡಿಕ್ಕಿ, 3 ಸಾವು
ಮಂಗಳೂರು, ಜೂನ್ 13 : ಮಾಣಿ-ಮೈಸೂರು ರಾಜ್ಯ ಹೆದ್ದಾರಿ ನಡುವೆ ಕೋಡಾಜೆ ಎಂಬಲ್ಲಿ ಕಾರು ಮತ್ತು ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 7 ಮಂದಿ ಗಾಯಗೊಂಡಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.
ಭಾನುವಾರ ಸಂಜೆ ಈ ಅಪಘಾತ ನಡೆದಿದೆ. ಮಾರುತಿ ಓಮಿನಿ ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡುತ್ತಿದ್ದ ವೇಳೆ ಎದುರಿನಿಂದ ಬಂದ ಕೆಎಸ್ಆರ್ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಓಮಿನಿಯಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. [ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]
ಮೃತಪಟ್ಟವರನ್ನು ಓಮಿನಿ ಚಾಲಕ ತೇಜಸ್ (22), ವರ್ಷಾ (19) ಮತ್ತು ಸಂಧ್ಯಾ (21) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 7 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೋಭಾ, ಸುನಿಲ್, ಯಕ್ಷಿತ್, ನಮಿತಾ, ಪವಿತ್ರಾ, ಶರಣ್ಯಾ, ನಯನಾ ಗಾಯಗೊಂಡವರು. ಇವರಲ್ಲಿ ಶೋಭಾ, ಸುನಿಲ್, ಯಕ್ಷಿತ್ ಸ್ಥಿತಿ ಗಂಭೀರವಾಗಿದೆ.
ಓಮಿನಿಯಲ್ಲಿದ್ದ ಎಲ್ಲರೂ ಪುತ್ತೂರಿಗೆ ಪ್ರಯಾಣಿಸುತ್ತಿದ್ದರು. ಸಂಜೀವ್ ಶೆಟ್ಟಿ ಜವಳಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಭಾನುವಾರ ಮಧ್ಯಾಹ್ನ ಅಂಗಡಿಗೆ ರಜೆ ಇದ್ದ ಕಾರಣ, ಪಣೋಲಿಬೈಲು ದೈವಸ್ಥಾನದಲ್ಲಿ ಅಗೇಲು ಸೇವೆ ನೀಡಲು ಹೊರಟಿದ್ದರು.