ಕರ್ನಾಟಕದ ಪೊಲೀಸರು ಸಮೂಹಸನ್ನಿಗೊಳಗಾಗಿದ್ದಾರಾ?
ಬೆಂಗಳೂರು, ಜುಲೈ 20 : ಕರ್ನಾಟಕದ ಪೊಲೀಸರು ಸಮೂಹಸನ್ನಿಗೊಳಗಾಗಿದ್ದಾರಾ? ವ್ಯವಸ್ಥೆಗೆ ರೋಸತ್ತುಹೋಗಿರುವ ಪೊಲೀಸ್ ಅಧಿಕಾರಿಗಳು ಒಬ್ಬರ ಹಿಂದೊಬ್ಬರಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅವರ ಈ ಹೀನಾಯ ಕೃತ್ಯದ ಹಿಂದಿನ ಸತ್ಯ ಏನಿದೆಯೋ ಏನೋ. ಆದರೆ, ಕೆಟ್ಟ ಟ್ರೆಂಡ್ ಒಂದಂತೂ ಶುರುವಾಗಿರುವುದು ಸ್ಪಷ್ಟ.
ಕೆಲ ವಾರಗಳ ಹಿಂದೆ, ಜುಲೈ 5ರಂದು ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಬೆಳಗಾವಿ ಜಿಲ್ಲೆಯ ಮುರಗೋಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ನಂತರ ಎರಡೇ ದಿನಗಳಲ್ಲಿ, ಜುಲೈ 7ರಂದು ಮಂಗಳೂರು ಡಿವೈಎಸ್ಪಿ ಎಂಕೆ ಗಣಪತಿ ಸಮವಸ್ತ್ರದಲ್ಲಿಯೇ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡರು.
ಈಗ ಬೆಂಗಳೂರಿನಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ರೂಪಾ ತಂಬದ್ ಅವರು, ಇನ್ಸ್ಪೆಕ್ಟರ್ ಅವರೊಂದಿಗೆ ಜಗಳವಾಡಿಕೊಂಡು 27 ಪ್ಯಾರಾಸಿಟಮೋಲ್ ಮಾತ್ರೆ ಸೇವಿಸಿ ಜೀವ ನೀಗಿಕೊಳ್ಳಲು ಯತ್ನಿಸಿ ವಿಫಲರಾಗಿದ್ದಾರೆ. ಅದೃಷ್ಟವಶಾತ್ ಬದುಕುಳಿದಿದ್ದಾರೆ.
Read also : ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ ಅನುಪಮಾ ಶೆಣೈ
ಇವರೆಲ್ಲರ ನಡುವೆ ಮೆಚ್ಚುಗೆಯಾಗಬೇಕಾದದ್ದು ಕೂಡ್ಲಿಗಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ಅವರು ನಡೆದುಕೊಂಡ ರೀತಿ. ಅವರು ಕೂಡ, ಪೊಲೀಸ್ ವ್ಯವಸ್ಥೆಯ ವಿರುದ್ಧ ಬೇಸತ್ತಿದ್ದರು, ಸಾಕಷ್ಟು ನೋವು ಅನುಭವಿಸಿದ್ದರು. ಆದರೆ, ಇತರರಿಗೆ ಪಾಠ ಕಲಿಸಬೇಕೆಂದು ಆತ್ಮಹತ್ಯೆಗೆ ಜೀವವೊಡ್ಡಿಕೊಳ್ಳಲಿಲ್ಲ. ಬದಲಿಗೆ ಹೋರಾಟಕ್ಕಿಳಿದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ ಪರಮೇಶ್ವರ, ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಬೆಂಗಳೂರು ಪೊಲೀಸ್ ಆಯುಕ್ತ ಎನ್ಎಸ್ ಮೇಘರಿಕ್ ಅವರಿಂದ ಹಿಡಿದು ಇಡೀ ಕರ್ನಾಟಕದ ಜನತೆಗೆ ಗೊತ್ತಿರುವ ಸಂಗತಿ.
Read also : ಚಿಕ್ಕಮಗಳೂರು ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ
ಕೆಲ ದಿನಗಳ ಹಿಂದೆ ಇಡೀ ಪೊಲೀಸ್ ಇಲಾಖೆಯೇ ಪೊಲೀಸ್ ಸರಕಾರದ ವಿರುದ್ಧ ದಂಗೆಯೆದ್ದಿತ್ತು. ಅವರ ಪ್ರತಿಭಟನೆಯನ್ನು ಎಸ್ಮಾ ಜಾರಿ ಮಾಡುವುದಾಗಿ ಬೆದರಿಸಿ ಹತ್ತಿಕ್ಕಲಾಯಿತಾದರೂ, ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನವಾದರೂ ಮಾಡಲಾಯಿತು.
ಆದರೆ, ಈಗೇನಾಗುತ್ತಿದೆ? ತಮಗಾಗುತ್ತಿರುವ ಸಂಕಟ, ಅವಮಾನವನ್ನು ಇಲಾಖೆಯೆದಿರು ಅಥವಾ ನ್ಯಾಯಾಂಗದೆದಿರುವ ತೆರೆದಿಡುವ ಬದಲು ಹಿರಿಯ ಪೊಲೀಸ್ ಅಧಿಕಾರಿಗಳೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಹೇಡಿಗಳು ಮಾಡಿಕೊಳ್ಳುತ್ತಿರುವ ಕೆಲಸವಲ್ಲದೆ ಮತ್ತೇನಿಲ್ಲ.
Read also : ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline
ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವೆ? ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತೊಂದರೆ ಕೊಡುತ್ತಿರುವವರಿಗೆ ಪಾಠ ಕಲಿಸಲು ಸಾಧ್ಯವೆ? ಈ ರೀತಿ ಮಾಡಿಕೊಳ್ಳುತ್ತಿರುವುದರಿಂದ ಅವರ ಕುಟುಂಬ ಎಂಥ ಸ್ಥಿತಿಗೆ ತಲುಪುತ್ತದೆ ಎಂಬುದನ್ನು ಇವರು ಕಿಂಚಿತ್ತಾದರೂ ಚಿಂತಿಸಿದ್ದಾರೆಯಾ?
ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ದರಾಮಯ್ಯ ಸರಕಾರ ಏನಾದರೂ ಕಾರ್ಯಕ್ರಮ ಹಾಕಿಕೊಂಡಿದೆಯಾ? ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸಿದರೆ ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ, ತಕ್ಷಣ ಸಮಸ್ಯೆಗಳ ಬೇರುಗಳನ್ನು ಹುಡುಕಿ ಪರಿಹಾರ ಕಂಡುಹಿಡಿಯುವ ಪ್ರಯತ್ನವಾದರೂ ಮಾಡಬಹುದಲ್ಲವೆ?
Read also : ಆತ್ಮಹತ್ಯೆಗೆ ಯತ್ನಿಸಿದ ಪಿಎಸ್ ಐ ರೂಪಾ ಆರೋಗ್ಯದಲ್ಲಿ ಚೇತರಿಕೆ
ಅನುಪಮಾ ಶೆಣೈ ರಾಜೀನಾಮೆ ಬಿಸಾಕಿದ ನಂತರ, ಕಲ್ಲಪ್ಪ ಹಂಡಿಭಾಗ್ ಮತ್ತು ಎಂಕೆ ಗಣಪತಿ ನೇಣಿಗೆ ಶರಣಾದ ನಂತರ ಇಂತಹ ಯಾವುದೇ ಪ್ರಯತ್ನವನ್ನೂ ಗೃಹ ಇಲಾಖೆ ಮಾಡಿದಂತೆ ಕಾಣಿಸುವುದಿಲ್ಲ. ಇನ್ನು ವಿರೋಧ ಪಕ್ಷದವರು ಅವರ ಕುಟುಂಬವನ್ನು ಭೇಟಿಯಾಗಿ, ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆಯೇ ಹೊರತು ಮತ್ತಾವುದರ ಬಗ್ಗೆಯೂ ಚಿಂತಿಸುತ್ತಿಲ್ಲ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋದಲ್ಲಿರುವ ಮಾಹಿತಿ ಪ್ರಕಾರ, 2003ರಿಂದ 2013ರ ವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 122 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2003ರಲ್ಲಿ 09, 2004ರಲ್ಲಿ 09, 2005ರಲ್ಲಿ 12, 2006ರಲ್ಲಿ 05, 2007ರಲ್ಲಿ 24, 2008ರಲ್ಲಿ 04, 2009ರಲ್ಲಿ 05, 2010ರಲ್ಲಿ 13, 2011ರಲ್ಲಿ 09, 2012ರಲ್ಲಿ 17 ಮತ್ತು 2013ರಲ್ಲಿ 15 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದು ಹೀಗೇ ಮುಂದುವರಿದರೆ, ಇನ್ನೂ ಹಲವಾರು ಪೊಲೀಸ್ ಅಧಿಕಾರಿಗಳು, ಪೇದೆಗಳು ಆತ್ಮಹತ್ಯೆಯಂತಹ ಹೇಯ ಕೃತ್ಯಕ್ಕೆ ಕೈಹಾಕಿದರೂ ಅಚ್ಚರಿಯಿಲ್ಲ. ಇದು ಮರುಕಳಿಸುವ ಮುನ್ನವೇ ಸರಕಾರ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.